ಬೆಂಗಳೂರು: ಅಪಘಾತದಲ್ಲಿ ಬಿಎಂಟಿಸಿಯ ನೌಕರರು ಮೃತಪಟ್ಟಲ್ಲಿ ಅವರ ಕುಟುಂಬದವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಸಂಸ್ಥೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಈ ಒಡಂಬಡಿಕೆಯು ಮೂರು ವರ್ಷಗಳ ಅವಧಿ ಹೊಂದಿದ್ದು, ಗುರುವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎಸ್ಬಿಐ ಪ್ರಧಾನ ವ್ಯವಸ್ಥಾಪಕ ವಿ.ಎನ್. ಶರ್ಮಾ ಅವರ ಸಮ್ಮುಖದಲ್ಲಿ ಒಡಂಬಡಿಕೆ ಮಾಡಲಾಯಿತು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್., ಬ್ಯಾಂಕಿಂಗ್ ಹಾಗೂ ಆಪರೇಶನ್ಸ್ ವಿಭಾಗದ ಡಿಸಿಜಿಎಂ ಆಲೋಕ್ ಕುಮಾರ್ ಚತುರ್ವೇದಿ ಉಪಸ್ಥಿತರಿದ್ದರು.
ವೈಯಕ್ತಿಕ ಅಪಘಾತದಲ್ಲಿ ಮೃತಪಟ್ಟರೆ ₹ 1 ಕೋಟಿ, ವಿಮಾನ ಅಪಘಾತದಲ್ಲಿ ಮೃತಪಟ್ಟರೆ ₹ 1 ಕೋಟಿ, ಶಾಶ್ವತ ಪೂರ್ಣ ಅಂಗವೈಕಲ್ಯ ಉಂಟಾದರೆ ₹ 1 ಕೋಟಿ, ಶಾಶ್ವತ ಭಾಗಶ ಅಂಗ ವೈಕಲ್ಯ ಉಂಟಾದರೆ ₹ 80 ಲಕ್ಷ ವಿಮಾ ಪರಿಹಾರ ದೊರೆಯಲಿದೆ. ಉಚಿತ ಜೀವ ವಿಮೆ ಪರಿಹಾರ ಮೊತ್ತ ₹ 6 ಲಕ್ಷ, ₹ 15 ಸಾವಿರ ವರೆಗೆ ಆಸ್ಪತ್ರೆಯಲ್ಲಿ ನಗದು ಸೌಲಭ್ಯ ಇರಲಿದೆ.
ಅಪಘಾತ ಸಂಭವಿಸಿದ ಸಮಯದಲ್ಲಿ 18 ರಿಂದ 25 ವರ್ಷಗಳ ವಯೋಮಿತಿಯುಳ್ಳ ಹೆಣ್ಣು ಮಕ್ಕಳಿದ್ದರೆ ಅವರ ಮದುವೆಗೆ ಒಬ್ಬರಿಗೆ ₹ 5 ಲಕ್ಷ, ಇಬ್ಬರು ಹೆಣ್ಣುಮಕ್ಕಳಿಗೆ ₹ 10 ಲಕ್ಷ ವರೆಗೆ ದೊರೆಯಲಿದೆ. ಗಂಡು ಮಕ್ಕಳ ಶಿಕ್ಷಣಕ್ಕೆ ₹ 8 ಲಕ್ಷವರೆಗೆ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ₹ 10 ಲಕ್ಷವರೆಗೆ ಈ ವಿಮಾ ಯೋಜನೆಯಡಿ ದೊರೆಯಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.