ADVERTISEMENT

ಬೆಂಗಳೂರು: ಅದ್ದೂರಿಯಾಗಿ ನಡೆದ ಬಸವೇಶ್ವರ ಸ್ವಾಮಿ ರಥೋತ್ಸವ, ಕಡಲೇಕಾಯಿ ಪರಿಷೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2026, 15:19 IST
Last Updated 15 ಜನವರಿ 2026, 15:19 IST
   

ಬೆಂಗಳೂರು: ಸೋಂಪುರ ಬಳಿಯ ವರಹಾಸಂದ್ರದಲ್ಲಿ ಇತಿಹಾಸ ಪ್ರಸಿದ್ಧ ಬಸವೇಶ್ವರ ಸ್ವಾಮಿಯ ರಥೋತ್ಸವ, ದೇವರ ಉತ್ಸವ, ಕಡಲೇಕಾಯಿ ಪರಿಷೆ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.

ರಥೋತ್ಸವ ಮತ್ತು ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಸಹಸ್ತ್ರಾರು ಭಕ್ತರು ದೇವರ ದರ್ಶನ ಪಡೆದು ಕಣ್ತುಂಬಿಕೊಂಡರು. ಭಕ್ತಸಾಗರ ಹರಿದು ಬಂದಿತು. ಎಲ್ಲಿ ನೋಡಿದರೂ ಜನಜಂಗುಣಿ ಕಂಡು ಬಂದಿತು. ರಥೋತ್ಸವಕ್ಕೆ ಮರಳೆಗವಿಮಠದ ಮುಮ್ಮನಿರ್ವಾಣ ಶ್ರೀಗಳು, ಶ್ರೀ ಕೃಷ್ಣಯಾದವನಂದ ಸ್ವಾಮೀಜಿ, ಬೇಬಿಮಠದ ಶ್ರೀ ಮಹಂತಶಿವಯೋಗಿ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಉಚಿತ ಕಡಲೇಕಾಯಿ, ಕಬ್ಬು ವಿತರಣೆ ಮಾಡುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಕಾರ್ಯಕ್ರಮದ ರೂವಾರಿ, ಬಿಜೆಪಿ ನಾಯಕ ಎಂ.ರುದ್ರೇಶ್ ದಂಪತಿಗಳು ವಿವಿಧ ಪೂಜೆಪುರಸ್ಕಾರ ನಡೆಸುವ ಮೂಲಕ ಎಲ್ಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಮತ್ತು ಅರ್ಚಕ ದಂಪತಿಗಳಿಗೆ ಹಮ್ಮಿಕೊಂಡಿದ್ದ ಗೌರವ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ ಧರ್ಮ ಎಂದರೆ ಸಂಘರ್ಷವಲ್ಲ, ಅದೊಂದು ಬದುಕಿನ ದಾರಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಏಕತೆ ಮೂಡಿಸುವುದೇ ನಿಜವಾದ ಧರ್ಮ ಎಂದು ಪ್ರತಿಪಾಧಿಸಿದರು.

ADVERTISEMENT

ಶ್ರೀರಂಗಪಟ್ಟಣ ಬೇಬಿಮಠದ ಮಹಂತಶಿವಯೋಗಿ ಶ್ರೀಗಳು ಮಾತನಾಡಿ ಭಾವನಾತ್ಮಕವಾಗಿ ಎಲ್ಲರೂ ಒಗ್ಗೂಡಿ ನ್ಯಾಯ, ನಿಷ್ಠೆ, ಪ್ರಾಮಾಣಿಕ ದಾರಿಯಲ್ಲಿ ಸಾಗಬೇಕು ಆಗ ಸತ್ಯ, ಧರ್ಮ ಎಂದಿಗೂ ಸಾಯುವುದಿಲ್ಲ ಎಂದ ಅವರು ಪೂರ್ವಿಕರ ಕಾಲದಿಂದಲೂ ಗುಡಿ, ಗೋಪುರಗಳನ್ನು ಭೋವಿ ಜನಾಂಗದವರು ನಿಷ್ಠೆ, ಭಕ್ತಿ, ಶ್ರದ್ಧೆಯಿಂದ ನಿರ್ಮಾಣ ಮಾಡುತ್ತಾ ಧರ್ಮ ಉಳಿವಿಗಾಗಿ ಸಮಾಜ ಸೇವೆ ಮಾಡುತ್ತಿದ್ದರು. ಇಂದು ಹಳೆಯ ದೇವಾಲಯಗಳ ಜೀರ್ಣೋದ್ಧಾರಕ್ಕೆ ಎಂ.ರುದ್ರೇಶ್ ಕಂಕಣ ಬದ್ದರಾಗಿ ಧರ್ಮ ಉಳಿವಿಗಾಗಿ ಮುಂದಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಚಿತ್ರದುರ್ಗ ಯಾದವ ಮಹಾಸಂಸ್ಥಾನ ಮಠದ ಶ್ರೀ ಕೃಷ್ಣಯಾದವನಂದ ಸ್ವಾಮೀಜಿ ಮಾತನಾಡಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸಣ್ಣ ಸಮುದಾಯದ ಮಠಗಳು, ದೇವಸ್ಥಾನ ಹುಡುಕಿ ಅನುದಾನ ನೀಡುವ ಮೂಲಕ ಏಳಿಗೆ, ಅಭಿವೃದ್ದಿಗೆ ಮುಂದಾಗಿ ಧರ್ಮ ಉಳಿಸಿದ್ದಾರೆ ಎಂದರು.

ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಶ್ರೀ ನಿಶ್ಚಲಾನಂದ ಸ್ವಾಮೀಜಿ ಮಾತನಾಡಿ ಬುದ್ಧಿ ಜೀವಿಗಳು, ಪ್ರಗತಿಪರರು ಎನ್ನುವ ಕೆಲವರು ಧರ್ಮದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ ಅವರು ಧರ್ಮದ ಪರವಾಗಿ ನಿಲ್ಲಬೇಕು, ಆಗ ಸನಾತನ ಧರ್ಮ ಉಳಿಯುತ್ತದೆ ಎಂದರು.

ಮುಮ್ಮಡಿ ಶಿವರುದ್ರಸ್ವಾಮೀಜಿ, ಕೆಆರ್‍ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್ , ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ, ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ, ಜಿ.ಪಂ.ಮಾಜಿ ಸದಸ್ಯ ಎ.ಶಿವಕುಮಾರ್ ಪಾಲಿಕೆ ಮಾಜಿ ಸದಸ್ಯರಾದ ರ.ಆಂಜನಪ್ಪ, ಮೈಲಸಂದ್ರ ಮುನಿರಾಜು, ಮುಖಂಡ ಪರಮಶಿವಯ್ಯ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಿ.ಹನುಮಂತಯ್ಯ, ಎಸ್.ಆರ್.ಮೋಹನ್‍ಕುಮಾರ್, ವಿಜಯಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಸ್.ದೀಪಕ್, ವಾಜರಹಳ್ಳಿ ಶಶಿಕುಮಾರ್, ಆರ್.ಮುನಿಸ್ವಾಮಿ, ಚಿತ್ರ ನಟ ದುನಿಯವಿಜಯ್ ಸೇರಿದಂತೆ ಹಲವುಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.