ADVERTISEMENT

ಉನ್ನತ ಶಿಕ್ಷಣದಲ್ಲಿ ಬಹುಶಿಸ್ತೀಯ ಹೆಜ್ಜೆ ಅಗತ್ಯ: ಡಾ.ಕೆ. ಕಸ್ತೂರಿ ರಂಗನ್‌

ಬೆಂಗಳೂರು ತಂತ್ರಜ್ಞಾನ ಶೃಂಗ’ದಲ್ಲಿ ಹಿರಿಯ ವಿಜ್ಞಾನಿ ಡಾ.ಕೆ. ಕಸ್ತೂರಿ ರಂಗನ್‌ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 20:24 IST
Last Updated 21 ನವೆಂಬರ್ 2020, 20:24 IST
ಡಾ.ಕೆ. ಕಸ್ತೂರಿ ರಂಗನ್‌
ಡಾ.ಕೆ. ಕಸ್ತೂರಿ ರಂಗನ್‌   

ಬೆಂಗಳೂರು: ಭವಿಷ್ಯದಲ್ಲಿ ಲಭ್ಯವಾಗುವ ಉದ್ಯೋಗಗಳ ಅಗತ್ಯಕ್ಕೆ ಪೂರಕವಾದ ಮಾನವ ಸಂಪನ್ಮೂಲವನ್ನು ಸೃಜಿಸುವ ದೃಷ್ಟಿಯಿಂದ ಉನ್ನತ ಶಿಕ್ಷಣ ಸಂಸ್ಥೆಗಳು ಬಹುಶಿಸ್ತೀಯ ಅಧ್ಯಯನದ ಕಡೆಗೆ ಹೆಜ್ಜೆ ಇಡುವ ಅಗತ್ಯವಿದೆ ಎಂದು ಹಿರಿಯ ವಿಜ್ಞಾನಿ ಡಾ.ಕೆ. ಕಸ್ತೂರಿ ರಂಗನ್‌ ಪ್ರತಿಪಾದಿಸಿದರು.

ಬೆಂಗಳೂರು ತಂತ್ರಜ್ಞಾನ ಶೃಂಗ’ದಲ್ಲಿ ಶನಿವಾರ ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ– ಡಿಜಿಟಲ್‌ ಕಲಿಕೆ’ ಕುರಿತು ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲಿ ಉದ್ಯೋಗಗಳು ‘ಹೈಬ್ರಿಡ್‌ ಕೌಶಲ’ಗಳನ್ನು ಬಯಸುತ್ತವೆ. ಅದಕ್ಕೆ ಪೂರಕವಾಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬಹುಶಿಸ್ತೀಯ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕಿದೆ’ ಎಂದರು.

ವಿಜ್ಞಾನ, ಎಂಜಿನಿಯರಿಂಗ್‌, ವಿದ್ಯಾರ್ಥಿಗಳು ಸಾಹಿತ್ಯ, ಮಾನವೀಯ ವಿಭಾಗಗಳ ಪಠ್ಯಗಳನ್ನೂ ಕಲಿಯಬೇಕಿದೆ. ಅದೇ ರೀತಿ ಸಾಹಿತ್ಯ ಮತ್ತು ಮಾನವೀಯ ವಿಭಾಗಗಳ ವಿದ್ಯಾರ್ಥಿಗಳಿಗೆ ವಿಜ್ಞಾನ, ಎಂಜಿನಿಯರಿಂಗ್‌ ಕುರಿತು ಕಲಿಕೆಗೆ ಅವಕಾಶ ಕಲ್ಪಿಸ
ಬೇಕು. ಈ ಬಗೆಯ ಬಹುಶಿಸ್ತೀಯ ಅಧ್ಯಯನವು ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ADVERTISEMENT

‘ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ವಿದ್ಯಾರ್ಥಿ
ಗಳಿಗೆ ಕೋರ್ಸ್‌ ಮತ್ತು ವಿಷಯಗಳ ಆಯ್ಕೆಯಲ್ಲಿ ಅವಕಾಶಗಳನ್ನು ಹೆಚ್ಚಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಉತ್ತೇಜಿಸುವುದಕ್ಕಾಗಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಲಾಗುತ್ತಿದೆ. ಮೂರನೇ ವಯಸ್ಸಿನಿಂದಲೇ ಶಿಕ್ಷಣದತ್ತ ಮಕ್ಕಳನ್ನು ಆಕರ್ಷಿಸುವ ಉದ್ದೇಶವಿದೆ. ವಿದ್ಯಾರ್ಥಿ ಮತ್ತು ಬೋಧಕರು ಇಬ್ಬರನ್ನೂ ಕೇಂದ್ರೀ
ಕರಿಸಿದ ಶಿಕ್ಷಣ ಕ್ರಮಕ್ಕೆ ಆದ್ಯತೆ ನೀಡಲಾಗಿದೆ’ ಎಂದು ಕಸ್ತೂರಿ ರಂಗನ್‌ ವಿವರಿಸಿದರು.

ಸ್ಥಳೀಯ ಭಾಷೆಯಲ್ಲಿ ಕಲಿಕೆಗೆ ಉತ್ತೇಜನ ನೀಡುವುದು ಹೊಸ ಶಿಕ್ಷಣ ನೀತಿಯ ಪ್ರಮುಖ ಭಾಗವಾಗಿದೆ. ಭಾರತದ ಪರಂಪರೆ ಮತ್ತು ಮೌಲ್ಯಗಳೊಂದಿಗೆ ಬೆಸೆದುಕೊಂಡಿರುವ ಜ್ಞಾನವನ್ನು ವಿದ್ಯಾರ್ಥಿಗಳು ಪಡೆಯಲು ಪೂರಕವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶವಿದೆ. ವಿವಿಧ ಜ್ಞಾನ ಶಾಖೆಗಳ ನಡುವೆ ಅಂತರ್‌ ಸಂಪರ್ಕ ಮತ್ತು ಸಮಷ್ಠಿ ಅಭಿವೃದ್ಧಿಯ್ತ ಹೊಸ ಶಿಕ್ಷಣ ನೀತಿ ಆದ್ಯತೆ ನೀಡಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.