ಬೆಂಗಳೂರು: ಗೊರಗುಂಟೆಪಾಳ್ಯದಲ್ಲಿ ಜನರು ಅನುಭವಿಸುತ್ತಿರುವ ಶೌಚಾಲಯ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸದಿದ್ದರಿಂದ, ಪಿಎಸ್ಐ ಶಾಂತಪ್ಪ ಹಾಗೂ ತಂಡದವರು ತಮ್ಮ ಖರ್ಚಿನಲ್ಲೇ 'ಮೊಬೈಲ್ ಶೌಚಾಲಯ' ಇರಿಸಿದ್ದಾರೆ.
ಗೊರಗುಂಟೆಪಾಳ್ಯದ ಬಸ್ ತಂಗುದಾಣಕ್ಕೆ ಹೊಂದಿಕೊಂಡ ಜಾಗದಲ್ಲಿ ಮೊಬೈಲ್ ಶೌಚಾಲಯ ವಾಹನ ನಿಲ್ಲಿಸಲಾಗಿದ್ದು, ಬುಧವಾರ ಬೆಳಿಗ್ಗೆ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಲಾಯಿತು. ತೃತೀಯ ಲಿಂಗಿ ಅವರಿಂದ ಶೌಚಾಲಯ ಉದ್ಘಾಟನೆ ಮಾಡಿಸಲಾಯಿತು.
ತಮ್ಮನ್ನು ದೂರವಿಡಲು ಇಚ್ಛಿಸುವವರ ಮುಂದೆ ಮಧ್ಯೆ, ಇಂಥ ಕೆಲಸಕ್ಕೆ ತಮ್ಮನ್ನು ಆಹ್ವಾನಿಸಿದ್ದಕ್ಕೆ ತೃತೀಯ ಲಿಂಗಿ ಭಾವುಕರಾದರು. ಹೂವಿನ ಮಾಲೆ ತುಂಡರಿಸುವ ಮೂಲಕ ಶೌಚಾಲಯ ಉದ್ಘಾಟಿಸಿದರು.
'ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ಉತ್ತರ ಭಾರತದ ರಾಜ್ಯಗಳಿಗೆ ಗೊರಗುಂಟೆಪಾಳ್ಯ ಮಾರ್ಗವಾಗಿ ಬಸ್ಗಳು ಸಂಚರಿಸುತ್ತವೆ. ಇಂತ ಗೊರಗುಂಟೆಪಾಳ್ಯದಲ್ಲಿ ವ್ಯವಸ್ಥಿತ ಶೌಚಾಲಯ ಇಲ್ಲದಿದ್ದರಿಂದ, ಜನರ ಯಾತನೆ ಅನುಭವಿಸುತ್ತಿದ್ದರು.
ಮಹಿಳೆಯರು, ವೃದ್ಧರು ಕಷ್ಟಪಡುತ್ತಿದ್ದರು. ಈ ಸಮಸ್ಯೆ ನಿವಾರಿಸಲು ಹಲವು ಅಭಿಯಾನ ನಡೆಸಿದರೂ ಪ್ರಯೋಜನವಾಗಲಿಲ್ಲ' ಎಂದರು.
'ಜಾಗವಿದ್ದರೂ ಮೊಬೈಲ್ ಶೌಚಾಲಯ ಇರಿಸಲು ಬಿಬಿಎಂಪಿ ಆಸಕ್ತಿ ತೋರಲಿಲ್ಲ. ಹೀಗಾಗಿ, ನಾನು ಹಾಗೂ ಕೆಲ ಯುವಕರು ಸೇರಿ ಈ ಶೌಚಾಲಯ ಇರಿಸಿದ್ದೇವೆ. ಇದು ಪ್ರಯಾಣಿಕರಿಗೆ ಅನುಕೂಲ ಆಗಲಿದೆ' ಎಂದರು.
'ವಾಹನದಲ್ಲಿ ಐದು ಶೌಚಾಲಯ ಇವೆ. ಇದಕ್ಕೆ ಬೇಕಾದ ನೀರಿನ ವ್ಯವಸ್ಥೆಯು ವಾಹನದಲ್ಲಿ ಇದೆ. ಎಲ್ಲವೂ ತುಂಬಿದ ನಂತರ, ವಿಲೇವಾರಿ ಮಾಡುವ ವ್ಯವಸ್ಥೆಯೂ ಇದೆ' ಎಂದೂ ಹೇಳಿದರು.
ಪ್ರಯಾಣಿಕ ಸೋಮಣ್ಣ, 'ಕೆಲಸಕ್ಕೆ ಹೋಗಲು ಗೊರಗುಂಟೆಪಾಳ್ಯ ಬಂದು ಬಸ್ ಹತ್ತುತ್ತೇನೆ. ಈ ವೇಳೆ ನಿಸರ್ಗದ ಕರೆ ಬಂದರೆ, ರಸ್ತೆ ಬದಿಯೇ ಹೋಗಬೇಕಾದ ಪರಿಸ್ಥಿತಿ ಇತ್ತು. ಇದೀಗ ಮೊಬೈಲ್ ಶೌಚಾಲಯ ಇರಿಸಿರುವುದು ಅನುಕೂಲ ಆಗಿದೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.