
ಚೆನ್ನಮ್ಮನ ಕೆರೆ ಅಚ್ಚುಕಟ್ಟುಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆಯನ್ನು ಅಗೆದು ಹಾಕಲಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಆಗಿದೆ. ರಸ್ತೆಯ ಒಂದು ಬದಿಯನ್ನು ಅಗೆದು ಹಾಗೆಯೇ ಬಿಡಲಾಗಿದೆ. ನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯನ್ನು ಅಗೆದಿರುವ ಪರಿಣಾಮ ಸಂಚಾರ ದಟ್ಟಣೆ ಆಗುತ್ತಿದೆ. ಇದರ ಜೊತೆಗೆ ಅಪಘಾತಗಳಾಗುವ ಸಂಭವ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು.
ಸುಹಾಸ್, ವಾಹನ ಸವಾರ
ಕಳೆದ ಮೂರು ದಿನಗಳಿಂದ ಗಾಂಧಿ ನಗರದ ಆಸ್ಪತ್ರೆ ರಸ್ತೆಯಲ್ಲಿ ತ್ಯಾಜ್ಯ ತುಂಬಿರುವ ಮೂರು ಆಟೊಗಳು ನಿಂತಿವೆ. ಆಟೊಗಳಲ್ಲಿ ತುಂಬಿರುವ ಕಸ ಗಬ್ಬೆದ್ದು ನಾರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಕೂಡಲೇ ಆಟೊಗಳಲ್ಲಿನ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಬೇಕು. ನಗರದ ಸೌಂದರ್ಯವನ್ನು ಕಾಪಾಡಬೇಕು.
ಶಿವಪ್ರಸಾದ್, ಗಾಂಧಿನಗರ
ಜಿಬಿಎ ವ್ಯಾಪ್ತಿಯ ಹಂಪಿನಗರ ಈಜುಕೊಳ ರಸ್ತೆಯ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು, ವೃದ್ಧರು ಬೀದಿಯಲ್ಲಿ ಓಡಾಡಲು ಹೆದರುತ್ತಿದ್ದಾರೆ. ವಾಯು ವಿಹಾರಕ್ಕೆ ತೆರಳುವ ವೃದ್ಧರನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದು ದಾಳಿ ಮಾಡುತ್ತಿವೆ. ಆದ್ದರಿಂದ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಇವುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು.
ನಾಗರತ್ನ ರವಿಕುಮಾರ್, ಬಾಪೂಜಿನಗರ
ಕಲಾ ಗ್ರಾಮದ ಮಲ್ಲತ್ತಹಳ್ಳಿ ಸಭಾಂಗಣದಲ್ಲಿ ಇರುವ ಆಸನಗಳು ಮುರಿದು ಬಿದ್ದಿವೆ. ಈ ಸಭಾಂಗಣದಲ್ಲಿ ಇತ್ತೀಚೆಗೆ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕಗಳು ಪ್ರದರ್ಶನವಾಗುತ್ತಿವೆ. ಆದರೆ, ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಮುರಿದ ಆಸನಗಳನ್ನು ದುರಸ್ತಿಗೊಳಿಸುವ ಕೆಲಸ ಆಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಮುರಿದು ಬಿದ್ದಿರುವ ಆಸನಗಳನ್ನು ಸರಿಪಡಿಸಬೇಕು.
ಎಚ್. ತುಕಾರಾಂ, ಮಲ್ಲತ್ತಹಳ್ಳಿ
ಎನ್.ಆರ್. ಕಾಲೊನಿಯ ಮುಖ್ಯರಸ್ತೆಯ ಡಾ.ಸಿ.ಅಶ್ವತ್ಥ್ ಕಲಾ ಭವನದ ಮುಂಭಾಗದ ರಸ್ತೆಯಲ್ಲಿ ಉಬ್ಬುಗಳನ್ನು ಅಳವಡಿಸಬೇಕು. ಈ ರಸ್ತೆಗೆ ವೈಟ್ ಟಾಪಿಂಗ್ ಮಾಡಲಾಗಿದ್ದು, ಅಶ್ವತ್ಥ್ ಕಲಾಭವನದ ಮುಂಭಾಗದಲ್ಲಿ ವೇಗವಾಗಿ ನೆಟ್ಟಕಲ್ಲಪ್ಪ ವೃತ್ತದಿಂದ ವಾಹನಗಳು ಬರುತ್ತಿವೆ. ಇಲ್ಲಿ ಅಂಬಾ ಭವಾನಿ ದೇವಸ್ಥಾನ ಮತ್ತು ಬಸ್ ತಂಗುದಾಣ ಇದೆ. ನಿತ್ಯ ಈ ರಸ್ತೆಯಲ್ಲಿ ನೂರಾರು ಜನ ಓಡಾಡುತ್ತಾರೆ. ವಾಹನಗಳು ವೇಗವಾಗಿ ಬರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಈ ರಸ್ತೆಯಲ್ಲಿ ಉಬ್ಬುಗಳನ್ನು ಹಾಕಬೇಕು.
ಕೆ.ಎಸ್. ನಾಗರಾಜ್, ಎನ್.ಆರ್. ಕಾಲೊನಿ
ಎನ್.ಆರ್. ಕಾಲೊನಿಯ ರಸ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.