
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಮೈಕೋ ಲೇಔಟ್ ಠಾಣೆ ವ್ಯಾಪ್ತಿಯ ಸಿಲ್ಕ್ ಬೋರ್ಡ್ ಸಮೀಪದ ಕೆಎಎಸ್ ಕಾಲೋನಿಯಲ್ಲಿ ಮನೆಯ ಯಜಮಾನಿಯನ್ನು ಕೊಂದು, ಬಳಿಕ ಕೆಲಸಗಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಮಿಳುನಾಡಿನ ದೇವರಾಜ್ (50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅದಕ್ಕೂ ಮೊದಲು ಮನೆಯೊಡತಿ 65 ವರ್ಷದ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಭಾನುವಾರ ಮುಂಜಾನೆ 4.30ರ ಸುಮಾರಿಗೆ ಮಹಿಳೆಯ ಪತಿ ಮನೆಗೆ ಬಂದಾಗ ವಿಚಾರ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮಂಗಳೂರಿನ ಮಹಿಳೆ, ಪತಿ ಹಾಗೂ 27 ವರ್ಷದ ಪುತ್ರಿಯ ಜತೆ ಕೆಎಎಸ್ ಲೇಔಟ್ನಲ್ಲಿ ನೆಲಸಿದ್ದಾರೆ. ಕೊಲೆಯಾದ ಮಹಿಳೆಯ ಪತಿ ಮತ್ತು ಪುತ್ರಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪತಿ ಕಾರ್ಯನಿಮಿತ್ತ ದುಬೈಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದರು.
ವಿದೇಶದಿಂದ ಭಾನುವಾರ ಮುಂಜಾನೆ 4.30ರ ಸುಮಾರಿಗೆ ಮನೆಗೆ ಬಂದಿದ್ದು, ಮೊದಲ ಮಹಡಿಯಲ್ಲಿದ್ದ ಪುತ್ರಿ ಬಾಗಿಲು ತೆರೆದು ಮತ್ತೆ ತನ್ನ ಕೋಣೆಗೆ ಹೋಗಿದ್ದಾರೆ. ಪತಿ ತಮ್ಮ ಕೋಣೆಗೆ ಹೋದಾಗ ಪತ್ನಿ ಕೊಲೆಯಾಗಿರುವುದನ್ನು ಕಂಡು ಕೂಗಿಕೊಂಡಿದ್ದಾರೆ. ಪುತ್ರಿ ಬಂದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಘಟನೆ ನಡೆದ ಸಮಯದಲ್ಲಿ ಮನೆಯ ಮೊದಲ ಮಹಡಿಯಲ್ಲಿ ಮಗಳು ಇದ್ದರೂ, ಕೆಳ ಮಹಡಿಯಲ್ಲಿ ನಡೆದ ಕೃತ್ಯದ ಬಗ್ಗೆ ಅರಿವಿರಲಿಲ್ಲ ಎಂಬುದು ಗೊತ್ತಾಗಿದೆ ಎಂದು ಹೇಳಿದರು.
‘ಸುಮಾರು 10 ವರ್ಷಗಳಿಂದ ಕೆಎಎಸ್ ಲೇಔಟ್ನಲ್ಲಿ ದೇವರಾಜ್ ವಾಸವಾಗಿದ್ದು, ಸಮೀಪದ ಹತ್ತಾರು ಮನೆಗಳಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಕೆಲವೊಮ್ಮೆ ಆಯಾ ಮನೆಗಳಲ್ಲೇ ಮಲಗುತ್ತಿದ್ದ. ಅದೇ ರೀತಿ ಎರಡು ದಿನಗಳಿಂದ ಆರೋಪಿ, ಮಹಿಳೆ ಮನೆಯಲ್ಲಿ ಮಲಗುತ್ತಿದ್ದ. ಆಕೆಯ ಕತ್ತುಹಿಸುಕಿ ಕೊಲೆ ಮಾಡಿರುವುದು ಗೊತ್ತಾಗಿದೆ. ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ರಮೇಶ್ ಬಾನೊತ್, ‘ಮನೆಯ ಯಜಮಾನಿಯನ್ನು ಕೆಲಸಗಾರನೇ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಸೋಕೊ ತಂಡ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆ ಮುಂದುವರಿದಿದಿದೆ’ ಎಂದರು.
ಈ ಸಂಬಂಧ ಮೈಕೋ ಲೇಔಟ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.