ಬೆಂಗಳೂರು: ‘ಮಾಜಿ ಸಚಿವ ಬಿ.ಬಸಲಿಂಗಪ್ಪ ಅವರ ಸಾಮಾಜಿಕ ಚಿಂತನೆ, ದೂರದೃಷ್ಟಿ ಕುರಿತು ಶೈಕ್ಷಣಿಕ ಸಂಶೋಧನಾ ನೆಲೆಗಟ್ಟಿನಲ್ಲಿ ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು’ ಎಂದು ಬೆಂಗಳೂರು ವಿಶ್ವವಿದ್ಯಾಲಯ ಬಿ.ಬಸವಲಿಂಗಪ್ಪ ಅಭಿವೃದ್ಧಿ ಅಧ್ಯಯನ ಸಂಸ್ಥೆ ಸಂಯೋಜಕ ಬಿ.ಎಲ್.ಮುರಳೀಧರ್ ಸಲಹೆ ನೀಡಿದರು.
ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿ.ಬಸವಲಿಂಗಪ್ಪ ಅವರ 33ನೇ ಮಹಾಪರಿನಿಬ್ಬಾಣ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕರ್ನಾಟಕದಲ್ಲಿ ಬಸವಲಿಂಗಪ್ಪ ಅವರು ಮಲ ಹೊರುವ ಪದ್ಧತಿ ನಿಷೇಧಿಸಿ, ಪೌರ ಕಾರ್ಮಿಕ ಎಂದು ಘೋಷಿಸಿದರು. ಭೂ ಸುಧಾರಣೆ ನೀತಿಗಳನ್ನು ಅನುಷ್ಠಾನಗೊಳಿಸಿ ದಲಿತರಿಗೆ ವಸತಿ ಸೌಲಭ್ಯ ಕಲ್ಪಿಸಿದರು. ಬಿಸಿಯೂಟ ಯೋಜನೆ ಜಾರಿಗೆ ತಂದರು. ಆರ್ಥಿಕವಾಗಿ ಹಿಂದುಳಿದ ಪೋಷಕರಿಗೆ ಆರ್ಥಿಕ ಸಹಾಯ ಮಾಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡಿದರು. ಬೂಸಾ ಚಳವಳಿ ಮೂಲಕ ದಲಿತ ಚಳವಳಿಗೆ ಹೊಸ ದಿಕ್ಕನ್ನು ನೀಡಿದ ಕ್ರಾಂತಿಕಾರಿ ಕ್ರಮಗಳ ಕುರಿತು ಅಧ್ಯಯನ ಆಗಬೇಕು’ ಎಂದರು.
ಕುಲಪತಿ ಡಾ.ಎಸ್.ಎಂ.ಜಯಕರ ಮಾತನಾಡಿ, ‘ಅಧ್ಯಯನ ಕೇಂದ್ರಗಳು ಜಯಂತಿಗಳಿಗೆ ಸೀಮಿತವಾಗಿರದೆ ಸಂಶೋಧನೆ ಮತ್ತು ಅಧ್ಯಯನಕ್ಕೆ ಪೂರಕವಾಗಿರಬೇಕು. ಬಸವಲಿಂಗಪ್ಪ ಅವರ ಪುತ್ಥಳಿ ನಿರ್ಮಾಣ ಮತ್ತು ಗ್ರಂಥಾಲಯ ಸೇರಿ ಅಧ್ಯಯನ ಕೇಂದ್ರದ ಪುನಶ್ಚೇತನಕ್ಕೆ ಒತ್ತು ನೀಡಲಾಗುವುದು’ ಎಂದು ತಿಳಿಸಿದರು.
ಕುಲಸಚಿವರಾದ ಕೆ.ಟಿ.ಶಾಂತಲಾ, ಮುಖಂಡ ಬಿ.ಗೋಪಾಲ್, ಸಿಂಡಿಕೇಟ್ ಸದಸ್ಯ ಬಿ.ಡಿ. ಗಂಗರಾಜ್, ಕೇಂದ್ರದ ಹಿಂದಿನ ಸಂಯೋಜಕ.ಟಿ.ಹೆಚ್ ಮೂರ್ತಿ, ಕ್ಷೇಮಾಭಿವೃದ್ಧಿ ನಿರ್ದೇಶಕ ಪಿ.ಸಿ.ನಾಗೇಶ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷಾಧಿಕಾರಿ ಪಿ.ಜಿ.ಕೃಷ್ಣಮೂರ್ತಿ, ಚಂದ್ರು ಪೆರಿಯಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.