
ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ‘ಪತ್ನಿ ಮೋಸ ಮಾಡಿದ್ದಾಳೆ’ ಎಂದು ಆರೋಪಿಸಿ ರೌಡಿಶೀಟರ್ವೊಬ್ಬರು ಸಂಪಿಗೆಹಳ್ಳಿ ಪೊಲೀಸ್ ಠಾಣೆ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಮೊಹಮ್ಮದ್ ಸಿದ್ದಿಕಿ ಅಲಿಯಾಸ್ ‘ಬರ್ನ್ ಸಿದ್ದಿಕಿ’ ಆತ್ಮಹತ್ಯೆಗೆ ಯತ್ನಿಸಿದವರು.
ಗುರುವಾರ ರಾತ್ರಿ ಬಾಟಲಿಯೊಂದರಲ್ಲಿ ಪೆಟ್ರೋಲ್ ತುಂಬಿಕೊಂಡು ಠಾಣೆ ಬಳಿಗೆ ಸಿದ್ದಿಕಿ ಬಂದಿದ್ದರು. ಪೆಟ್ರೋಲ್ ಸುರಿದುಕೊಂಡು, ನಂತರ ಲೈಟರ್ನಿಂದ ಬೆಂಕಿ ಹಚ್ಚಿಕೊಂಡಿದ್ದರು. ಸ್ಥಳದಲ್ಲಿದ್ದ ಪೊಲೀಸರು ಸಿದ್ದಿಕಿ ಅವರನ್ನು ರಕ್ಷಣೆ ಮಾಡಿದರು.
ಸಿದ್ದಿಕಿ ಅವರ ದೇಹದ ಶೇ 10ರಷ್ಟು ಭಾಗ ಸುಟ್ಟಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಿದ್ದಿಕಿ ಅವರ ವಿರುದ್ಧ ದೂರು ನೀಡಲು ಠಾಣೆಗೆ ಪತ್ನಿ ಬಂದಿದ್ದರು. ಅದರ ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದ ರೌಡಿಶೀಟರ್, ಠಾಣೆ ಎದುರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಮೂಲಗಳು ಹೇಳಿವೆ.
‘ಕರ್ತವ್ಯನಿರತ ಪೊಲೀಸರಿಗೆ ಬೆದರಿಕೆ ಹಾಕಿದ್ದರಿಂದ ಮೊಹಮ್ಮದ್ ಸಿದ್ದಿಕಿ ವಿರುದ್ಧ ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.
ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯ ರೌಡಿಶೀಟರ್ ಆಗಿರುವ ಮೊಹಮ್ಮದ್ ಸಿದ್ದಿಕಿ ವಿರುದ್ಧ ರಾಬರಿ, ಕೊಲೆ, ಕೊಲೆ ಯತ್ನ ಸೇರಿ ಕೆಲವು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.