ADVERTISEMENT

ಬೆಂಗಳೂರು: ಒಂದು ದಿನದ ಮಟ್ಟಿಗೆ ಡಿಸಿಪಿ ಆದ 13ರ ಬಾಲಕ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 16:22 IST
Last Updated 2 ಮಾರ್ಚ್ 2024, 16:22 IST
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಅವರು ಮೋಸಿನ್‌ ರಾಜ್‌ ಅವರಿಗೆ ಹೂಗುಚ್ಛ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಅವರು ಮೋಸಿನ್‌ ರಾಜ್‌ ಅವರಿಗೆ ಹೂಗುಚ್ಛ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.   

ಬೆಂಗಳೂರು: ಸಮವಸ್ತ್ರ ಧರಿಸಿ ಸೊಂಟದಲ್ಲಿ ಪಿಸ್ತೂಲ್ ಇಟ್ಟುಕೊಂಡು ಕೈಯಲ್ಲಿ ಲಾಠಿ ಹಿಡಿದು ಬಂದಿದ್ದ ಬಾಲಕನಿಗೆ ಪೊಲೀಸರು ಸೆಲ್ಯೂಟ್‌ ಹೊಡೆದರು. ಅಧಿಕಾರಿ ಬಂದಿದ್ದಾರೆಂದು ತಿಳಿದ ಡಿಸಿಪಿ ಸಹ ಸ್ಥಳಕ್ಕೆ ಬಂದು ಹೂಗುಚ್ಛ ನೀಡಿ ಬರ ಮಾಡಿಕೊಂಡರು.

ಇದು, ದಕ್ಷಿಣ ವಿಭಾಗದ (ಸಂಚಾರ) ಡಿಸಿಪಿ ಕಚೇರಿಯಲ್ಲಿ ಕಂಡು ಬಂದ ದೃಶ್ಯಗಳು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 13 ವರ್ಷದ ಬಾಲಕ ಮೋಸಿನ್‌ ರಾಜ್‌ ಎಂಬಾತ ಒಂದು ದಿನ ಡಿಸಿಪಿ ಆಗಿ ಸಂಭ್ರಮಪಟ್ಟನು.

‘ನಾನೊಬ್ಬ ಪೊಲೀಸ್‌ ಅಧಿಕಾರಿ ಆಗಬೇಕು’ ಎಂಬ ಮೋಸಿನ್‌ ರಾಜ್‌ನ ಆಸೆಯಂತೆ, ಆತನನ್ನು ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಅವರು ಒಂದು ದಿನದ ಡಿಸಿಪಿ ಆಗಿ ಮಾಡಿದರು. ತಮ್ಮ ಕುರ್ಚಿಯಲ್ಲಿ ಕೂರಿಸಿ, ಅಧಿಕಾರ ಚಲಾಯಿಸಲು ಅವಕಾಶ ಮಾಡಿಕೊಟ್ಟರು.

ADVERTISEMENT

ಆಸ್ಪತ್ರೆಯಿಂದ ಬೆಳಿಗ್ಗೆ 11.30 ಗಂಟೆಗೆ ಜಯನಗರದಲ್ಲಿರುವ ಡಿಸಿಪಿ ಕಚೇರಿಗೆ ಬಂದಿದ್ದ ಮೋಸಿನ್‌ ರಾಜ್‌ನನ್ನು ಡಿಸಿಪಿ ಹಾಗೂ ಸಿಬ್ಬಂದಿ ಸ್ವಾಗತಿಸಿದರು. ಪ್ರತಿಯೊಬ್ಬ ಸಿಬ್ಬಂದಿಯೇ ಸೆಲ್ಯೂಟ್ ಮಾಡಿ, ತಮ್ಮ ಪರಿಚಯ ಮಾಡಿಕೊಂಡರು. ಅವರೆಲ್ಲರಿಗೂ ಬಾಲಕ ಹಸ್ತಲಾಘವ ನೀಡಿದ.

ನಂತರ, ಕಚೇರಿಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಸ್ಪರ್ಶಿಸಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡ. ಆರೋಪಿಗಳನ್ನು ಇರಿಸುವ ಸೆಲ್‌ಗೂ ಹೋಗಿ ವೀಕ್ಷಿಸಿದ. ನಂತರ, ಡಿಸಿಪಿ ಅವರ ಕುರ್ಚಿಯಲ್ಲಿ ಕುಳಿತು ಅಧಿಕಾರ ಚಲಾಯಿಸಿದ. ಬಳಿಕ, ಕಚೇರಿ ವ್ಯಾಪ್ತಿಯ ಪ್ರದೇಶದಲ್ಲಿ ಜೀಪಿನಲ್ಲೇ ಗಸ್ತು ತಿರುಗಿದ. ಬಾಲಕನ ಖುಷಿ ಕಂಡು ಪೋಷಕರು ಸಂತೋಷಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.