
ಬೆಂಗಳೂರು: ಮಕ್ಕಳ ಕಡೆಗೆ ಪಟಾಕಿ ಎಸೆದು, ಕೈ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಿನಗರ ನಿವಾಸಿ ರಾಜೇಶ್ವರಿ ಕಂದಪ್ಪನವರ ದೂರಿನ ಮೇರೆಗೆ ಹಿರಾನಂದನಿ ನಿವಾಸಿಗಳಾದ ದೀಪಾಂಕ್ಸು ಶಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಅಕ್ಟೋಬರ್ 22ರಂದು ರಾತ್ರಿ ಮಕ್ಕಳು ಪಟಾಕಿ ಸಿಡಿಸುತ್ತಿದ್ದ ವೇಳೆ ಫ್ಲ್ಯಾಟ್ ಸಂಖ್ಯೆ ಎ–904 ನಿವಾಸಿ ದೀಪಾಂಕ್ಸು ಶಾ ಬಂದು ಅವರತ್ತ ಪಟಾಕಿ ಎಸೆದಿದ್ದಾರೆ. ಆಗ ಬೆಂಕಿ ಕಿಡಿ ತಾಗಿ ಮಗನ ಕೈ ಸುಟ್ಟಿದೆ. ಅದೃಷ್ಟವಶಾತ್ ಮಗಳು ಪಾರಾಗಿದ್ದಾಳೆ. ಇದಾದ ಕೆಲ ಹೊತ್ತಿನ ಬಳಿಕ ಹತ್ತು ಜನರೊಂದಿಗೆ ದೀಪಾಂಕ್ಸು ಅವರು ನನ್ನ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನೆ ಒಳಗೆ ಪ್ರವೇಶಿಸಲು ಯತ್ನಿಸಿದರು. ಮಕ್ಕಳು ಹಾಗೂ ನನ್ನ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ಎಲ್ಲರೂ ನನ್ನ ವಿರುದ್ಧ ಕೂಗಾಡಿದರು. ಸುಮ್ಮನಿರುವಂತೆ ಮನವಿ ಮಾಡಿದರೂ ಕೇಳಲಿಲ್ಲ. ಅವಾಚ್ಯ ಶಬ್ಧಗಳಿಂದ ನಿಂದಿಸಿ, ಗಲಾಟೆ ಮಾಡಿ ಭಯ ಉಂಟು ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕೊಡಿಗೆಹಳ್ಳಿ ಠಾಣೆ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.