ಬೆಂಗಳೂರು:ನಗರದ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ವಿಚಾರಣೆ ಆರಂಭಿಸಲಾಯಿತು.
ಜಿಲ್ಲೆಯ ಮ್ಯಾಜಿಸ್ಟ್ರೇಟ್ ಆದ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ವಿಚಾರಣೆ ನಡೆಸಿದರು. ಈ ವೇಳೆ 30 ಮಂದಿ ತಮ್ಮ ಅಹವಾಲು ಸಲ್ಲಿಸಿದರು.
ಗಲಭೆಯಲ್ಲಿ ತಮ್ಮ ವಾಹನ ಸುಟ್ಟುಹೋಗಿದೆ ಎಂದು ಕೆಲವರು ದೂರಿದರೆ, ಪೊಲೀಸರು ತಮ್ಮವರನ್ನು ವಿನಾಕಾರಣ ಬಂಧಿಸಿದ್ದಾರೆ, ಸಂಬಂಧಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಉಳಿದವರು ಆರೋಪಿಸಿದರು.
ಹೇಳಿಕೆಗಳನ್ನು ಅಫಿಡವಿಟ್ ಮೂಲಕ ಸೆ.8ರೊಳಗೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚಿಸಿದರು ಮತ್ತು ಮನವಿದಾರರು ಅಂದು ಖುದ್ದು ಹಾಜರಿರಬೇಕು ಎಂದೂ ಸೂಚಿಸಿದರು. ಸೆ.8ಕ್ಕೆ ವಿಚಾರಣೆ ಮುಂದೂಡಲಾಯಿತು.
ಜಿಲ್ಲಾ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಿ.ಎಸ್. ರೇವಣಕರ್, ಉಪವಿಭಾಗಾಧಿಕಾರಿ ಮತ್ತಿತರರು ಕಲಾಪದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.