
ಸಂಕ್ರಾಂತಿ ಹಿನ್ನಲೆಯಲ್ಲಿ ಧಾನ್ಯದ ರಾಶಿಗೆ ಪೂಜೆ ಮಾಡಿರುವುದು.
ಚಿತ್ರ: ಪ್ರಜಾವಾಣಿ
ರಾಜರಾಜೇಶ್ವರಿನಗರ: ಬೆಂಗಳೂರು ದಕ್ಷಿಣ ತಾಲ್ಲೂಕು ಸೋಂಪುರ ಬಳಿಯ ವರಹಾಸಂದ್ರ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಡಲೆಕಾಯಿ ಪರಿಷೆ, ಬಸವೇಶ್ವರಸ್ವಾಮಿ ಜಾತ್ರಾಮಹೋತ್ಸವ, ರಥೋತ್ಸವ ಸಂಕ್ರಾಂತಿ ಹಬ್ಬದಂದು ನಡೆಯಲಿದೆ.
ಜನವರಿ 15ರಂದು ನಡೆಯುವ ಗ್ರಾಮೀಣ ಸೊಗಡಿನ ಹಬ್ಬದಲ್ಲಿ ಜಾನಪದ ಜಾತ್ರೆ, ದೇವರ ಉತ್ಸವ, ಭಕ್ತಾದಿಗಳಿಗೆ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಬೇಯಿಸಿದ ಗಿಣ್ಣು, ಕಡಲೆಕಾಯಿ, ಅವರೆಕಾಯಿ ಅನ್ನಪ್ರಸಾದ ವ್ಯವಸ್ಥೆಯನ್ನು ಮುಂಜಾನೆ 8ರಿಂದ ರಾತ್ರಿ 11ಗಂಟೆ ವರೆಗೆ ನಿರಂತರವಾಗಿ ನಡೆಯಲಿದೆ.
‘ಜಾತ್ರೆ ಬರುವ ಎಲ್ಲ ಭಕ್ತರಿಗೆ ತಲಾ ಎರಡು ಸೇರು ಕಡಲೆಕಾಯಿ, ಒಂದು ಜೊಲ್ಲೆ ಕಬ್ಬನ್ನು ಉಚಿತವಾಗಿ ನೀಡಲಾಗುವುದು. ಒಂದು ಸಾವಿರಕ್ಕೂ ಹೆಚ್ಚು ಅರ್ಚಕ ದಂಪತಿಗೆ ಉಡುಗೊರೆ ನೀಡಿ ಗೌರವಿಸಲಾಗುತ್ತಿದೆ’ ಎಂದು ದೇವಸ್ಥಾನ ಧರ್ಮದರ್ಶಿ ಮಂಡಳಿ ಅಧ್ಯಕ್ಷರು ಆಗಿರುವ ರಾಜ್ಯ ಬಿಜೆಪಿ ರೈತ ಮೋರ್ಚಾ ಘಟಕದ ಉಪಾಧ್ಯಕ್ಷ ಎಂ.ರುದ್ರೇಶ್ ತಿಳಿಸಿದರು.
‘ನಗರೀಕರಣ ಭರಾಟೆಯಲ್ಲಿ ಯುವ ಜನಾಂಗ ಗ್ರಾಮೀಣ ಧಾರ್ಮಿಕ ಪರಂಪರೆ, ಸಂಸ್ಕೃತಿ, ಜಾತ್ರೆ, ಉತ್ಸವವನ್ನು ಮರೆಯಬಾರದು. ಸಂಕ್ರಾಂತಿಯಂದು ವಿವಿಧ ಜನಪದ ಉತ್ಸವ, ಕ್ರೀಡೆಗಳನ್ನು ನಡೆಸಲಾಗುತ್ತಿದೆ. ವಿವಿಧ ಗ್ರಾಮಗಳಿಂದ ರೈತರು ಸಾಕಿರುವ ಪಶುಗಳನ್ನು ದೇವಸ್ಥಾನದ ಆವರಣಕ್ಕೆ ವಿವಿಧ ದೇವರುಗಳ ಮೆರವಣಿಗೆ ಮೂಲಕ ಬಂದು ಸೇರಿ ಕಿಚ್ಚನ್ನು ಹಾಯಿಸಲಾಗುವುದು’ ಎಂದರು.
‘ದೇಗುಲ ಮಠದ ಇಮ್ಮಡಿ ನಿರ್ವಾಣ ಸ್ವಾಮೀಜಿ , ಕಾಗಿನೆಲೆ ಮಠದ ನಿರಂಜನಾನಂದಪುರಿ ಸ್ವಾಮೀಜಿ, ಯಾದವನಂದ ಮಠದ ಕೃಷ್ಣಯಾದವಾನಂದ ಸ್ವಾಮೀಜಿ, ಮರಳೆಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಬೇಬಿಮಠದ ಶ್ರೀತ್ರಿನೇತ್ರಮಹಂತಶಿವಯೋಗಿ ಸ್ವಾಮೀಜಿ, ಬಂಡೇಮಠದ ಶ್ರೀಸಚ್ಚಿದಾನಂದ ಸ್ವಾಮೀಜಿ , ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೋಭಾಕರಂದ್ಲಾಜೆ, ಶಾಸಕ ಬಿ.ವೈ.ವಿಜಯೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ನೈಸ್ ಸಂಸ್ಥೆ ಅಧ್ಯಕ್ಷ ಅಶೋಕ್ ಖೇಣಿ, ವಿಧಾನ ಪರಿಷತ್ ಸದಸ್ಯ ಟಿ.ಎನ್.ಜವರಾಯಿಗೌಡ, ಚಿತ್ರ ನಟ ದುನಿಯಾ ವಿಜಯ್ ಭಾಗವಹಿಸುವರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.