ADVERTISEMENT

ಬೆಂಗಳೂರು ಸುರಂಗ ರಸ್ತೆ ಯೋಜನೆಗೆ ಕಾರ್ಯಾದೇಶ ಎಂಬುದು ಸುಳ್ಳು: ಹೈಕೋರ್ಟ್‌ಗೆ ಎಜಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 14:46 IST
Last Updated 2 ಫೆಬ್ರುವರಿ 2026, 14:46 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ವರೆಗೂ ಸುರಂಗ ರಸ್ತೆ ನಿರ್ಮಾಣ ಯೋಜನೆ ಕಾಮಗಾರಿ ಆರಂಭಿಸಲು 2026 ಫೆಬ್ರುವರಿ ಅಂತ್ಯಕ್ಕೆ ಸರ್ಕಾರ ಕಾರ್ಯಾದೇಶ ನೀಡಲಿದೆ ಎಂಬ ಹೇಳಿಕೆ ಸುಳ್ಳು’ ಎಂದು ಅಡ್ವೋಕೇಟ್‌ ಜನರಲ್‌ (ಎಜಿ) ಹೈಕೋರ್ಟ್‌ಗೆ ಸ್ಪಷ್ಟಪಡಿಸಿದರು.

‘ಯೋಜನೆಗೆ ಸಂಬಂಧಿಸಿದ ಟೆಂಡರ್ ಅಧಿಸೂಚನೆ ರದ್ದುಪಡಿಸಬೇಕು’ ಎಂದು ಕೋರಿ ಚಲನಚಿತ್ರ ನಟ ಪ್ರಕಾಶ್ ಬೆಳವಾಡಿ ಮತ್ತು ಡಾ.ಆದಿಕೇಶವುಲು ರವೀಂದ್ರ, ವಿನೋದ್‌ ವ್ಯಾಸುಲು ಹಾಗೂ ಎನ್‌.ಎಸ್‌.ಮುಕುಂದ ಸಲ್ಲಿಸಿರುವ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ಕೋರಿದರು.

ADVERTISEMENT

ಇದಕ್ಕೆ ಅರ್ಜಿದಾರರ ಪರ ವಕೀಲರು, ‘ಯೋಜನೆಯ ಕಾಮಗಾರಿ ಕೈಗೆತ್ತಿಗೊಳ್ಳಲು ಈ ತಿಂಗಳಾಂತ್ಯಕ್ಕೆ ಸರ್ಕಾರ ಕಾರ್ಯಾದೇಶ ನೀಡಲಿದೆ’ ಎಂದು ಮಾಧ್ಯಮಗಳ ವರದಿಯನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದನ್ನು ಸ್ಪಷ್ಟವಾಗಿ ಅಲ್ಲಗಳೆದ ಅಡ್ವೊಕೇಟ್‌ ಜನರಲ್‌, ‘ಈ ತಿಂಗಳಾಂತ್ಯಕ್ಕೆ ಕಾರ್ಯಾದೇಶ ನೀಡಲಾಗುವುದು ಎಂಬ ಹೇಳಿಕೆಯಲ್ಲಿ ಯಾವುದೇ ವಾಸ್ತವಾಂಶ ಇಲ್ಲ. ಇದು ಸಂಪೂರ್ಣ ಸುಳ್ಳು. ಈ ಕುರಿತು ನಾನು ನ್ಯಾಯಾಲಯಕ್ಕೆ ಭರವಸೆ ನೀಡುತ್ತೇನೆ’ ಎಂದರು.

ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಿತು. ಅಂತೆಯೇ, ಪ್ರತಿವಾದಿಗಳಾದ ನವದೆಹಲಿಯ ‘ರೋಡಿಕ್‌ ಕನ್ಸಲ್‌ಟೆಂಡ್‌ ಪ್ರೈವೇಟ್‌ ಲಿಮಿಟೆಡ್‌’ ಮತ್ತು ‘ಅಲ್ಟಿನೋಕ್‌ ಕನ್ಸಲ್‌ಟಿಂಗ್‌ ಎಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌’ ಕಂ‍ಪನಿಗಳನ್ನು ಪ್ರತಿನಿಧಿಸುವ ನಿರ್ದೇಶಕರಿಗೆ ನ್ಯಾಯಾಲಯ ಜಾರಿಗೊಳಿಸಿರುವ ನೋಟಿಸ್‌ ಅನ್ನು ಅರ್ಜಿದಾರರು ಖುದ್ದಾಗಿ ತಲುಪಿಸಬಹುದು ಎಂದು ತಿಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.