
ಜಯಚಂದ, ತರುಣ್, ತೋಷ್
ಬೆಂಗಳೂರು: ದ್ವಿಚಕ್ರ ವಾಹನ ಅಥವಾ ಕಾರಿನಲ್ಲಿ ಬಂದು ಮೊಬೈಲ್ಗಳನ್ನು ಕಳ್ಳತನ ಮಾಡಿಕೊಂಡು ಹೋಗುವ ಪ್ರಕರಣಗಳು ಆಗಾಗ್ಗೆ ನಗರದಲ್ಲಿ ನಡೆಯುತ್ತಲೇ ಇವೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ವಿಮಾನದ ಮೂಲಕ ನಗರಕ್ಕೆ ಬಂದು, ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿದ್ದ ಪ್ರಕರಣವು ಪೊಲೀಸರ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ.
ದೆಹಲಿಯ ಜಯಚಂದ ಮತ್ತು ತರುಣ್ ಅವರನ್ನು ವೈಟ್ಫೀಲ್ಡ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ದೆಹಲಿಯಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಬಂಧಿತರಿಂದ ವಿವಿಧ ಕಂಪನಿಯ 14 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಮಹದೇವಪುರ ಅಪಾರ್ಟ್ಮೆಂಟ್ನಲ್ಲಿ ನೆಲಸಿದ್ದ ವ್ಯಕ್ತಿ ನೀಡಿದ ದೂರಿನ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ಮೊಬೈಲ್ ಕಳವು ಮಾಡಲೆಂದೇ ವಿಮಾನದಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದರು. ಅಲ್ಲಿಂದ ಕ್ಯಾಬ್ ಪಡೆದುಕೊಂಡು ನಗರಕ್ಕೆ ಬರುತ್ತಿದ್ದರು. ಬಂದವರು ನಗರದಲ್ಲಿ ಸುತ್ತಾಟ ನಡೆಸಿ ಐ–ಫೋನ್ ಹೊಂದಿರುವ ವ್ಯಕ್ತಿಗಳನ್ನು ಗುರುತಿಸುತ್ತಿದ್ದರು. ಐ–ಫೋನ್ ಮಾತ್ರ ಕಳ್ಳತನ ಮಾಡುತ್ತಿದ್ದರು. ಸಣ್ಣಪುಟ್ಟ ಮೊಬೈಲ್ ಮುಟ್ಟುತ್ತಿರಲಿಲ್ಲ. ಶ್ರೀಮಂತರು ನಡೆಸುವ ಪಾರ್ಟಿಗಳನ್ನು ಗುರುತಿಸಿ, ಅಲ್ಲಿಗೆ ತೆರಳುತ್ತಿದ್ದರು. ಅಲ್ಲಿ ದುಬಾರಿ ಬೆಲೆಯ ಫೋನ್ ಕಳ್ಳತನ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಐಷಾರಾಮಿ ಬಸ್ಗಳಲ್ಲೂ ಪ್ರಯಾಣಿಕರ ಸೋಗಿನಲ್ಲಿ ಹೋಗಿ ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಪ್ರಯಾಣಿಕರ ಗಮನವನ್ನು ಬೇರೆಡೆಗೆ ಸೆಳೆದು ಕೃತ್ಯ ಎಸಗುತ್ತಿದ್ದರು. ದೇವನಹಳ್ಳಿಯ ಸುತ್ತಮುತ್ತ ನಡೆಯುವ ಸಂಗೀತ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಆರೋಪಿಗಳು, 14 ಮೊಬೈಲ್ಗಳನ್ನು ಕದ್ದಿದ್ದರು. ಚನ್ನರಾಯಪಟ್ಟಣದಲ್ಲಿಯೂ ಆರೋಪಿಗಳು ಮೊಬೈಲ್ ಕಳವು ಮಾಡಿದ್ದು, ಅಲ್ಲಿಂದ ವೈಟ್ಫೀಲ್ಡ್ ಕಡೆಗೆ ಬರುವಾಗ ಮತ್ತೊಂದು ಐ–ಫೋನ್ ಕಳವು ಮಾಡಿದ್ದರು’ ಎಂದು ಪೊಲೀಸರು ಹೇಳಿದರು.
‘ಕದ್ದ ಮೊಬೈಲ್ಗಳನ್ನು ಲಾಡ್ಜ್ನಲ್ಲಿ ಬಚ್ಚಿಡುತ್ತಿದ್ದರು. ಲಾಡ್ಜ್ ಮೇಲೆ ದಾಳಿ ನಡೆಸಿದಾಗ ಮೊಬೈಲ್ ಕಳ್ಳತನ ಮಾಡುತ್ತಿದ್ದ ರಹಸ್ಯ ಬಯಲಾಗಿದೆ. ಬಂಧಿತರಿಂದ ₹10 ಲಕ್ಷ ಮೌಲ್ಯದ 14 ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.
ಪಿ.ಜಿಗಳಲ್ಲಿ ಲ್ಯಾಪ್ಟಾಪ್ ಕಳ್ಳತನ
ಬೆಂಗಳೂರು: ಪೇಯಿಂಗ್ ಗೆಸ್ಟ್ (ಪಿ.ಜಿ) ಕಚೇರಿ ಹಾಗೂ ಮನೆಗಳಿಗೆ ನುಗ್ಗಿ ಲ್ಯಾಪ್ಟಾಪ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ವೈಟ್ಫೀಲ್ಡ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಅಂಬೂರು ತಾಲ್ಲೂಕಿನ ಉದೈಯರಾಜಪಾಳ್ಯಂ ಗ್ರಾಮದ ಸಂತೋಷ್ (26) ಬಂಧಿತ. ಆರೋಪಿಯಿಂದ ₹10 ಲಕ್ಷ ಮೌಲ್ಯದ ವಿವಿಧ ಕಂಪನಿಯ 15 ಲ್ಯಾಪ್ಟಾಪ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಅಂಬೇಡ್ಕರ್ ನಗರದ ಶ್ರೀಸಾಯಿ ಪೇಯಿಂಗ್ ಗೆಸ್ಟ್ನಲ್ಲಿ ವಾಸವಿದ್ದ ಸಂಗಮೇಶ್ ಅವರ ಲ್ಯಾಪ್ಟಾಪ್ ಅನ್ನು ಆರೋಪಿ ಕಳ್ಳತನ ಮಾಡಿದ್ದ. ಸಂಗಮೇಶ್ ಅವರು ನೀಡಿದ ದೂರಿನ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸುದ್ದಗುಂಟೆಪಾಳ್ಯ ಸಂಪಿಗೆಹಳ್ಳಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಸಂತೋಷ್ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ಜಾಮೀನಿನ ಮೇಲೆ ಹೊರಬಂದ ನಂತರವೂ ಕಳ್ಳತನ ಮುಂದುವರಿಸಿದ್ದರು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.