ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಪೊಲೀಸ್ ಸಮವಸ್ತ್ರದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಮನೆಗೆ ನುಗ್ಗಿ ₹20 ಲಕ್ಷ ನಗದು ಮತ್ತು ಚಿನ್ನದ ಅಭರಣ ದೋಚಿ ಪರಾರಿಯಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಬ್ಯಾಡರಹಳ್ಳಿ ಠಾಣೆಯ ಪೊಲೀಸರಿಗೆ ಒಬ್ಬ ದರೋಡೆಕೋರನ ಸುಳಿವು ಲಭಿಸಿದೆ. ಮತ್ತೊಬ್ಬನ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಬಿ.ಇ.ಎಲ್ ಲೇಔಟ್ ನಿವಾಸಿ ಹೊಂಬಾಳೇಗೌಡ ಅವರ ಮನೆಯಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪೊಲೀಸ್ ಸಮವಸ್ತ್ರದಲ್ಲಿ ಬಂದಿದ್ದ ಇಬ್ಬರು, ಮನೆಯಲ್ಲಿದ್ದವರನ್ನು ಬೆದರಿಸಿ ₹ 20 ಲಕ್ಷ ನಗದು, 500 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ತನಿಖೆ ವೇಳೆ ಮಹತ್ವದ ಸುಳಿವು ಸಿಕ್ಕಿದೆ ಎಂದು ಮೂಲಗಳು ಹೇಳಿವೆ.
‘ಪ್ರಕರಣ ದಾಖಲಾದ ಮೇಲೆ ಸುಕೊ (ಸೀನ್ ಆಫ್ ಕ್ರೈಂ) ತಂಡ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲಿ ಪತ್ತೆಯಾದ ಬೆರಳಚ್ಚುಗಳನ್ನು ಪರೀಕ್ಷೆ ಮಾಡಿದಾಗ, ಅದು ಈಗಾಗಲೇ ಜೈಲಿನಲ್ಲಿ ಇರುವ ಒಬ್ಬ ಕೈದಿಯ ಬೆರಳಚ್ಚಿಗೆ ಹೋಲಿಕೆ ಆಗುತ್ತಿದೆ. ನ್ಯಾಯಾಲಯದ ಅನುಮತಿ ಪಡೆದು ಬಾಡಿ ವಾರಂಟ್ ಮೇಲೆ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುವುದು’ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.
ದರೋಡೆ ನಡೆದ ಮರುದಿನವೇ ಮತ್ತೆ ಜೈಲಿಗೆ?: ‘ಕೈದಿ ಪೆರೋಲ್ ಮೇಲೆ ಹೊರಕ್ಕೆ ಬಂದಿದ್ದ. ದರೋಡೆ ನಡೆದ ಮರುದಿನವೇ ಮತ್ತೆ ಜೈಲಿಗೆ ವಾಪಸ್ ಹೋಗಿರುವುದು ಗೊತ್ತಾಗಿದೆ. ಜೈಲಿನಿಂದ ಹೊರಬಂದು ದರೋಡೆ ಮಾಡಿ, ಮತ್ತೆ ಜೈಲು ಸೇರಿದರೆ ಪೊಲೀಸರಿಗೆ ಯಾವುದೇ ಸುಳಿವು ಸಿಗುವುದಿಲ್ಲ ಎಂದು ಭಾವಿಸಿ ಕೃತ್ಯ ಎಸಗಿದ್ದಾನೆ’ ಎಂದು ಮೂಲಗಳು ತಿಳಿಸಿವೆ.
ಹೊಂಬಾಳೇಗೌಡ ಅವರು ಜಮೀನು ಮಾರಾಟ ಮಾಡಿದ್ದು, ಮನೆಯಲ್ಲಿ ಹಣ ಇಟ್ಟಿದ್ದರು. ಈ ವಿಚಾರ ದರೋಡೆಕೋರರಿಗೆ ಗೊತ್ತಾಗಿತ್ತು. ರಿಯಲ್ ಎಸ್ಟೇಟ್ ಏಜೆಂಟ್ ಮನೆಯಲ್ಲಿ ಹಣವಿದೆ ಎಂಬ ಮಾಹಿತಿ ದರೋಡೆಕೋರರಿಗೆ ಹೇಗೆ ಗೊತ್ತಾಯಿತು ಎನ್ನುವ ಆಯಾಮದಲ್ಲೂ ತನಿಖೆ ಸಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಡಿವಿಆರ್ ಹೊತ್ತೊಯ್ದಿರುವ ಆರೋಪಿಗಳು: ಮನೆಯಲ್ಲಿದ್ದವರ ಮೊಬೈಲ್ಗಳು ಮತ್ತು ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ, ಅಕ್ಕಪಕ್ಕದ ಮನೆಯಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಸಂಗ್ರಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.