ADVERTISEMENT

ಉಗ್ರ ದಾಳಿ ತಡೆಗೆ ಸಮರ್ಥವಾಗಿಲ್ಲ ಬೆಂಗಳೂರಿನ 45 ಹೋಟೆಲ್: ಸೇನೆ, ಪೊಲೀಸ್

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 3:14 IST
Last Updated 30 ಜನವರಿ 2021, 3:14 IST
ಸಾಂದರ್ಭಿಕ ಚಿತ್ರ (ಕೃಪೆ: ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ: ಐಸ್ಟಾಕ್)   

ಬೆಂಗಳೂರು: ಒಂದು ವೇಳೆ ಭಯೋತ್ಪಾದಕ ದಾಳಿಯಾದರೆ ಅದನ್ನು ತಡೆಯಲು ಬೇಕಾದ ಸಿದ್ಧತೆ ಬೆಂಗಳೂರಿನ 45 ಅತ್ಯುನ್ನತ ಹೋಟೆಲ್‌ಗಳ ಪೈಕಿ ಒಂದರಲ್ಲಿಯೂ ಇಲ್ಲ ಎಂದು ಸೇನೆ ಹಾಗೂ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಭಯೋತ್ಪಾದಕರು ಸಾಮಾನ್ಯವಾಗಿ ದೊಡ್ಡ ಹೋಟೆಲ್‌ಗಳನ್ನು ಪ್ರಮುಖ ಗುರಿಯನ್ನಾಗಿಸಿಕೊಂಡಿರುತ್ತಾರೆ ಎಂದು ಉಗ್ರ–ನಿಗ್ರಹ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಉನ್ನತ ದರ್ಜೆಯ ಹೋಟೆಲ್‌ಗಳನ್ನು ಉಗ್ರಗಾಮಿಗಳು ಅಸಹ್ಯಕರವಾಗಿ ಕಾಣುತ್ತಾರೆ. ಇದಕ್ಕೆ, ಅಂತಹ ಹೋಟೆಲ್‌ಗಳು ಮುಕ್ತ ಸಮಾಜ ಹಾಗೂ ಪಾಶ್ಚಾತ್ಯ ಆದರ್ಶಗಳನ್ನು ಪ್ರತಿನಿಧಿಸುತ್ತಿರುವುದು ಕಾರಣ’ ಎಂದು ಉಗ್ರ–ನಿಗ್ರಹ ಕೇಂದ್ರದ ನಿರ್ದೇಶಕ ಬ್ರಿಗೇಡಿಯರ್ ಎಸ್.ಬೂಬೇಶ್ ಕುಮಾರ್ ಹೇಳಿದ್ದಾರೆ. ‘ಭಯೋತ್ಪಾದನೆ–ನಿಗ್ರಹ ಮತ್ತು ಆತಿಥ್ಯ ಕ್ಷೇತ್ರಕ್ಕಿರುವ ಭದ್ರತಾ ಆತಂಕಗಳು’ ವಿಷಯದ ಮೇಲಿನ ಕಾರ್ಯಾಗಾರದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.

ಭದ್ರತಾ ವ್ಯವಸ್ಥೆ ನವೀಕರಿಸಲು ಆಂತರಿಕ ಭದ್ರತಾ ವಿಭಾಗವು (ಐಎಸ್‌ಡಿ) ಹೋಟೆಲ್‌ಗಳಿಗೆ ನೆರವಾಗುತ್ತಿದೆ. ಇದರ ಭಾಗವಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಆಂತರಿಕ ಭದ್ರತಾ ವಿಭಾಗ ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.

ಆತಿಥ್ಯ ಉದ್ಯಮ ಕ್ಷೇತ್ರದಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಭದ್ರತಾ ಪ್ರಕ್ರಿಯೆ ತಳಮಟ್ಟದಲ್ಲಿದೆ ಎಂದು ‘ವಿಶ್ವ ವ್ಯಾಪಾರ ಕೇಂದ್ರ’ದ ಅಧ್ಯಕ್ಷ ವಿನೀತ್ ವರ್ಮಾ ಹೇಳಿದ್ದಾರೆ. ಭದ್ರತಾ ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿಲ್ಲ ಎಂದೂ ಅವರು ಹೇಳಿದ್ದಾರೆ.

ಹೋಟೆಲ್‌ ಮೇಲೆಯೇ ಹೆಚ್ಚು ದಾಳಿ: 2019ರಲ್ಲಿ ನಡೆದ ಉಗ್ರ ದಾಳಿಗಳಲ್ಲಿ ಹೆಚ್ಚಿನವು ಹೋಟೆಲ್‌ಗಳ ಮೇಲೆಯೇ ನಡೆದಿವೆ. ನಂತರ ಧಾರ್ಮಿಕ ಸ್ಥಳಗಳ ಮೇಲೆ ನಡೆದಿವೆ ಎಂದು ಬ್ರಿಗೇಡಿಯರ್ ಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.