ಬೆಂಗಳೂರು: ಹೈದರಾಬಾದ್ನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬಂದಿಳಿದಿದ್ದ ಬ್ಯಾಂಕ್ ನೌಕರರೊಬ್ಬರ ಮೊಬೈಲ್ ಅನ್ನು ಕಳ್ಳರು ಕಿತ್ತೊಯ್ದಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಚುಚ್ಚಘಟ್ಟ ಮುಖ್ಯರಸ್ತೆಯ ನಿವಾಸಿ ಗೋಪಾಲಕೃಷ್ಣ ಅವರು ಬುಧವಾರ (ನ. 8) ಬೆಳಿಗ್ಗೆ ನಡೆದಿರುವ ಕಳ್ಳತನ ಸಂಬಂಧ ದೂರು ನೀಡಿದ್ದಾರೆ. ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಹೈದರಾಬಾದ್ನಿಂದ ಮಂಗಳವಾರ ಹೊರಟಿದ್ದ ದೂರುದಾರ, ಬುಧವಾರ ಬೆಳಿಗ್ಗೆ 5.30 ಗಂಟೆ ಸುಮಾರಿಗೆ ಆನಂದರಾವ್ ವೃತ್ತ ಸಮೀಪದಲ್ಲಿ ನಿಂತಿದ್ದರು. ಮನೆಗೆ ಹೋಗಲು ಕ್ಯಾಬ್ ಕಾಯ್ದಿರಿಸುತ್ತಿದ್ದರು. ಇದೇ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು, ದೂರುದಾರರ ₹ 33 ಸಾವಿರ ಮೌಲ್ಯದ ಮೊಬೈಲ್ ಕಿತ್ತಕೊಂಡು ಪರಾರಿಯಾಗಿದ್ದಾರೆ’ ಎಂದು ತಿಳಿಸಿದರು.
ಗಸ್ತು ಬಿಗಿಗೊಳಿಸಲು ಆಗ್ರಹ: ನಿತ್ಯವೂ ನಸುಕಿನಲ್ಲಿ ನಗರದ ಹಲವು ಪ್ರದೇಶಗಳಲ್ಲಿ ಕಳ್ಳತನ ಹಾಗೂ ಸುಲಿಗೆ ಪ್ರಕರಣಗಳು ವರದಿಯಾಗುತ್ತಿದ್ದು, ಪೊಲೀಸರು ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.