ಬೆಂಗಳೂರು: ಒಂದೆಡೆ ಬ್ರಾಹ್ಮಣ ಸಮುದಾಯದವರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚಿಂತನ ಮಂಥನ ನಡೆದರೆ, ಇನ್ನೊಂದೆಡೆ ಸಂಗೀತ–ನೃತ್ಯಗಳ ಪ್ರದರ್ಶನ, ಮತ್ತೊಂದೆಡೆ ಕೈ ಬೀಸಿ ಕರೆಯುವ ಆಹಾರ ಹಾಗೂ ಕರಕುಶಲ ಮಳಿಗೆಗಳು..
ಈ ದೃಶ್ಯ ಕಂಡು ಬಂದದ್ದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವು ಸುವರ್ಣ ಮಹೋತ್ಸವದ ಪ್ರಯುಕ್ತ ನಗರದ ಅರಮನೆ ಮೈದಾನದಲ್ಲಿ (ತ್ರಿಪುರವಾಸಿನಿ) ಹಮ್ಮಿಕೊಂಡಿರುವ ಬ್ರಾಹ್ಮಣ ಮಹಾ ಸಮ್ಮೇಳನದಲ್ಲಿ. ಎರಡು ದಿನಗಳ ಈ ಸಮ್ಮೇಳನಕ್ಕೆ ಶನಿವಾರ ಚಾಲನೆ ದೊರೆಯಿತು.
ಬೆಳಿಗ್ಗೆ 5.30ರಿಂದಲೇ ಗಾಯತ್ರಿ ಮಹಾಯಾಗ ಸೇರಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲಾಯಿತು. ಮುಂಜಾನೆಯಿಂದಲೇ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ವಿಪ್ರರು, ಅರಮನೆ ಮೈದಾನವನ್ನು ಆವರಿಸಿಕೊಂಡಿದ್ದರು.
ವಿವಿಧ ಮಠಾಧೀಶರನ್ನು ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಸಮ್ಮೇಳನದ ವೇದಿಕೆಯ ಪ್ರವೇಶ ದ್ವಾರದಲ್ಲಿನ ಯಕ್ಷಗಾನದ ಬೃಹತ್ ಮುಖವರ್ಣಿಕೆ ನೆರೆದಿದ್ದವರ ಗಮನ ಸೆಳೆಯಿತು. ಎಡಭಾಗದಲ್ಲಿ ಗಾಯನ–ನೃತ್ಯ ಪ್ರದರ್ಶನಕ್ಕೆ ಪ್ರತ್ಯೇಕ ವೇದಿಕೆ ನಿರ್ಮಿಸಲಾಗಿತ್ತು. ಬಲಭಾಗದಲ್ಲಿ ಪಾಣಿಗ್ರಾಹಿ ವಿವಾಹ ವೇದಿಕೆ (ವಧು–ವರ ಅನ್ವೇಷಣಾ ಕೇಂದ್ರಗಳು) ನಿರ್ಮಿಸಲಾಗಿತ್ತು. ಅಲ್ಲಿ ಮದುವೆಯ ಮಂಟಪವನ್ನೂ ನಿರ್ಮಿಸಿರುವುದು ವಿಶೇಷ.
ಪುಸ್ತಕಗಳ ಬಿಡುಗಡೆ: ಸಮ್ಮೇಳನದಲ್ಲಿ ಪಾಣಿಗ್ರಹಣ ವೇದಿಕೆ, ವಾಣಿಜ್ಯ ಹಾಗೂ ಆಹಾರ ಮೇಳವನ್ನು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಇದೇ ವೇಳೆ ಸ್ವಾಮಿ ಶಿವಪ್ರಕಾಶಾನಂದ ಸ್ವರಸ್ವತಿ ಅವರ ‘ವೇದಾಂತ ತತ್ವ ಚಿಂತನಂ’ ಕೃತಿಯನ್ನು ಬಸವನಗುಡಿ ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ ಬಿಡುಗಡೆ ಮಾಡಿದರು. ಛಾಯಾಪತಿ ಕೆ.ಎನ್. ಅವರ ‘ಸ್ವಾತಂತ್ರ ಹೋರಾಟದಲ್ಲಿ ಬ್ರಾಹ್ಮಣರ ಪಾತ್ರ’, ಸುರೇಶ್ ಮೂನ ಅವರ ‘ಮರೆಯಲಾಗದ ಮಹನೀಯರು’ ಕೃತಿಯನ್ನು ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಬಿಡುಗಡೆ ಮಾಡಿದರು. ಹಾನಗಲ್ ವಿರೂಪಾಕ್ಷಶಾಸ್ತ್ರಿ ಅವರ ‘ಧ್ಯಾನಬಿಂದೂಪನಿಷದರ್ಥವು’ ಕೃತಿಯೂ ಇದೇ ವೇಳೆ ಲೋಕಾರ್ಪಣೆಯಾಯಿತು.
ರಾಜಸ್ಥಾನದ ಮುಖ್ಯಮಂತ್ರಿ ಭಜನ್ಲಾಲ್ ಶರ್ಮ ಅವರು ಸಮ್ಮೇಳನದಲ್ಲಿ ಭಾಗವಹಿಸಿ, ಬ್ರಾಹ್ಮಣ ಸಮುದಾಯದ ಕೊಡುಗೆಗಳು ಹಾಗೂ ಬೆಂಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಧ್ಯಾಹ್ನದ ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜರಿಗೆ ಯುವ ಕಲಾವಿದರಿಂದ ನಾದ ನಮನ ಸಲ್ಲಿಸಲಾಯಿತು. ಬಳಿಕ ವಿಪ್ರ ಸಾಧಕರಿಗೆ ‘ಬ್ರಹ್ಮತೇಜ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಉತ್ತರಾದಿ ಮಠದ ಸತ್ಯಾತ್ಮತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಚನ ನಡೆಯಿತು. ನೃತ್ಯಗುರು ವಿದ್ಯಾ ರವಿಶಂಕರ್ ಅವರ ತಂಡದಿಂದ ‘ಶ್ರೀ ಕೃಷ್ಣ’ ನೃತ್ಯ ರೂಪಕ ಪ್ರದರ್ಶನವಾಯಿತು. ಬಳಿಕ ಪ್ರಭಾತ್ ಆರ್ಟ್ ಇಂಟರ್ನ್ಯಾಷನಲ್ ತಂಡದವರು ‘ಆ 18 ದಿನಗಳು–ಯುಗಾಂತ್ಯ ಆರಂಭ’ ನೃತ್ಯ ನಾಟಕ ಪ್ರಸ್ತುತಪಡಿಸಿದರು.
ಎಲ್ಲರ ಒಳಿತನ್ನು ಬಯಸುವವರು ಬ್ರಾಹ್ಮಣರು. ಸಮಾಜದಲ್ಲಿ ಎಷ್ಟೇ ಜಾತಿಗಳಿದ್ದರೂ ಅವೆಲ್ಲವು ನಮ್ಮ ಧರ್ಮ ಸಂಸ್ಕೃತಿ ರಕ್ಷಣೆಯ ಕೋಟೆಯಾಗಲಿವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪೇಜಾವರ ಮಠ
ಸನಾತನ ಧರ್ಮವನ್ನು ಬ್ರಾಹ್ಮಣ ಸಮುದಾಯವು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಬ್ರಾಹ್ಮಣರು ಕೊಡುಗೆ ನೀಡುತ್ತಿದ್ದಾರೆಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಬ್ರಾಹ್ಮಣರು ಒಗ್ಗಟ್ಟಾಗಿ ಸಾಗುವ ಅಗತ್ಯವಿದೆ. ಸಮುದಾಯ ಒಡೆದರೆ ಬೇರೆಯವರು ಅದರ ಲಾಭ ಪಡೆದುಕೊಳ್ಳುತ್ತಾರೆ. ನಮ್ಮ ಧರ್ಮ ಸಂಸ್ಕೃತಿ ಕಾಪಾಡಬೇಕುಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.