ADVERTISEMENT

ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ: ಐದು ಹೊಸ ತಳಿಗಳ ಅಭಿವೃದ್ಧಿ

ಖಲೀಲಅಹ್ಮದ ಶೇಖ
Published 9 ಸೆಪ್ಟೆಂಬರ್ 2025, 23:59 IST
Last Updated 9 ಸೆಪ್ಟೆಂಬರ್ 2025, 23:59 IST
ಜಿಕೆವಿಕೆ ಆವರಣದಲ್ಲಿ ಬೆಳೆದಿರುವ ಧಾನ್ಯ ಜೋಳದ ಬೆಳೆಯ ಪ್ರಾತ್ಯಕ್ಷಿಕೆ  
ಜಿಕೆವಿಕೆ ಆವರಣದಲ್ಲಿ ಬೆಳೆದಿರುವ ಧಾನ್ಯ ಜೋಳದ ಬೆಳೆಯ ಪ್ರಾತ್ಯಕ್ಷಿಕೆ     

ಬೆಂಗಳೂರು: ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ರೈತರಿಗಾಗಿ ಈ ಬಾರಿ ಐದು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ‘ಕೃಷಿ ಮೇಳ’ಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಹೊಸ ತಳಿಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ಪರಿಚಯಿಸಲಾಗುತ್ತಿದೆ. ಮೇಳಕ್ಕೆ ಬರುವ ರೈತರು ಇದನ್ನು ವೀಕ್ಷಿಸಬಹುದು.

ನವೆಂಬರ್‌ 13ರಿಂದ 16ರವರೆಗೆ ನಡೆಯುವ ಕೃಷಿ ಮೇಳದಲ್ಲಿ ಧಾನ್ಯ ಜೋಳ (ಸಿಎನ್‌ಜಿಎಸ್–1), ಸೂರ್ಯಕಾಂತಿ (ಕೆಬಿಎಸ್ಎಚ್–88), ಹರಳು (ಬಿಸಿಎಚ್–162), ಕಪ್ಪು ಅರಿಶಿಣ (ಸಿಎಚ್ಎನ್‌ಬಿಟಿ–1) ಹಾಗೂ ಅರಿಶಿಣ (ಐಐಎಸ್‌ಆರ್‌ ಪ್ರತಿಭಾ) ಎಂಬ ಐದು ತಳಿಗಳನ್ನು ಬಿಡುಗಡೆಗೊಳಿಸಲಾಗುತ್ತದೆ.

‘ಈ ಎಲ್ಲ ತಳಿಗಳು ಹಿಂದಿನ ತಳಿಗಳಿಗಿಂತ ಹೆಚ್ಚು ಇಳುವರಿ ನೀಡುವ ಸಾಮರ್ಥ್ಯ ಹೊಂದಿದ್ದು, ರೋಗಗಳಿಗೆ ಹೆಚ್ಚು ತುತ್ತಾಗುವುದಿಲ್ಲ. ಈ ತಳಿಗಳನ್ನು ಬೆಳೆಯುವುದರಿಂದ ರೈತರಿಗೆ ಸಮಸ್ಯೆಗಳು ಕಡಿಮೆ ಮತ್ತು ಹೆಚ್ಚು ಲಾಭ ಪಡೆಯಬಹುದು. ಬೇಸಾಯ ಪದ್ಧತಿಯ ಎರಡು ಹೊಸ ತಾಂತ್ರಿಕತೆಗಳು ಹಾಗೂ 28 ಮೌಲ್ಯವರ್ಧಿತ ಉತ್ಪನ್ನಗಳನ್ನು ಪರಿಚಯಿಸಲಾಗುತ್ತದೆ’ ಎಂದು ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ‘ಎಸ್.ವಿ. ಸುರೇಶ ‘ಪ್ರಜಾವಾಣಿ’ಗೆ ತಿಳಿಸಿದರು.   

ADVERTISEMENT
ಹವಾಮಾನ ವೈಪರೀತ್ಯದಿಂದ ಆಗುವ ಬದಲಾವಣೆಗೆ ತಕ್ಕಂತೆ ಬೆಳೆಯುವ ತಳಿಗಳನ್ನು ಸಂಶೋಧನೆ ಮಾಡುತ್ತಿದ್ದೇವೆ. ಇವುಗಳಿಂದ ರೈತರಿಗೆ ಹೆಚ್ಚು ಆದಾಯ ಸಿಗಲಿದೆ.
ಎಸ್.ವಿ. ಸುರೇಶ, ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ  

‘ಧಾನ್ಯ ಜೋಳದ ತಳಿಯು 100 ರಿಂದ 105 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇದು ಪ್ರತಿ ಹೆಕ್ಟೇರಿಗೆ 39ರಿಂದ 40 ಕ್ವಿಂಟಲ್‌ ಇಳುವರಿ ಹಾಗೂ 30 ಟನ್‌ನಿಂದ 33 ಟನ್‌ವರೆಗೆ ಮೇವಿನ ಇಳುವರಿ ನೀಡುತ್ತದೆ. ಇದರ ಗಿಡ ಕಟಾವಿನ ಸಂದರ್ಭದಲ್ಲೂ ಹಸಿರಿನಿಂದ ಇರುವುದರಿಂದ ಹಸಿರು ಮೇವಿನ ಕೊರತೆಗೆ ಪರಿಹಾರ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

‘ಕಪ್ಪು ಅರಿಶಿಣ ತಳಿಯಲ್ಲಿ ಹೆಚ್ಚಿನ ಎಲೆಗಳು ಹಾಗೂ ಉತ್ತಮ ಹರವು ಇದ್ದು, ಉತ್ತಮ ಭೌತಿಕ ಗುಣ ಲಕ್ಷಣಗಳನ್ನು ಹೊಂದಿದೆ. ಇದರ ಗೆಡ್ಡೆಯು ದಪ್ಪವಾಗಿದ್ದು, ತಿರುಳು ಉತ್ಕೃಷ್ಟ ನೀಲಿ ಬಣ್ಣದಿಂದ ಕೂಡಿದೆ. ಒಂದು ಹೆಕ್ಟೇರ್‌ಗೆ 8 ಟನ್‌ನಿಂದ 10 ಟನ್‌ ಇಳುವರಿ ನೀಡುತ್ತದೆ. ಇದು ಸುಮಾರು 255ರಿಂದ 265 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಪ್ರತಿಭಾ ಅರಿಶಿಣ ತಳಿಯು 240ರಿಂದ 245 ದಿನಗಳಲ್ಲಿ ಕಟಾವಿಗೆ ಬರಲಿದ್ದು, ಪ್ರತಿ ಹೆಕ್ಟೇರ್‌ಗೆ 34 ಟನ್‌ನಿಂದ 36 ಟನ್‌ ಇಳುವರಿ ನೀಡುತ್ತದೆ’ ಎಂದರು.

‘ಅಧಿಕ ಎಣ್ಣೆ ಅಂಶ ಹೊಂದಿದ ಸೂರ್ಯಕಾಂತಿ ಹರಳು’

‘ಸೂರ್ಯಕಾಂತಿ ಸಂಕರಣ ತಳಿಯು  84ರಿಂದ 86 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇದು ಕೇದಿಗೆ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಈ ಸಂಕರಣ ತಳಿಯು ಶೇಕಡ 19ರಷ್ಟು ಅಧಿಕ ಬೀಜದ ಇಳುವರಿ ಹೊಂದಿದ್ದು ಒಂದು ಹೆಕ್ಟೇರ್‌ಗೆ 22 ರಿಂದ 24 ಕ್ವಿಂಟಲ್‌ ಇಳುವರಿ ‌ಬರುತ್ತದೆ. ಇದರಲ್ಲಿ ಶೇ 28ರಷ್ಟು ಅಧಿಕ ಎಣ್ಣೆಯ ಇಳುವರಿ ನೀಡುತ್ತದೆ’ ಎಂದು ಎಸ್.ವಿ. ಸುರೇಶ ಹೇಳಿದರು.  

‘ಹರಳು ಸಂಕರಣ ತಳಿಯು ಒಣ ಬೇಸಾಯಕ್ಕೆ ಸೂಕ್ತವಾಗಿದೆ. ಇದು ಪ್ರತಿ ಕ್ವಿಂಟಲ್‌ಗೆ 15ರಿಂದ 20 ಕ್ವಿಂಟಲ್‌ ಇಳುವರಿ ಹಾಗೂ ಶೇ 48ರಷ್ಟು ಎಣ್ಣೆ ಅಂಶವನ್ನು ಹೊಂದಿದೆ. ಪ್ರಥಮ ಗೊಂಚಲು ಮಾಗಲು 95ರಿಂದ 100 ದಿನಗಳನ್ನು ತೆಗೆದುಕೊಳ್ಳುತ್ತದೆ’ ಎಂದರು.

ಜಿಕೆವಿಕೆ ಆವರಣದಲ್ಲಿ ಬೆಳೆದಿರುವ ಸೂರ್ಯಕಾಂತಿ ಬೆಳೆಯ ಪ್ರಾತ್ಯಕ್ಷಿಕೆ  
ಕಪ್ಪು ಅರಿಶಿಣದ ಗೆಡ್ಡೆ
ಬಿಸಿಎಚ್‌–162 ಹರಳಿನ ಬೀಜಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.