ADVERTISEMENT

ಡ್ರಗ್ಸ್ ಪಾರ್ಟಿ ನಡೆದಿದ್ದ ವಿಲ್ಲಾದಲ್ಲಿ ರೇವ್ ಪಾರ್ಟಿ, ವೇಶ್ಯಾವಾಟಿಕೆ

ನಟಿಯರೊಂದಿಗೆ ಸಿಕ್ಕಿಬಿದ್ದಿದ್ದ ಶ್ರೀನಿವಾಸ್ ಸುಬ್ರಹ್ಮಣ್ಯ: ಯುವಜನತೆ ಸೆಳೆದು ಅಶ್ಲೀಲ ನೃತ್ಯ, ವೇಶ್ಯಾವಾಟಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 20:09 IST
Last Updated 11 ಸೆಪ್ಟೆಂಬರ್ 2022, 20:09 IST
ಶ್ರೀನಿವಾಸ್
ಶ್ರೀನಿವಾಸ್   

ಬೆಂಗಳೂರು: ಅಂತರರಾಷ್ಟ್ರೀಯ ಡ್ರಗ್ಸ್ ಜಾಲ ಪ್ರಕರಣ ಸಂಬಂಧ 2021ರಲ್ಲಿ ಬಂಧಿಸಲಾಗಿದ್ದ ಶ್ರೀನಿವಾಸ್ ಸುಬ್ರಹ್ಮಣ್ಯ ಅಲಿಯಾಸ್ ಶ್ರೀಗೆ ಸೇರಿದ್ದ ವಿಲ್ಲಾದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ಇತ್ತೀಚೆಗೆ ದಾಳಿ ಮಾಡಿದ್ದು, ಅಶ್ಲೀಲ ನೃತ್ಯ ಹಾಗೂ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಎಂಟು ಮಂದಿಯನ್ನು ಬಂಧಿಸಿದ್ದಾರೆ.

2021ರಲ್ಲಿ ಹೆಚ್ಚು ಸುದ್ದಿಯಾಗಿದ್ದ ಅಂತರರಾಷ್ಟ್ರೀಯ ಡ್ರಗ್ಸ್ ಜಾಲ ಪ್ರಕರಣದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಹಾಗೂ ಇತರರನ್ನು ಬಂಧಿಸಲಾಗಿತ್ತು. ಈ ಪ್ರಕರಣದ 18ನೇ ಆರೋಪಿಯಾಗಿದ್ದ ಹಾಸನದ ಶ್ರೀನಿವಾಸ್‌ ಸುಬ್ರಹ್ಮಣ್ಯ, ಸಾದಹಳ್ಳಿಯ ಅನ್ವರ್‌ ಬಡಾವಣೆಯ ಜೇಡ್ ಗಾರ್ಡನ್‌ನಲ್ಲಿರುವ ತನ್ನ ವಿಲ್ಲಾದಲ್ಲಿ (ನಂಬರ್ 735) ಡ್ರಗ್ಸ್ ಪಾರ್ಟಿ ನಡೆಸಲು ಅವಕಾಶ ನೀಡಿದ್ದ. ಈತನನ್ನೂ ಬಂಧಿಸಿದ್ದ ಸಿಸಿಬಿ ಪೊಲೀಸರು, ವಿಲ್ಲಾ ಮೇಲೆ ಹಲವು ಬಾರಿ ದಾಳಿ ಮಾಡಿದ್ದರು. ದೋಷಾರೋಪ ಪಟ್ಟಿ ಸಹ ಸಲ್ಲಿಸಿದ್ದರು.

‘ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದಿರುವ ಆರೋಪಿ ಶ್ರೀನಿವಾಸ್, ಪುನಃ ತನ್ನ ವಿಲ್ಲಾವನ್ನು ರೇವ್‌ ಪಾರ್ಟಿ ನಡೆಸಲು ಇತ್ತೀಚೆಗೆ ಬಾಡಿಗೆ ನೀಡಿದ್ದ. ಖಚಿತ ಮಾಹಿತಿ ಮೇರೆಗೆ ಸೆ. 6ರಂದು ರಾತ್ರಿ ವಿಲ್ಲಾ ಮೇಲೆ ದಾಳಿ ಮಾಡಿ ರೇವ್‌ ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರನ್ನು ಬಂಧಿಸಲಾಗಿದೆ. ವಿಲ್ಲಾ ಮಾಲೀಕ ಶ್ರೀನಿವಾಸ್ ಪರಾರಿಯಾಗಿದ್ದಾನೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

ADVERTISEMENT

‘ಮದ್ಯ, ಅಶ್ಲೀಲ ನೃತ್ಯ, ವೇಶ್ಯಾವಾಟಿಕೆಗಾಗಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಹಲವು ಯುವಕ–ಯುವತಿಯರು ಇದರಲ್ಲಿ ಪಾಲ್ಗೊಂಡಿದ್ದರು. ಮದ್ಯದ ಅಮಲು ಏರಿಸಿಕೊಂಡಿದ್ದ ಯುವಜನತೆ, ಅಬ್ಬರದ ಸಂಗೀತದೊಂದಿಗೆ ಅಶ್ಲೀಲ ನೃತ್ಯ ಮಾಡುತ್ತಿದ್ದರು’ ಎಂದೂ ತಿಳಿಸಿವೆ.

‍‘ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ವಿಶಾಲ್ (41), ಕಮಲೇಶ್ ಜೈನ್ (40), ಶೈಲೇಶ್ ಕಟಾರಿಯಾ (46), ನಂದೇಶ್ (40), ಮನೀಶ್ (32), ಅಂಕಿತ್ ಜೈನ್ (32), ವಿನೋದ್ (44) ಹಾಗೂ ಮಹಾವೀರ್ ಎಂಬುವವರನ್ನು ಬಂಧಿಸಲಾಗಿದೆ. ಪಾರ್ಟಿಯಲ್ಲಿ ಡ್ರಗ್ಸ್ ಮಾರಾಟದ ಬಗ್ಗೆಯೂ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ’ ಎಂದೂ ಮೂಲಗಳು ಹೇಳಿವೆ.

ಮದ್ಯವರ್ತಿಯೂ ಪರಾರಿ: ‘ಉದ್ಯೋ ಗದ ಆಮಿಷವೊಡ್ಡಿ ಹೊರ ರಾಜ್ಯ ಗಳಿಂದ ಯುವತಿಯರನ್ನು ಪಾರ್ಟಿಗೆ ಕರೆಸಲಾಗಿತ್ತು. ಅವರಿಂದ ಅಶ್ಲೀಲ ನೃತ್ಯ ಮಾಡಿಸಿ, ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗುತ್ತಿತ್ತು. ದಾಳಿ ವೇಳೆ ಆರು ಯುವತಿಯರನ್ನು ರಕ್ಷಿಸಲಾಗಿದೆ. ಯುವತಿಯರನ್ನು ಕರೆತಂದಿದ್ದ ಮಧ್ಯವರ್ತಿ ರಾಹುಲ್ ಅಲಿಯಾಸ್ ಅರ್ಜುಲ್ ಎಂಬಾತ ಪರಾರಿಯಾಗಿದ್ದಾನೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಪೊಲೀಸರ ವೈಫಲ್ಯ’

‘ಶ್ರೀನಿವಾಸ್‌ ಸುಬ್ರಹ್ಮಣ್ಯ ಒಡೆತನದ ವಿಲ್ಲಾದಲ್ಲಿ ಮೇಲಿಂದ ಮೇಲೆ ಪಾರ್ಟಿಗಳು ಹಾಗೂ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ. ಅಬ್ಬರದ ಸಂಗೀತದಿಂದ ಸ್ಥಳೀಯರಿಗೂ ತೊಂದರೆ ಆಗುತ್ತಿದೆ. ಪಾರ್ಟಿ ತಡೆಯುವಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ’ ಎಂದು ಸ್ಥಳೀಯರು ದೂರಿದ್ದಾರೆ.

‘ಪಾರ್ಟಿ ನಡೆಯುತ್ತಿದ್ದರೂ ಸ್ಥಳೀಯ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ. ಇದೀಗ, ಸಿಸಿಬಿ ಪೊಲೀಸರು ದಾಳಿ ಮಾಡಿದ ಮೇಲೆಯೇ ಅಕ್ರಮ ಬಯಲಾಗಿದೆ. ಇನ್ನಾದರೂ ವಿಲ್ಲಾಗಳ ಮೇಲೆ ಪೊಲೀಸರು ಕಣ್ಣಿಡಬೇಕು’ ಎಂದೂ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.