ಬೆಂಗಳೂರು: ವಿಮಾನದಲ್ಲಿ ಪ್ರಯಾಣಿಸುವ ವೇಳೆ ಗಗನಸಖಿಯರ ಜೊತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದ ಆರೋಪದಡಿ ಅಕ್ರಂ ಅಹಮದ್ನನ್ನು (51) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಮಾಲ್ಡೀವ್ಸ್ನ ಅಕ್ರಂ, ಆಗಸ್ಟ್ 18ರಂದು ಕೃತ್ಯ ಎಸಗಿದ್ದ. ಗಗನಸಖಿಯೊಬ್ಬರು ನೀಡಿರುವ ದೂರು ಆಧರಿಸಿ ಆರೋಪಿಯನ್ನು ಸೆರೆಹಿಡಿಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ವ್ಯಾಪಾರ ಉದ್ದೇಶಕ್ಕಾಗಿ ಆರೋಪಿ, ವೀಸಾ ಪಡೆದುಕೊಂಡಿದ್ದ. ಮಾಲ್ಡೀವ್ಸ್ನಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುತ್ತಿದ್ದ. ಗಗನಸಖಿಯನ್ನು ತನ್ನ ಬಳಿ ಕರೆದಿದ್ದ ಆರೋಪಿ, ಬಿಯರ್ ಹಾಗೂ ಗೋಡಂಬಿ ತಂದುಕೊಡುವಂತೆ ಹೇಳಿದ್ದ. ಗಗನಸಖಿ ತಂದುಕೊಟ್ಟಿದ್ದರು.’
‘ಗಗನಸಖಿಯ ಕೈ ಮುಟ್ಟಿದ್ದ ಆರೋಪಿ, ಅಸಭ್ಯವಾಗಿ ವರ್ತಿಸಿದ್ದ. ‘ನಿನ್ನಂಥ ಹುಡುಗಿಗಾಗಿ ಹಲವು ವರ್ಷಗಳಿಂದ ಹುಡುಕುತ್ತಿದ್ದೆ. ನಿನಗೆ ಬಿಯರ್ ಹಾಗೂ ಗೋಡಂಬಿ ಬೆಲೆ ಮಾತ್ರವಲ್ಲದೇ, ಹೆಚ್ಚುವರಿಯಾಗಿ 100 ಡಾಲರ್ (₹ 8,300) ಕೊಡುತ್ತೇನೆ’ ಎಂದಿದ್ದ. ಹೆದರಿದ್ದ ಗಗನಸಖಿ, ಕೈ ಬಿಡಿಸಿಕೊಂಡು ಹೋಗಿದ್ದರು. ಇನ್ನೊಬ್ಬ ಗಗನಸಖಿ ಸ್ಥಳಕ್ಕೆ ಬಂದಿದ್ದರು. ಅವರ ಜೊತೆಗೆಯೂ ಆರೋಪಿ ಅಸಭ್ಯವಾಗಿ ವರ್ತಿಸಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ನಿಲ್ದಾಣಕ್ಕೆ ವಿಮಾನ ಬರುವವರೆಗೂ ಆರೋಪಿ ತನ್ನ ಕೃತ್ಯ ಮುಂದುವರಿಸಿದ್ದ. ಸೀಟಿನ ಮೇಲೆ ಎದ್ದು ನಿಂತು, ಪ್ಯಾಂಟ್ ಬಿಚ್ಚಲು ಯತ್ನಿಸಿ ಪ್ರಯಾಣಿಕರ ಎದುರು ಅನುಚಿತವಾಗಿ ವರ್ತಿಸಿದ್ದ. ವಿಮಾನ ಲ್ಯಾಡಿಂಗ್ ಆಗುತ್ತಿದ್ದಂತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ಗಗನಸಖಿಯರು, ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.