ADVERTISEMENT

ಬೆಂಗಳೂರಿನ 11 ಕೆರೆಗಷ್ಟೇ 30 ಮೀಟರ್‌ ಬಫರ್‌ ಝೋನ್‌!

ಆರ್. ಮಂಜುನಾಥ್
Published 29 ಜುಲೈ 2025, 0:01 IST
Last Updated 29 ಜುಲೈ 2025, 0:01 IST
ಅಭಿವೃದ್ಧಿ ಪಥದಲ್ಲಿರುವ ಕಗ್ಗದಾಸಪುರ ಕೆರೆ
ಅಭಿವೃದ್ಧಿ ಪಥದಲ್ಲಿರುವ ಕಗ್ಗದಾಸಪುರ ಕೆರೆ   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿಹೆಚ್ಚು ಒತ್ತುವರಿ ಆಗಿರುವ ಕೆರೆಗಳ ಪೈಕಿ, 11 ಕೆರೆಗಳು ಮಾತ್ರ 30 ಮೀಟರ್‌ ‘ಸಂರಕ್ಷಿತ ಪ್ರದೇಶ’ವನ್ನು (ಬಫರ್‌ ಝೋನ್‌) ಉಳಿಸಿಕೊಳ್ಳುವ ಸಾಧ್ಯತೆ ಇದೆ.

ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ–2024ರ (ಕೆಟಿಸಿಡಿಎ) ಅಡಿ ಇರುವ ‘ಎಲ್ಲ ಕೆರೆಗಳಿಗೆ 30 ಮೀಟರ್‌ ಬಫರ್‌ ಝೋನ್‌’ ಎಂಬ ನಿಯಮಕ್ಕೆ ತಿದ್ದುಪಡಿ ತಂದು,  ಕೆರೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ‘ಸಂರಕ್ಷಿತ ಪ್ರದೇಶ’ವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಪ್ರಸ್ತಾವದಂತೆ, ಬಿಬಿಎಂಪಿ ವ್ಯಾಪ್ತಿಯಲ್ಲಿರುವ 172 ಕೆರೆಗಳ ಬಫರ್‌ ಝೋನ್‌ 30 ಮೀಟರ್‌ಗಿಂತ ಕಡಿಮೆಯಾಗಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 11 ಕೆರೆಗಳು ಮಾತ್ರ 100 ಎಕರೆಗೂ ಹೆಚ್ಚು ವಿಸ್ತೀರ್ಣವನ್ನು ದಾಖಲೆಯಲ್ಲಿ ಹೊಂದಿವೆ. ಈ ಕೆರೆಗಳ ಸುತ್ತಲೂ 30 ಮೀಟರ್‌ ‘ಸಂರಕ್ಷಿತ ಪ್ರದೇಶ’ ಉಳಿಯಲಿದೆ. ಉಳಿದ ಕೆರೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್‌ ಝೋನ್‌ 6 ಮೀಟರ್‌ವರೆಗೂ ಕಡಿತವಾಗಲಿದೆ.

ADVERTISEMENT

ಸುಪ್ರೀಂ ಕೋರ್ಟ್‌, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಹೈಕೋರ್ಟ್‌ ಹಲವು ಬಾರಿ ಆದೇಶ ನೀಡಿದ್ದರೂ ಕೆರೆಗಳ ಒತ್ತುವರಿಯನ್ನು ಜಿಲ್ಲಾಡಳಿತ, ಕಂದಾಯ ಇಲಾಖೆ, ಬಿಬಿಎಂಪಿ, ಬಿಡಿಎ ತೆರವು ಮಾಡಿಲ್ಲ. ಬಫರ್‌ ಝೋನ್‌ ಅಂತೂ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಈ ಸಂದರ್ಭದಲ್ಲೇ ‘ಸಂರಕ್ಷಿತ ವಲಯ’ವನ್ನು ಕಡಿಮೆ ಮಾಡುವ ಸರ್ಕಾರದ ತೀರ್ಮಾನಕ್ಕೆ ನಾಗರಿಕರ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಬಿಬಿಎಂಪಿ ದಾಖಲೆಯಲ್ಲಿರುವ 202 ಕೆರೆಗಳಲ್ಲಿ 851 ಎಕರೆಗೂ ಹೆಚ್ಚು ಒತ್ತುವರಿಯಾಗಿದೆ. ಇದರಲ್ಲಿ ಬಿಡಿಎ, ನೈಸ್‌, ಕೊಳೆಗೇರಿ ಅಭಿವೃದ್ಧಿ ಮಂಡಳಿ, ಸರ್ಕಾರಿ–ಬಿಬಿಎಂಪಿ ಶಾಲೆ, ಉದ್ಯಾನ, ಕೇಂದ್ರ ಕಾರಾಗೃಹ, ಸ್ಮಶಾನ, ಕರ್ನಾಟಕ ಗೃಹ ಮಂಡಳಿ ಕ್ವಾಟ್ರಸ್, ಮಿಲಿಟರಿ, ರೈಲ್ವೆ ಇಲಾಖೆ, ಕೆಐಎಡಿಬಿ, ಬಿಡಬ್ಲ್ಯುಎಸ್‌ಎಸ್‌ಬಿ, ಬಿಎಂಟಿಸಿ, ಪೊಲೀಸ್‌ ಠಾಣೆ, ತಹಶೀಲ್ದಾರ್‌ ಕಚೇರಿಗಳೂ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿವೆ.  ಬೆಂಗಳೂರಿನಲ್ಲಿ 10 ವರ್ಷಗಳಿಂದ ಈಚೆಗೆ ಅಭಿವೃದ್ಧಿಗೊಂಡಿರುವ ಕೆರೆಗಳೂ ಒತ್ತುವರಿಯಾಗಿವೆ. ಗೋವು ಆಶ್ರಮ, ಕೃಷಿ, ಸೈಕಲ್‌ ಶಾಪ್, ಪೆಟ್ರೋಲ್‌ ಬಂಕ್‌, ರಸ್ತೆ.. ಹೀಗೆ ಹಲವು ರೀತಿಯಲ್ಲಿ ಅಷ್ಟೇ ಅಲ್ಲದೆ, ಖಾಸಗಿ ವ್ಯಕ್ತಿಗಳ ಹೆಸರಿನಲ್ಲೂ ಒತ್ತುವರಿ ಆಗಿರುವ ಪ್ರಮಾಣವನ್ನು ಬಿಬಿಎಂಪಿ ದಾಖಲು ಮಾಡಿದೆ. ಆದರೆ, ಇದನ್ನು ಹಲವು ವರ್ಷಗಳಿಂದ ತೆರವು ಮಾಡಿಲ್ಲ.

‘ಕೆರೆಗಳ ಅಂಗಳದ ಒತ್ತುವರಿ ತೆರವು ಮಾಡದೆ, ನ್ಯಾಯಾಲಯಗಳು ನಿಗದಿಪಡಿಸಿದ್ದ ಬಫರ್‌ ಝೋನ್‌ ವ್ಯಾಪ್ತಿಯನ್ನೂ ಕಡಿಮೆ ಮಾಡಿ ಪರಿಸರಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಲಾಗುತ್ತಿದೆ. ಕೆರೆಗಳು ಕಲುಷಿತಗೊಳ್ಳಲು ಇನ್ನಷ್ಟು ಅವಕಾಶ ಮಾಡಿಕೊಟ್ಟಂತಾಗಿದೆ’ ಎಂದು ಪರಿಸರ ಕಾರ್ಯಕರ್ತರು ದೂರಿದರು.

ಪ್ರಕೃತಿ ವಿಕೋಪ ಹೆಚ್ಚಳ: ಮಾಧುರಿ

‘ಕೆರೆಗಳ ಬಫರ್‌ ಝೋನ್‌ ಸುತ್ತಲಿನ ಸಮುದಾಯ ಹಾಗೂ ಜೀವವೈಧ್ಯತೆಯನ್ನು ಸುರಕ್ಷಿತವಾಗಿರಿಸುತ್ತದೆ. ಇಂತಹ ವೈಜ್ಞಾನಿಕ ಮತ್ತು ನೈಸರ್ಗಿಕ ವಾಸ್ತವವನ್ನು ನಿರ್ಲಕ್ಷಿಸಿ ಬಫರ್‌ ಝೋನ್‌ ಕಡಿಮೆ ಮಾಡಲು ಹೊರಟಿರುವುದು ದುರದೃಷ್ಟಕರ. ಇದರಿಂದ ದೀರ್ಘಕಾಲದಲ್ಲಿ ತೀವ್ರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಬಫರ್‌ ಝೋನ್‌ ಕಡಿಮೆ ಮಾಡುವುದರಿಂದ ಕೆರೆಗಳನ್ನು ಸಂರಕ್ಷಿಸುತ್ತಿರುವ ಮಾನವ ಪ್ರಯತ್ನಗಳನ್ನು ನಿರ್ಲಕ್ಷಿಸಲಾಗಿದೆ. ತಿದ್ದುಪಡಿ ಪ್ರಸ್ತಾವವನ್ನು ಕೈಬಿಡದಿದ್ದರೆ ಪ್ರಕೃತಿ ವಿಕೋಪಗಳನ್ನು ಹೆಚ್ಚಾಗಿ ಅನುಭವಿಸಬೇಕಾಗುತ್ತದೆ’ ಎಂದು ಫ್ರೆಂಡ್ಸ್‌ ಆಫ್‌ ಲೇಕ್ಸ್‌ನ ಸಹ–ಸಂಸ್ಥಾಪಕಿ ಮಾಧುರಿ ಸುಬ್ಬರಾವ್‌ ಹೇಳಿದರು.

ಭೂಮಾಫಿಯಾಗೆ ಮಣೆ: ಗೌಡಯ್ಯ

‘ಚಿನ್ನಕ್ಕಿಂತಲೂ ಭೂಮಿಗೆ ಹೆಚ್ಚು ಬೆಲೆಯಿರುವ ಬೆಂಗಳೂರಿನಲ್ಲಿ ರಾಜಕಾರಣಿಗಳು ಹಾಗೂ ಅವರ ಸಹವರ್ತಿಗಳು ರಿಯಲ್‌ ಎಸ್ಟೇಟ್‌ ಹಾಗೂ ಭೂ ಮಾಫಿಯಾದಲ್ಲಿ ತೊಡಗಿದ್ದಾರೆ. ಬೆಲೆ ಕಟ್ಟಲಾಗದ ಜಲಮೂಲಗಳನ್ನು ಸೃಷ್ಟಿಸಲು ಸಾಧ್ಯವಿಲ್ಲದಂತಹ ಸಂದರ್ಭದಲ್ಲೂ ಭೂ ಮಾಫಿಯಾಗೆ ಮಣೆ ಹಾಕಿ ಬಫರ್‌ ಝೋನ್ ಕಡಿತಗೊಳಿಸುತ್ತಿರುವುದು ಸರಿಯಲ್ಲ. ಪ್ರಕೃತಿ ಸಂಪತ್ತು ದೋಚಿ ಪರಿಸರ ನಾಶ ಮಾಡಿ ಭವಿಷ್ಯದಲ್ಲಿ ಯಾರೂ ಬದುಕಲಾಗದು ಎಂಬ ಕನಿಷ್ಠ ಜ್ಞಾನವಿಲ್ಲದಿರುವುದು ಖೇದಕರ’ ಎಂದು ಪರಿಸರ ಕಾರ್ಯಕರ್ತ ಎಚ್.ಕೆ. ಗೌಡಯ್ಯ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.