ಬೆಂಗಳೂರು: ಎರಡು ಉದ್ಯಾನಗಳಿಂದ ತಿಂಗಳಿಗೆ ₹43 ಸಾವಿರ ಬೆಸ್ಕಾಂ ವಿದ್ಯುತ್ ಶುಲ್ಕವನ್ನು ಉಳಿತಾಯ ಮಾಡುವ ಸೌರ ವಿದ್ಯುತ್ ಘಟಕಕ್ಕೆ ಸೋಮವಾರ ಚಾಲನೆ ದೊರೆಯಿತು.
ಯಡಿಯೂರು ವಾರ್ಡ್ ವ್ಯಾಪ್ತಿಯ ಜಯನಗರ 3ನೇ ಬಡಾವಣೆಯಲ್ಲಿರುವ ಸಂಜೀವಿನಿ ಹಾಗೂ ಧನ್ವಂತರಿ ಉದ್ಯಾನಗಳ ನಡುವೆ ಬಿಬಿಎಂಪಿ ವತಿಯಿಂದ ಮೊದಲ ಬಾರಿಗೆ ₹15 ಲಕ್ಷ ವೆಚ್ಚದಲ್ಲಿ ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸಲಾಗಿದೆ. ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಹಾಗೂ ಶಾಸಕ ಆರ್.ಅಶೋಕ್ ಅವರು ಚಾಲನೆ ನೀಡಿದರು.
15 ಕಿಲೋ ವಾಟ್ ವಿದ್ಯುತ್ ಉತ್ಪಾದನೆ ಮಾಡಿ ಎರಡೂ ಉದ್ಯಾನಗಳಿಗೆ ಬಳಸಿಕೊಳ್ಳಲಾಗುತ್ತದೆ. ಈ ವಾರ್ಡ್ ವ್ಯಾಪ್ತಿಯಲ್ಲಿರುವ 13 ಉದ್ಯಾನಗಳ ಮಾಲಿಗಳು ಉಳಿದುಕೊಳ್ಳಲು ವಸತಿ ಗೃಹವನ್ನೂ ಕಟ್ಟಲಾಗಿದೆ. ಬಿಬಿಎಂಪಿ ಇದಕ್ಕೆ ₹50ಲಕ್ಷ ಖರ್ಚು ಮಾಡಿದೆ.
‘ಈಗಾಗಲೇ ಇಲ್ಲಿ ಸ್ಥಾಪಿಸಿರುವ ಹಸಿ ತ್ಯಾಜ್ಯದ ‘ಜೈವಿಕ ಅನಿಲ ಘಟಕ’ದ ಮೂಲಕ 50 ಕಿಲೋ ವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದರಿಂದ ಏಳು ಉದ್ಯಾನಗಳಿಗೆ ಬೆಳಕು ನೀಡಲಾಗಿದೆ. ಈಗ ಆರಂಭವಾಗಿರುವ ಸೌರ ವಿದ್ಯುತ್ ಘಟಕದಿಂದ ಹೆಚ್ಚಿನ ಸಹಾಯ ಆಗಲಿದೆ. ಜಾಗ ಇರುವ ನಗರದ ಇತರ ಉದ್ಯಾನಗಳಲ್ಲೂ ಘಟಕ ಸ್ಥಾಪಿಸುವ ಉದ್ದೇಶ ಇದೆ’ ಎಂದು ಮೇಯರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.