ಬೆಂಗಳೂರು: ಯಲಹಂಕ ವಲಯದ ಬಡಾವಣೆಗಳ ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಹೆಚ್ಚುತ್ತಿದ್ದು, ನಿವೇಶನ ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ₹50 ಸಾವಿರದಿಂದ ₹1 ಲಕ್ಷದ ತನಕ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಸಿದೆ.
ಕೆಂಪೇಗೌಡ ವಾರ್ಡ್, ಚೌಡೇಶ್ವರಿ, ಅಟ್ಟೂರು, ಯಲಹಂಕ ನ್ಯೂ ಟೌನ್, ಜಕ್ಕೂರು, ಥಣಿಸಂದ್ರ, ಬ್ಯಾಟರಾಯನಪುರ, ಕೊಡಿಗೆಹಳ್ಳಿ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ ಮತ್ತು ಕುವೆಂಪುನಗರ ವಾರ್ಡ್ನ ನಿವಾಸಿಗಳು ಖಾಲಿ ನಿವೇಶನಗಳಲ್ಲಿನ ಕಸದ ರಾಶಿ ಮತ್ತು ಕಟ್ಟಡ ಅವಶೇಷಗಳನ್ನು ತೆರವುಗೊಳಿಸಿ ಶುಚಿತ್ವ ಕಾಪಾಡಿಕೊಳ್ಳಬೇಕು.
‘ಕಟ್ಟಡ ಅವಶೇಷಗಳನ್ನು ಪ್ರತ್ಯೇಕವಾಗಿ ಶೇಖರಿಸಿ ನಿಯಮಾನುಸಾರ ವಿಲೇವಾರಿ ಮಾಡಬೇಕು. ತ್ಯಾಜ್ಯವನ್ನು ತೆರೆದ ಸ್ಥಳಗಳಲ್ಲಿ, ಚರಂಡಿ ಅಥವಾ ಜಲಕಾಯಗಳಲ್ಲಿ ಎಸೆಯುವುದು, ಸುಡುವುದು ಅಥವಾ ಹೂಳುವುದಾಗಲಿ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ ದಂಡದ ಜತೆಗೆ ಕಾರಾಗೃಹ ಶಿಕ್ಷೆ ಒಳಪಡಿಸಲೂ ಕಾನೂನಿನಲ್ಲಿ ಅವಕಾಶ ಇದೆ’ ಎಂದು ಯಲಹಂಕ ವಲಯದ ಜಂಟಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.