ADVERTISEMENT

ಬೆಂಗಳೂರು: ಮಾನಸಿಕ ಆರೋಗ್ಯ ವ್ಯವಸ್ಥೆ ದರ್ಶನ

ನಿಮ್ಹಾನ್ಸ್ ನಗರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ‘ಮಾನಸಿಕ ಆರೋಗ್ಯ ಸಂತೆ’ ಸಂಪನ್ನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 14:24 IST
Last Updated 18 ಅಕ್ಟೋಬರ್ 2025, 14:24 IST
ಸಂತೆಯಲ್ಲಿದ್ದ ಮಳಿಗೆಗಳಿಗೆ ಡಾ. ಸುದರ್ಶನ್ ಎಚ್. ಹಾಗೂ ನಿಮ್ಹಾನ್ಸ್‌ನ ಪ್ರಾಧ್ಯಾಪಕರು ಭೇಟಿ ನೀಡಿದರು
ಸಂತೆಯಲ್ಲಿದ್ದ ಮಳಿಗೆಗಳಿಗೆ ಡಾ. ಸುದರ್ಶನ್ ಎಚ್. ಹಾಗೂ ನಿಮ್ಹಾನ್ಸ್‌ನ ಪ್ರಾಧ್ಯಾಪಕರು ಭೇಟಿ ನೀಡಿದರು   

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ನಗರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ‘ಮಾನಸಿಕ ಆರೋಗ್ಯ ಸಂತೆ’ಯಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಯಿತು. 

ವಿವಿಧ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಹಾಗೂ ಶನಿವಾರ ನಡೆದ ಈ ಸಂತೆಯು, ಮಾನಸಿಕ ಆರೋಗ್ಯದ ಮಹತ್ವವನ್ನು ಸಾರುವ ಜತೆಗೆ ವಿವಿಧ ಸಮಸ್ಯೆಗಳಿಗೆ ಚಿಕಿತ್ಸಾ ವ್ಯವಸ್ಥೆಯನ್ನು ಪರಿಚಯಿಸಿತು. ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ಮೂರು ಸಾವಿರಕ್ಕೂ ಅಧಿಕ ಮಂದಿ ಈ ಸಂತೆಯಲ್ಲಿ ಪಾಲ್ಗೊಂಡಿದ್ದರು. 

ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ವಿವಿಧ ಮಳಿಗೆಗಳೂ ಸಂತೆಯಲ್ಲಿದ್ದವು. ಈ ಮಳಿಗೆಗಳಲ್ಲಿದ್ದ ಸಂಪನ್ಮೂಲ ವ್ಯಕ್ತಿಗಳು, ಮಾನಸಿಕ ಆರೋಗ್ಯ ನಿರ್ವಹಣೆ, ಸಮಸ್ಯೆಗಳ ನಿವಾರಣೆ ಹಾಗೂ ಚಿಕಿತ್ಸೆಯ ಬಗ್ಗೆ ತಿಳಿಸಿದರು. ಮಿದುಳಿನ ಕಾರ್ಯವೈಖರಿ ಬಗ್ಗೆ ಪ್ರಾತ್ಯಕ್ಷಿಕೆಯನ್ನೂ ನೀಡಲಾಯಿತು. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರ ಪ್ರದರ್ಶನವು ನಡೆಯಿತು.

ADVERTISEMENT

‘ಇಂದಿಗೂ ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರನ್ನು ಕೀಳಾಗಿ ಕಾಣುವುದು, ಅವರನ್ನು ನಿರ್ಲಕ್ಷ್ಯ ಮಾಡುವುದು ಕಾಣಬಹುದಾಗಿದೆ. ಜನರು ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಹಿಂಜರಿಯುತ್ತಿದ್ದಾರೆ. ಹೀಗಾಗಿ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಅತಿ ಮುಖ್ಯ’ ಎಂದು ಮನೋವೈದ್ಯರು ಅಭಿಪ್ರಾಯಪಟ್ಟರು.

ಸಮಾನ ಸ್ವೀಕಾರ: ಈ ಸಂತೆಯ ಉದ್ಘಾಟನಾ ಸಮಾರಂಭದಲ್ಲಿ ಕರುಣಾ ಟ್ರಸ್ಟ್ ಅಧ್ಯಕ್ಷ ಡಾ. ಸುದರ್ಶನ್ ಎಚ್., ‘ಜೀವನದಲ್ಲಿ ಸುಖ–ದುಃಖ ಸಹಜ. ಇವನ್ನು ಸಮಾನವಾಗಿ ಸ್ವೀಕರಿಸಿ, ಜೀವನದ ಸವಾಲುಗಳನ್ನು ಜಯಸಿಬೇಕು. ದುಃಖದ ಸಂದರ್ಭದಲ್ಲಿ ಕುಗ್ಗದೆ, ಆಪ್ತರ ಜತೆಗೆ ಸಮಾಲೋಚನೆ ನಡೆಸುವ ಮೂಲಕ ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಳ್ಳಬೇಕು’ ಎಂದರು.  

ಮಾನಸಿಕ ಆರೋಗ್ಯ ಕುರಿತ ತಿಳಿವಳಿಕೆಯ ಕೊರತೆ ನಿವಾರಿಸಿ ಸಮಸ್ಯೆಗಳನ್ನು ಗುರುತಿಸುವುದರ ಜತೆಗೆ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಬೇಕಿದೆ.
–ಡಾ. ಪ್ರತಿಮಾ ಮೂರ್ತಿ, ನಿಮ್ಹಾನ್ಸ್ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.