ಬೆಂಗಳೂರು:ನಗರದಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್ಜಿ) ಚಾಲಿತ ಬಸ್ಗಳ ಸೇವೆ ಆರಂಭಿಸುವ ಪ್ರಸ್ತಾವಕ್ಕೆ ಮತ್ತೆ ಜೀವ ಬಂದಿದೆ. ಸಿಎನ್ಜಿ ಬಸ್ಗಳ ಖರೀದಿಗೆ ಆಗಲಿರುವ ಹೆಚ್ಚುವರಿ ವೆಚ್ಚ ಭರಿಸಿಕೊಡಲು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಜಿಐಎಎಲ್) ಮುಂದೆ ಬಂದಿದೆ.
ಈ ಸಂಬಂಧ ಸಂಸ್ಥೆಯಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಕೆ.ಜನ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಜೂನ್ 21ರಂದು ಪತ್ರ ಬರೆದಿದ್ದಾರೆ. ‘100 ಡೀಸೆಲ್ ಎಂಜಿನ್ ಬಸ್ಗಳ ಬದಲಿಗೆ100 ಸಿಎನ್ಜಿ ಬಸ್ಗಳ ಖರೀದಿಗೆ ಆಗಲಿರುವ ವ್ಯತ್ಯಾಸದ ಮೊತ್ತವನ್ನು ಪಾವತಿಸಲಾಗುವುದು. 200 ಬಸ್ಗಳನ್ನು ಖರೀದಿಸಿದರೆ ಶೇಕಡ 50ರಷ್ಟು ಮೊತ್ತವನ್ನು ಭರಿಸಲಾಗುವುದು’ ಎಂದು ತಿಳಿಸಿದ್ದಾರೆ.
‘ಸಿಎನ್ಜಿ ಬಸ್ಗಳನ್ನು ಖರೀದಿಸುವ ನಿರ್ಧಾರವನ್ನು ಸಂಸ್ಥೆಯ ಆಡಳಿತ ಮಂಡಳಿ ತೆಗೆದುಕೊಳ್ಳುತ್ತದೆ. ನಾವು ಪ್ರಸ್ತಾವನೆ ಸಿದ್ಧಪಡಿಸುತ್ತೇವೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ವಿ. ಪ್ರಸಾದ್ ತಿಳಿಸಿದರು.
‘ಸಿಎನ್ಜಿ ಸರ್ವಿಸ್ ಸ್ಟೇಷನ್ಗಳ ನಿರ್ಮಾಣಕ್ಕೆ ಜಿಐಎಎಲ್ ಅಧಿಕಾರಿಗಳು ಪದೇ ಪದೇ ಆಸಕ್ತಿ ತೋರುತ್ತಿದ್ದಾರೆ. ಆದರೆ, ₹50 ಕೋಟಿ ನಷ್ಟದಲ್ಲಿರುವ ಬಿಎಂಟಿಸಿಗೆ ಸರ್ವೀಸ್ ಸ್ಟೇಷನ್ ಮತ್ತು ಅದಕ್ಕೆ ಬೇಕಿರುವ ಮಾನವ ಸಂಪನ್ಮೂಲ ಹೊಂದಿಸಿಕೊಳ್ಳುವುದು ಕಷ್ಟವಾಗಿತ್ತು. ಈಗ ಜಿಐಎಎಲ್ ಸಂಸ್ಥೆ ಅದಕ್ಕೂ ಹಣ ಒದಗಿಸಲಿದೆ’ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದರು. ಡೀಸೆಲ್ ಬೆಲೆ ಲೀಟರ್ಗೆ ₹ 68.88 ಇದ್ದು, ಸಿಎನ್ಜಿ ಇಂಧನ ಪ್ರತಿ ಕೆ.ಜಿಗೆ ₹58.55 ಇದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.