ADVERTISEMENT

ಮಾರಕಾಸ್ತ್ರದಿಂದ ಹಲ್ಲೆ: ಎಗ್‌ರೈಸ್‌ ರವಿ ಸೇರಿ ಆರು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 16:30 IST
Last Updated 21 ಜುಲೈ 2025, 16:30 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಯುವತಿಯೊಂದಿಗೆ ಮದುವೆ ಮಾಡಿಕೊಳ್ಳುವ ವಿಚಾರಕ್ಕೆ ಸೋದರ ಸಂಬಂಧಿಯನ್ನು ಹೆದರಿಸಲು ಹೋಗಿ ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ನಂದಿನಿಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

‘ಎಗ್‌ರೈಸ್’ ರವಿ ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ. ಮಹಾಲಕ್ಷ್ಮಿ ಠಾಣೆ ರೌಡಿಶೀಟರ್ ಆಗಿರುವ ವಿನಯ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

‘ಎಗ್‌ರೈಸ್’ ರವಿ, ತನ್ನ ಸ್ನೇಹಿತ ವಿನಯ್ ಮತ್ತಿತರ ಜತೆಗೆ ಸೇರಿಕೊಂಡು ಸಂಬಂಧಿ ಜಗದೀಶ್ ಹಾಗೂ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಫುಡ್‌ ಡೆಲಿವರಿ ಬಾಯ್ ಪವನ್ ಕುಮಾರ್ ಮೇಲೂ ಹಲ್ಲೆ ನಡೆಸಲಾಗಿತ್ತು. ಪವನ್ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ಹೇಳಿದರು.

ನಂದಿನಿಲೇಔಟ್‌ನ ಕಂಠೀರವ ನಗರದಲ್ಲಿ ಜಗದೀಶ್ ಅವರು ಫೋಟೊ ಪ್ರೇಮ್ ಅಂಗಡಿ ಇಟ್ಟುಕೊಂಡಿದ್ದಾರೆ. ಅವರ ಸಹೋದರಿಯ ಪುತ್ರಿಯನ್ನು ಮದುವೆ ಆಗಲು ಆರೋಪಿ ರವಿ ಮುಂದಾಗಿದ್ದ. ಮದುವೆ ಜಗದೀಶ್‌ಗೆ ಇಷ್ಟ ಇರಲಿಲ್ಲ. ಕುಪಿತಗೊಂಡಿದ್ದ ಆರೋಪಿ ರವಿ ಫೋಟೊ ಪ್ರೇಮ್ ಅಂಗಡಿ ಬಳಿಗೆ ಬಂದು ಗಲಾಟೆ ನಡೆಸಿದ್ದ. ಆಗ ಮಾರಕಾಸ್ತ್ರಗಳನ್ನು ಬೀಸುವಾಗ ಸಾರ್ವಜನಿಕರಿಗೆ ತಗುಲಿತ್ತು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.