ಬೆಂಗಳೂರು: ಸ್ನೇಹಿತನ ಅಕ್ಕನನ್ನು ಪ್ರೀತಿಸಿ ಸಲುಗೆ ಬೆಳೆಸಿದ್ದ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ (32) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಡಿ. 5ರಂದು ರಾತ್ರಿ ಭೈರತಿ ಕ್ರಾಸ್ ಬಳಿ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಕಾರ್ತಿಕ್, ಬಾಣಸವಾಡಿ ಸ್ಪೆಷಲಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನೀಡಿರುವ ದೂರು ಆಧರಿಸಿ, ಆರೋಪಿಗಳಾದ ರಾಜಕುಮಾರ್, ಅಭಿಷೇಕ್, ಗೌತಮ್ ಹಾಗೂ ಪ್ರಶಾಂತ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಆಟೊ ಚಾಲಕ ಕಾರ್ತಿಕ್ ಕಳ್ಳತನ ಪ್ರಕರಣದ ಆರೋಪಿಯೂ ಆಗಿದ್ದರು. ಐದು ವರ್ಷಗಳ ಹಿಂದೆ ಅವರಿಗೆ ರಾಜಕುಮಾರ್ ಪರಿಚಯವಾಗಿತ್ತು. ಸ್ನೇಹಿತನ ಮನೆಗೆ ಆಗಾಗ ಹೋಗಿ ಬರುತ್ತಿದ್ದ ಕಾರ್ತಿಕ್, ಅವರ ಅಕ್ಕನ ಜೊತೆ ಸ್ನೇಹ ಬೆಳೆಸಿ ಪ್ರೀತಿಸಲಾರಂಭಿಸಿದ್ದರು. ಇಬ್ಬರ ನಡುವೆಯೂ ಸಲುಗೆಯೂ ಇತ್ತು. ಆಗಾಗ ಭೇಟಿಯಾಗುತ್ತಿದ್ದಅವರಿಬ್ಬರು ಜೊತೆಯಲ್ಲೇ ಸುತ್ತಾಡುತ್ತಿದ್ದರು.’
‘ವಿಷಯ ಗೊತ್ತಾಗುತ್ತಿದ್ದಂತೆ ಕೋಪಗೊಂಡಿದ್ದ ರಾಜಕುಮಾರ್, ಸಹೋದರಿ ತಂಟೆಗೆ ಹೋಗದಂತೆ ತಾಕೀತು ಮಾಡಿದ್ದರು. ಅಷ್ಟಾದರೂ ಕಾರ್ತಿಕ್, ಸಲುಗೆ ಮುಂದುವರಿಸಿದ್ದರು. ಆ ಸಂಬಂಧ ಹಲವು ಬಾರಿ ಜಗಳವೂ ಆಗಿತ್ತು’ ಎಂದು ಪೊಲೀಸರು ತಿಳಿಸಿದರು.
‘ಕಾರ್ತಿಕ್ಗೆ ಬುದ್ದಿ ಕಲಿಸಲು ರಾಜಕುಮಾರ್ ಹಾಗೂ ಆತನ ಸ್ನೇಹಿತರು ಸಂಚು ರೂಪಿಸಿದ್ದರು. ಕಾರ್ತಿಕ್ ಅವರ ಆಟೊ ಅಡ್ಡಗಟ್ಟಿದ್ದ ಆರೋಪಿಗಳು, ಕಣ್ಣಿಗೆ ಖಾರದ ಪುಡಿ ಎರಚಿ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದರು. ಚಾಕುವಿನಿಂದ ತೊಡೆ, ಸೊಂಟ ಹಾಗೂ ಬೆನ್ನಿಗೆ ಇರಿದು ಆರೋಪಿಗಳು ಪರಾರಿಯಾಗಿದ್ದರು. ಸ್ಥಳೀಯರು ಹಾಗೂ ಸಂಬಂಧಿಕರೇ, ಕಾರ್ತಿಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದೂ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.