ADVERTISEMENT

ದೀಪಾವಳಿ ಸಡಗರ: ಬೆಂಗಳೂರು ನಗರದಲ್ಲಿ ಬೆಳಕಿನ ಲೋಕ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 21:30 IST
Last Updated 3 ನವೆಂಬರ್ 2021, 21:30 IST
ಮೂರು ದಿನಗಳ ಬೆಳಕಿನ ಹಬ್ಬ ನರಕ ಚತುರ್ದಶಿಯೊಂದಿಗೆ ಬುಧವಾರ ಆರಂಭವಾಯಿತು.
ಮೂರು ದಿನಗಳ ಬೆಳಕಿನ ಹಬ್ಬ ನರಕ ಚತುರ್ದಶಿಯೊಂದಿಗೆ ಬುಧವಾರ ಆರಂಭವಾಯಿತು.   

ಬೆಂಗಳೂರು: ಮೂರು ದಿನಗಳ ಬೆಳಕಿನ ಹಬ್ಬ ನರಕ ಚತುರ್ದಶಿಯೊಂದಿಗೆ ಬುಧವಾರ ಆರಂಭವಾಯಿತು. ಕೆಲವರು ನೀರು ತುಂಬಿಸುವ ಮೂಲಕ, ಮತ್ತೆ ಕೆಲವರು ಎಣ್ಣೆ ಸ್ನಾನದ ಮೂಲಕ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. ಸಂಜೆ ನಂತರ ಮನೆ, ಮನೆಗಳಲ್ಲಿ ಕಂಗೊಳಿಸಿದ ದೀಪಗಳು ಬೆಳಕಿನ ರಂಗಿನ ಲೋಕವನ್ನು ಸೃಷ್ಟಿಸಿದವು.‌ ಹೊಸ್ತಿಲು, ಕಿಟಕಿ, ಕಾಂಪೌಂಡ್‌ ಮೇಲೆಯೂ ವಿವಿಧ ವಿನ್ಯಾಸದ ದೀಪಗಳನ್ನು ಹೂವಿನ ಅಲಂಕಾರದ ಜೊತೆಗೆ ಹಚ್ಚಿ ಸಂಭ್ರಮಿಸಿದರು.

ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಬೆಳಗ್ಗೆಯಿಂದಲೂ ಭಕ್ತರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಗುರುವಾರದ ಅಮಾವಾಸ್ಯೆಯಂದು ಲಕ್ಷ್ಮಿ ಪೂಜೆಗೂ ಕೆಲವರು ಸಜ್ಜಾಗುತ್ತಿದ್ದರು. ಬುಧವಾರ ಸಂಜೆ ಬಳಿಕ ಪಟಾಕಿ ಸದ್ದು ಕೂಡಾ ಅಲ್ಲಲ್ಲಿ ಕೇಳಿಬಂತು.

ಗುರುವಾರ ಮತ್ತು ಶುಕ್ರವಾರವೂ ದೀಪಾವಳಿ ಹಬ್ಬ ಇರುವುದರಿಂದ ಕೆಲವರು ಬುಧವಾರವೂಹಬ್ಬಕ್ಕೆ ಬೇಕಾದ ಪಟಾಕಿ, ದೀಪಗಳ ಖರೀದಿಯಲ್ಲಿ ತೊಡಗಿದ್ದರು. ಮಣ್ಣಿನ ದೀಪಗಳಿಗೆ ಬೇಡಿಕೆ ಇತ್ತು. ಪೂಜಾ ಸಾಮಗ್ರಿಗಳ ಜತೆಗೆ ಬಾಳೆಕಂದು, ಬೂದುಗುಂಬಳ, ಹೂವು, ನಿಂಬೆಹಣ್ಣುಗಳ ಮಾರಾಟವೂ ಜೋರಾಗಿತ್ತು.

ADVERTISEMENT

ದೀಪಾವಳಿ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಮಾರಾಟಕ್ಕೆಂದೇ ಬಡಾವಣೆಗಳಲ್ಲಿ ಮಿನಿ ಮಾರುಕಟ್ಟೆಗಳು ತೆರೆದುಕೊಂಡಿದ್ದವು. ಹೂವು, ಹಣ್ಣಿನ ದರಗಳೂ ಅಷ್ಟೇನು ದುಬಾರಿ ಆಗಿರಲಿಲ್ಲ. ಸೇವಂತಿಗೆ, ಚೆಂಡು ಹೂವುಗಳನ್ನು ಹೆಚ್ಚಾಗಿಯೇ ಜನ ಖರೀದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.