ಬೆಂಗಳೂರು: ನಗರದಲ್ಲಿ ಎಲ್ಲಾ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಹಂತದ ರಾಜಕಾಲುವೆಗಳ ಹೂಳು ತೆಗೆಯಲು ಬಿಬಿಎಂಪಿ ನಿರ್ಧರಿಸಿದೆ.
‘ಹೂಳು ತೆಗೆದು ರಾಜಕಾಲುವೆ ಸ್ವಚ್ಛಗೊಳಿಸಲು ಅಲ್ಪಾವಧಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. 20ರಿಂದ 30 ದಿನಗಳಲ್ಲಿ ಕಾಲುವೆಗಳು ಸ್ವಚ್ಛ ಆಗಲಿವೆ.ಗೆದ್ದಲಹಳ್ಳಿ ರೈಲ್ವೆ ಸೇತುವೆ ವಿಸ್ತರಣೆಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬುಧವಾರ ತಿಳಿಸಿದರು.
‘ಶ್ರೀನಗರದ ಕಾಳಿದಾಸ ಬಸ್ ನಿಲ್ದಾಣದ ಬಳಿ ರಾಜಕಾಲುವೆ ಮೇಲ್ಭಾಗದಲ್ಲಿ ಸಾರುವೆ ಕುಸಿದು ನಾಲ್ವರು ಕಾರ್ಮಿಕರು ಗಾಯಗೊಂಡಿರುವ ಪ್ರಕರಣದ ಬಗ್ಗೆ ಟಿವಿಸಿಸಿ (ಮುಖ್ಯ ಆಯುಕ್ತರ ಜಾಗೃತ ಕೋಶ) ಮೂಲಕ ವರದಿ ಪಡೆಯಲಿದ್ದೇನೆ. ಬಿಬಿಎಂಪಿ ಎಂಜಿನಿಯರ್ಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿ ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಘಟನೆಯಿಂದ ಬಿಬಿಎಂಪಿ ಘನತೆಗೂ ಧಕ್ಕೆಯಾಗಿದ್ದು, ಗುತ್ತಿಗೆದಾರರಿಗೆ ದಂಡ ವಿಧಿಸಲಾಗುತ್ತದೆ’ ಎಂದರು.
ಟಿವಿಸಿಸಿಗೆ ಹೆಚ್ಚಿನ ಅಧಿಕಾರ
‘ಆಯ್ದ ಬಿಲ್ಗಳ ಪರಿಶೀಲನೆ ಜತೆಗೆ ಕಾಮಗಾರಿ ಗುಣಮಟ್ಟ ಪರಿಶೀಲನೆಯ ಜವಾಬ್ದಾರಿಯನ್ನೂ ಟಿವಿಸಿಸಿಗೆ ನೀಡಲಾಗಿದೆ’ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
‘ಕಳಪೆ ಕಾಮಗಾರಿ ಬಗ್ಗೆ ದೂರುಗಳು ಬಂದರೆ, ಸ್ಥಳಕ್ಕೆ ಹೋಗಿ ಪರಿಶೀಲಿಸಲು ಕಾಯ್ದೆಯಲ್ಲಿ ಟಿವಿಸಿಸಿಗೆ ಅಧಿಕಾರ ಇದೆ. ಬಿಲ್ಗಳ ನಿಖರತೆ ಪರಿಶೀಲಿಸುವ ಜತೆಗೆ ಸಿವಿಲ್ ಕಾಮಗಾರಿ ಮೇಲಿನ ದೂರುಗಳ ತನಿಖೆಯ ಅಧಿಕಾರವನ್ನೂ ನೀಡಲಾಗಿದೆ. ಕಾಮಗಾರಿಯಲ್ಲಿ ಲೋಪ ಆಗುವುದನ್ನು ತಪ್ಪಿಸಲು ಇದರಿಂದ ಸಾಧ್ಯವಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.