ADVERTISEMENT

ಯುವತಿ ನಾಪತ್ತೆ ಪ್ರಕರಣದ ಮಾಹಿತಿ ನೀಡಲು ಲಂಚ; ಕಾಡುಗೋಡಿ ಠಾಣೆ ಎಎಸ್‌ಐ ಬಂಧನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 16:50 IST
Last Updated 2 ಅಕ್ಟೋಬರ್ 2021, 16:50 IST

ಬೆಂಗಳೂರು: ಯುವತಿ ನಾಪತ್ತೆ ಕುರಿತಂತೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಸದ್ಯದ ಸ್ಥಿತಿಯ ಮಾಹಿತಿ ನೀಡಲು ₹ 5,000 ಲಂಚ ಪಡೆದ ಕಾಡುಗೋಡಿ ಪೊಲೀಸ್‌ ಠಾಣೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶನಿವಾರ ಬಂಧಿಸಿದೆ.

ಜಯನಗರದ ನಿವಾಸಿಯೊಬ್ಬರು ರಾಮಮೂರ್ತಿ ನಗರದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಯುವತಿ ನಾಪತ್ತೆಯಾಗಿದ್ದಾರೆ ಎಂದು ಅವರ ಪೋಷಕರು ಕಾಡುಗೋಡಿ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಲಾಗಿತ್ತು. ವಿವಾಹ ನೋಂದಣಿ ಮಾಡಿಸಲು ಮುಂದಾಗಿದ್ದ ದಂಪತಿ, ನಾಪತ್ತೆ ಪ್ರಕರಣದ ತನಿಖೆ ಕುರಿತು ಮಾಹಿತಿ ನೀಡುವಂತೆ ತಮ್ಮ ಸ್ನೇಹಿತರ ಮೂಲಕ ಎಎಸ್‌ಐ ಅವರನ್ನು ಸಂಪರ್ಕಿಸಿದ್ದರು.

ಪ್ರಕರಣದ ಮಾಹಿತಿ ನೀಡಲು ₹ 5,000 ಲಂಚ ಕೊಡುವಂತೆ ಶ್ರೀನಿವಾಸ್‌ ಬೇಡಿಕೆ ಇಟ್ಟಿದ್ದರು. ಈ ಕುರಿತು ನವ ದಂಪತಿಯ ಸ್ನೇಹಿತರೊಬ್ಬರು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು. ಶನಿವಾರ ಎಎಸ್‌ಐ ಲಂಚದ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಮಾಹಿತಿ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.