ADVERTISEMENT

‍ಪತ್ನಿ ಕಳುಹಿಸದಿದ್ದಕ್ಕೆ ಸಂಬಂಧಿಗೆ ಚಾಕು ಇರಿತ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 16:05 IST
Last Updated 17 ಜನವರಿ 2022, 16:05 IST

ಬೆಂಗಳೂರು: ಪತ್ನಿಯನ್ನು ತನ್ನ ಜೊತೆ ಕಳುಹಿಸುತ್ತಿಲ್ಲವೆಂಬ ಕಾರಣಕ್ಕೆ, ಅವರ ಅಕ್ಕನ ಗಂಡನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಆರೋಪದಡಿ ಸುನೀಲ್ ಎಂಬಾತನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಬಂಡೆನಗರದಲ್ಲಿ ವಾಸವಿರುವ ಸುನೀಲ್, ಜ. 14ರಂದು ರಾತ್ರಿ ಕೃತ್ಯ ಎಸಗಿದ್ದ. ಚಾಕು ಇರಿತದಿಂದ ಗಾಯಗೊಂಡಿರುವ ರಿಷಿಕುಮಾರ್ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಹದಗೆಟ್ಟಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಘಟನೆ ಬಗ್ಗೆ, ಆರೋಪಿ ಸುನೀಲ್‌ನ ಪತ್ನಿ ಸುಸ್ಮಿತಾ ಅವರ ಅಕ್ಕ ಜ್ಯೋತಿಕಾ ದೂರು ನೀಡಿದ್ದಾರೆ. ಹಲ್ಲೆ ಹಾಗೂ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಸುನೀಲ್‌ನನ್ನು ಬಂಧಿಸಲಾಗಿದೆ’ ಎಂದು ತಿಳಿಸಿವೆ.

ADVERTISEMENT

‘ಸುನೀಲ್ ಹಾಗೂ ಸುಸ್ಮಿತಾ ನಡುವೆ ಕೌಟುಂಬಿಕ ಜಗಳವಿತ್ತು. ಪತಿಯಿಂದ ಬೇಸತ್ತಿದ್ದ ಅವರು, ಜ್ಯೋತಿಕಾ ಹಾಗೂ ರಿಷಿಕುಮಾರ್ ಅವರ ಮನೆಯಲ್ಲಿ ಉಳಿದುಕೊಂಡಿದ್ದರು. ಪತ್ನಿಯನ್ನು ತನ್ನ ಜೊತೆ ಕಳುಹಿಸುವಂತೆ ಆರೋಪಿ ಆಗಾಗ ಜಗಳ ಮಾಡಲಾರಂಭಿಸಿದ್ದ’

‘ಕೋಪಗೊಂಡಿದ್ದ ಸುನೀಲ್, ಸಹಚರ ಕುಳ್ಳ ಬಾಬು ಜೊತೆ ಸೇರಿ ಜ. 14ರಂದು ರಾತ್ರಿ ಮನೆ ಬಳಿ ಗಲಾಟೆ ಮಾಡಿದ್ದ. ಅದನ್ನು ಪ್ರಶ್ನಿಸಿದ್ದ ರಿಷಿಕುಮಾರ್ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ತೀವ್ರ ಗಾಯಗೊಂಡಿದ್ದ ರಿಷಿಕುಮಾರ್ ಅವರನ್ನು ಸಂಬಂಧಿಕರಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.