ಬೆಂಗಳೂರು: ನಗರದ 81 ವರ್ಷದ ವೃದ್ಧರೊಬ್ಬರನ್ನು ‘ಡಿಜಿಟಲ್ ಅರೆಸ್ಟ್ ’ ಹೆಸರಿನಲ್ಲಿ ಬೆದರಿಸಿದ ಸೈಬರ್ ವಂಚಕ ₹1.77 ಕೋಟಿ ಸುಲಿಗೆ ಮಾಡಿರುವ ಘಟನೆ ನಡೆದಿದೆ.
ಸದಾನಂದ ನಗರದ ಎನ್ಜಿಇಎಫ್ ಲೇಔಟ್ ನಿವಾಸಿ ಜಿ.ವಸಂತ್ ಕುಮಾರ್ ಅವರ ದೂರು ಆಧರಿಸಿ, ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಜುಲೈ 5 ರಂದು ಮುಂಬೈನ ಕೊಲಾಬಾ ಪೊಲೀಸರ ಹೆಸರಿನಲ್ಲಿ ಸಂದೀಪ್ ಜಾಧವ್ ಎಂಬಾತ ಕರೆ ಮಾಡಿ, ‘ನನ್ನ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಬ್ಯಾಂಕ್ವೊಂದರಲ್ಲಿ ಖಾತೆ ತೆರೆಯಲಾಗಿದೆ ಹಾಗೂ ಜೆಟ್ ಏರ್ವೇಸ್ನ ನರೇಶ್ ಗೋಯಲ್ ಜೊತೆ ನಂಟು ಇದೆ ಎನ್ನಲಾದ ಹಣ ಅಕ್ರಮ ವರ್ಗಾವಣೆಗೆ ಈ ಖಾತೆಯನ್ನು ಬಳಸಿಕೊಳ್ಳಲಾಗಿದೆ’ ಎಂದು ಹೇಳಿದ. ನಂತರ ಪೊಲೀಸ್ ಅಧಿಕಾರಿಗಳು ಎಂದು ಹೇಳಿಕೊಂಡು ಹಲವರು ಕರೆ ಮಾಡಿ, ಜುಲೈ 9ರಿಂದ 15ರವರೆಗೆ ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಹೇಳಿದರು. ವಿಡಿಯೊ ಕರೆ ಮೂಲಕ ವಾಟ್ಸ್ಆ್ಯಪ್ನಲ್ಲಿ ನಕಲಿ ಬಂಧನದ ವಾರಂಟ್ ತೋರಿಸಿ ಬೆದರಿಸಿದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ವಂಚಕನ ಮಾತು ನಂಬಿ ನನ್ನ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿದೆ. ತನಿಖೆಯ ಉದ್ದೇಶದಿಂದ ನನ್ನ ಖಾತೆಯಲ್ಲಿರುವ ಹಣವನ್ನು ಬೇರೊಂದು ಖಾತೆಗೆ ವರ್ಗಾಯಿಸಿ, ಸುರಕ್ಷಿತವಾಗಿ ಇಡಲಾಗುವುದು ಎಂದು ಹೇಳಿದ. ಹಾಗಾಗಿ ಆತ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಆರ್ಟಿಜಿಎಸ್ ಮೂಲಕ ₹1.77 ಕೋಟಿ ಹಣವನ್ನು ವರ್ಗಾವಣೆ ಮಾಡಿದೆ. ಹಣ ವರ್ಗಾವಣೆ ಬಳಿಕ ಕರೆ ಕಡಿತಗೊಳಿಸಲಾಯಿತು. ವಿಚಾರಣೆ ಮುಗಿದ ಬಳಿಕವೂ ಮರಳಿ ನನ್ನ ಖಾತೆಗೆ ಹಣ ವರ್ಗಾವಣೆ ಮಾಡಲಿಲ್ಲ. ವಂಚನೆಗೆ ಮಾಡಿರುವುದು ಗೊತ್ತಾಯಿತು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದುಕೊಂಡಿರುವ ಹಣವನ್ನು ವಾಪಸ್ ಕೊಡಿಸುವಂತೆ ಹಾಗೂ ವಂಚಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಣ ವರ್ಗಾವಣೆಯಾಗಿರುವ ಬ್ಯಾಂಕ್ ದಾಖಲೆಗಳ ವಿವರಗಳನ್ನು ಕಲೆಹಾಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.