ADVERTISEMENT

ಬೆಂಗಳೂರು: ಕ್ಯಾನ್ಸರ್‌ ರೋಗಿಗಳಿಗೆ ‘ನೆಮ್ಮದಿ’; ಉಚಿತ ಆರೈಕೆ ಕೇಂದ್ರ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 0:30 IST
Last Updated 21 ಡಿಸೆಂಬರ್ 2025, 0:30 IST
‘ನೆಮ್ಮದಿ’ ಉಚಿತ ಕ್ಯಾನ್ಸರ್‌ ಉಪಶಾಮಕ ಕೇಂದ್ರ
‘ನೆಮ್ಮದಿ’ ಉಚಿತ ಕ್ಯಾನ್ಸರ್‌ ಉಪಶಾಮಕ ಕೇಂದ್ರ   

ನೆಲಮಂಗಲ: ಸಮೀಪದ ರಾವುತ್ತನಹಳ್ಳಿ ರಸ್ತೆಯ (ಆರ್‌ಟಿಒ ಬಳಿ) ಶಿವನಪುರದ ಇ.ಕೆ.ಎಸ್ಟೇಟ್‌ನಲ್ಲಿ ಸುಕೃತಿ ಚಾರಿಟಬಲ್‌ ಟ್ರಸ್ಟ್‌, ಬೆಂಗಳೂರಿನ ಮಿಡ್‌ಟೌನ್‌ ರೋಟರಿ ಸಂಸ್ಥೆ ಹಾಗೂ ದಾನಿಗಳ ಸಹಯೋಗದೊಂದಿಗೆ ಕ್ಯಾನ್ಸರ್‌ ರೋಗಿಗಳಿಗೆ ಉಚಿತ ಆರೈಕೆ ಕೇಂದ್ರ ‘ನೆಮ್ಮದಿ’ ಭಾನುವಾರ ಆರಂಭವಾಗಲಿದೆ.

55 ಹಾಸಿಗೆಗಳ ಸಾಮರ್ಥ್ಯದ ಕೇಂದ್ರಕ್ಕೆ ಪ್ರವೇಶ ಉಚಿತ. ₹20 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಪರಿಕರಗಳು, ಸೌಲಭ್ಯಗಳೊಂದಿಗೆ ಕ್ಯಾನ್ಸರ್‌ ಪೀಡಿತರಿಗೆ ಆಶಾಕಿರಣವಾಗಿ ನೆಮ್ಮದಿಯ ಆರೈಕೆ ನೀಡಲು ಸಜ್ಜಾಗಿದೆ ಎಂದು ರೋಟರಿ ಮಿಡ್‌ಟೌನ್‌ ಅಧ್ಯಕ್ಷ ರಾಜೇಶ್‌ ಶಾ ತಿಳಿಸಿದ್ದಾರೆ.

ಕೇಂದ್ರದ ಕಟ್ಟಡಕ್ಕೆ ವಿಧಾನ ಪರಿಷತ್‌ ಮಾಜಿ ಸದಸ್ಯ ಇ.ಕೃಷ್ಣಪ್ಪ ಅವರು ಭೂಮಿ ದಾನ ಮಾಡಿದ್ದಾರೆ. ಪ್ರೆಸ್ಟೀಜ್‌ ಫೌಂಡೇಷನ್‌, ಸನ್ಸೆರಾ ಫೌಂಡೇಷನ್‌, ಫೆದರ್‌ಲೈಟ್‌ ಸಮೂಹ, ವೆಸ್ಮಾರ್ಕ್‌ ಡೋರ್ಸ್‌, ಮಲ್ಲೇಶ್ವರಂನ ಸಾಯಿ ಮಂಡಳಿ ಟ್ರಸ್ಟ್‌, ಕುಮಾರ್‌ ಎಲೆಕ್ಟ್ರಿಕಲ್ಸ್‌ ಹಾಗೂ ‌ಸಂಘ– ಸಂಸ್ಥೆಗಳು ಸಹಕಾರ ನೀಡಿವೆ. 

ADVERTISEMENT

ಪ್ರತಿವರ್ಷ ದೇಶದಲ್ಲಿ 60 ಲಕ್ಷದಿಂದ 80 ಲಕ್ಷ ಜನರು ಕ್ಯಾನ್ಸರ್‌ಗೆ ತುತ್ತಾಗಿ ಆರೈಕೆಯ ಕೊರತೆಯಿಂದ ನರಳುತ್ತಿದ್ದಾರೆ. ಶೇ2 ರಷ್ಟು ರೋಗಿಗಳು ಮಾತ್ರ ಉಪಶಾಮಕ ಸಾಮರ್ಥ್ಯ ಹೊಂದಿದ್ದಾರೆ. ಈ ಅಂತರ ಕಡಿಮೆ ಮಾಡುವುದು ಕೇಂದ್ರದ ಪ್ರಯತ್ನ ಎಂದು ಟ್ರಸ್ಟ್‌ ಧರ್ಮದರ್ಶಿ ರೊಟೇರಿಯನ್‌ ಬಿ.ಎಸ್‌.ನಾಗರಾಜನ್‌ ತಿಳಿಸಿದರು.

ಜಾಗತಿಕ ಮಾನವೀಯ ಮಿಷನ್‌ ಸ್ಥಾಪಕ ಮಧುಸೂದನ ಸಾಯಿ ಅವರು ಕೇಂದ್ರ ಉದ್ಘಾಟಿಸಲಿದ್ದು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಲೋಕಸಭಾ ಸದಸ್ಯರಾದ ಡಾ.ಸಿ.ಎನ್‌.ಮಂಜುನಾಥ್‌, ಡಾ.ಕೆ.ಸುಧಾಕರ್‌, ಶಾಸಕ ಎಸ್‌.ಆರ್‌.ವಿ‍ಶ್ವನಾಥ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಯು.ಬಿ.ವೆಂಕಟೇಶ್‌ ಭಾಗವಹಿಸುವರು.

ಮಾಹಿತಿಗೆ ಮೊ. 9980832062 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.