ADVERTISEMENT

ಪೂಜೆ ಮಾಡುವುದು ಮುಖ್ಯವಲ್ಲ: ಬಿ.ಜಯಶ್ರೀ ಅಭಿಮತ

ಬಸವ ಜಯಂತಿ

​ಪ್ರಜಾವಾಣಿ ವಾರ್ತೆ
Published 12 ಮೇ 2019, 18:53 IST
Last Updated 12 ಮೇ 2019, 18:53 IST
ಜರಗನಹಳ್ಳಿ ಶಿವಶಂಕರ್, ಎ.ಎಸ್.ಕಿರಣ್ ಕುಮಾರ್, ನಾ.ಮೊಗಸಾಲೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂ.ಮೋಹನ್‌ ಆಳ್ವ, ಯದುವೀರ ಕೃಷ್ಣದತ್ತ ಒಡೆಯರ್, ಬಸವ ವೇದಿಕೆಯ ಉಪಾಧ್ಯಕ್ಷ ಎಸ್.ಷಡಕ್ಷರಿ, ಜಪಾನಂದ ಸ್ವಾಮೀಜಿ ಮತ್ತು ಸಿದ್ಧಲಿಂಗ ಸ್ವಾಮೀಜಿ ಇದ್ದಾರೆ – -ಪ್ರಜಾವಾಣಿ ಚಿತ್ರ
ಜರಗನಹಳ್ಳಿ ಶಿವಶಂಕರ್, ಎ.ಎಸ್.ಕಿರಣ್ ಕುಮಾರ್, ನಾ.ಮೊಗಸಾಲೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂ.ಮೋಹನ್‌ ಆಳ್ವ, ಯದುವೀರ ಕೃಷ್ಣದತ್ತ ಒಡೆಯರ್, ಬಸವ ವೇದಿಕೆಯ ಉಪಾಧ್ಯಕ್ಷ ಎಸ್.ಷಡಕ್ಷರಿ, ಜಪಾನಂದ ಸ್ವಾಮೀಜಿ ಮತ್ತು ಸಿದ್ಧಲಿಂಗ ಸ್ವಾಮೀಜಿ ಇದ್ದಾರೆ – -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪೂಜೆ ಮಾಡುವುದು ಮುಖ್ಯವಲ್ಲ. ಕೆಲಸವನ್ನು ಕಾಯ–ವಾಚಾ–ಮನಸಾದಿಂದ ಮಾಡಿದರೆ ಅದುವೇ ದೊಡ್ಡ ಪೂಜೆ’ ಎಂದು ರಂಗಕರ್ಮಿ ಬಿ.ಜಯಶ್ರೀ ಹೇಳಿದರು.

ಬಸವ ವೇದಿಕೆಯು ಭಾನುವಾರ ಆಯೋಜಿಸಿದ್ದ ‘ಬಸವ ಜಯಂತಿ ಹಾಗೂ ಬಸವಶ್ರೀ, ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಅವರು ಮಾತನಾಡಿದರು.

‘ನಾವು ಶರಣರ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಅವರ ತತ್ವಾದರ್ಶಗಳನ್ನು ಪಾಲಿಸುವುದಿಲ್ಲ. ಪೂಜೆ–ಪುನಸ್ಕಾರಗಳಿಗಿಂತ ಕಾಯಕವೇ ಮುಖ್ಯ. ಇದನ್ನು ಶರಣರು ಸಹ ಪ್ರತಿಪಾದಿಸಿದ್ದಾರೆ’ ಎಂದರು.

ADVERTISEMENT

ಮೂಡುಬಿದಿರೆಯ ಆಳ್ವಾಸ್‌ ಪ್ರತಿಷ್ಠಾನದ ಅಧ್ಯಕ್ಷ ಎಂ.ಮೋಹನ ಆಳ್ವ, ‘ಬಸವಣ್ಣ ಅವರು ಭಕ್ತಿ ಮತ್ತು ಕಾಯಕ ತತ್ವ ಪ್ರತಿಪಾದಿಸಿದ್ದಾರೆ. ಈ ಎರಡಕ್ಕೂ ಸಂಬಂಧವಿದೆ. ಕೇವಲ ಪೂಜೆ ಮಾಡುವುದರಿಂದ ಜೀವನ ಹಸನಾಗುವುದಿಲ್ಲ. ಬಸವ ತತ್ವವನ್ನು ಜಾತಿ, ಮತ, ದೇಶಕ್ಕೆ ಸೀಮಿತಗೊಳಿಸದೆ ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ, ‘ವಚನ ಸಾಹಿತ್ಯವನ್ನು ಬೇರ್ಪಡಿಸಿದರೆಕನ್ನಡ ಸಾಹಿತ್ಯದ ಘನತೆ, ಗೌರವವೇ ಕಡಿಮೆ ಆಗುತ್ತದೆ. ವಚನಗಳು ಸಾಹಿತ್ಯದ ಪ್ರಮುಖ ಭಾಗವಾಗಿವೆ. ವಚನಗಳನ್ನು ಓದಿ ಪಚನ ಮಾಡಿಕೊಳ್ಳಬೇಕು’ ಎಂದು ಸಂದೇಶ ನೀಡಿದರು.

ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ನಾ.ಮೊಗಸಾಲೆ, ‘ಬಸವಣ್ಣ ಅವರು ಮನೋ ಮತ್ತು ಸಮಾಜ ವಿಜ್ಞಾನಿಯಾಗಿ ಅಲಿಖಿತ ಸಂವಿಧಾನ ರಚಿಸಿದ್ದಾರೆ. ಅದು ಈಗಿನ ಸಂವಿಧಾನಕ್ಕಿಂತ ಒಂದು ಮೆಟ್ಟಿಲು ಮೇಲಿದೆ. ವಿಷಾದವೆಂದರೆ ನಾವು ಬಸವಣ್ಣರ ಸಂವಿಧಾನಕ್ಕೆ ಅಪಚಾರ ಮಾಡುತ್ತಾ ಸಾಗಿದ್ದೇವೆ’ ಎಂದರು.

ಎ.ಎಸ್.ಕಿರಣ್‌ ಕುಮಾರ್‌ ಅವರಿಗೆ ‘ಬಸವಶ್ರೀ’ ಹಾಗೂ ಕವಿ ಜರಗನಹಳ್ಳಿ ಶಿವಶಂಕರ್‌ ಮತ್ತು ನಾ.ಮೊಗಸಾಲೆ ಅವರಿಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತ್ಯಶ್ರೀ ಪ್ರಶಸ್ತಿಯು ₹ 10 ಸಾವಿರ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.