ಬೆಂಗಳೂರು: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಗಳ (ಕೆಜಿಟಿಟಿಐ) ಖಾತೆಯಿಂದ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರ ಸೋದರಿಯ ಖಾತೆಗೆ ಹಣ ವರ್ಗಾವಣೆಯಾಗಿದ್ದ ಪ್ರಕರಣದಲ್ಲಿ ಸಿಬಿಐ 16 ಕಡೆ ಸೋಮವಾರ ಶೋಧ ನಡೆಸಿದೆ.
ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ 12 ಕಡೆ ಮತ್ತು ಆಂಧ್ರ ಪ್ರದೇಶದ 4 ಕಡೆಗಳಲ್ಲಿ ಶೋಧ ನಡೆದಿದೆ.
ತನಿಖೆಯ ಸಂದರ್ಭದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಕೆಜಿಟಿಟಿಐಗೆ ಸೇರಿದ ಹಣವನ್ನು ಅಕ್ರಮವಾಗಿ ಬೇರೆಡೆಗೆ ವರ್ಗ ಮಾಡಿರುವುದು ಪತ್ತೆಯಾಗಿದೆ. ಆ ವೇಳೆ, ಬಿ. ನಾಗೇಂದ್ರ ಅವರು ಪರಿಶಿಷ್ಟ ಪಂಗಡ ಕಲ್ಯಾಣ ಖಾತೆಯ ಸಚಿವರಾಗಿದ್ದರು.
ಬ್ಯಾಂಕ್ ಆಫ್ ಬರೋಡಾದ ಸಿದ್ದಯ್ಯ ರಸ್ತೆ ಶಾಖೆಯಲ್ಲಿನ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಖಾತೆಯಿಂದ ಎಸ್ಕೆಆರ್ ಇನ್ಫ್ರಾಸ್ಟ್ರಕ್ಚರ್ ಮತ್ತು ಗೋಲ್ಡನ್ ಎಸ್ಟಾಬ್ಲಿಷ್ಮೆಂಟ್ ಸಂಸ್ಥೆಗಳಿಗೆ ₹2.17 ಕೋಟಿ ಹಣ ವರ್ಗಾವಣೆಯಾಗಿತ್ತು. ಈ ಸಂಸ್ಥೆಗಳು ಬಿ. ನಾಗೇಂದ್ರ ಅವರ ಆಪ್ತರಾದ ನೆಕ್ಕಂಟಿ ನಾಗರಾಜ್ ಅವರಿಗೆ ಸೇರಿದ್ದಾಗಿವೆ. ಈ ಮೊತ್ತದಲ್ಲಿ ಸುಮಾರು ₹1.20 ಕೋಟಿಯಷ್ಟು ನಾಗೇಂದ್ರ ಅವರ ಸಹೋದರಿ, ಸೋದರ ಮಾವ ಮತ್ತು ಆಪ್ತ ಸಹಾಯಕ ಸೇರಿದಂತೆ ಅವರ ಸಹಚರರು ಹಾಗೂ ಸಂಬಂಧಿಕರ ಖಾತೆಗಳಿಗೆ ವರ್ಗವಾಗಿದೆ.
ಕೆನರಾ ಬ್ಯಾಂಕ್ನ ವಿಲ್ಸನ್ ಗಾರ್ಡನ್ ಶಾಖೆಯ ಕೆಜಿಟಿಟಿಐಯ ಖಾತೆಯಿಂದ ₹64 ಲಕ್ಷವನ್ನು ಸದ್ಗುರು ಶಿಕ್ಷಣ ಟ್ರಸ್ಟ್ ಮತ್ತು ಸದ್ಗುರು ಸೊಲ್ಯೂಷನ್ಸ್ಗೆ, ನಂತರ ಸ್ಕಿಲ್ ಪಾಯಿಂಟ್ ತರಬೇತಿ ಮತ್ತು ಸ್ಟೈಲ್ ಮಷೀನ್ ಸಂಸ್ಥೆ, ಮೆಸರ್ಸ್ ಧನಲಕ್ಷ್ಮಿ ಎಂಟರ್ಪ್ರೈಸಸ್ ಖಾತೆಗೆ ವರ್ಗಾಯಿಸಿರುವುದು ತನಿಖೆ ವೇಳೆ ಗೊತ್ತಾಗಿದೆ.
ಈ ಮೊತ್ತವು ಬಳಿಕ ಎನ್. ರವಿಕುಮಾರ್ (ನೆಕ್ಕಂಟಿ ನಾಗರಾಜ್ ಅವರ ಸಹೋದರ) ಮತ್ತು ಎನ್. ಯಶವಂತ್ ಚೌಧರಿ (ನೆಕ್ಕಂಟಿ ನಾಗರಾಜ್ ಅವರ ಸೋದರಳಿಯ) ಅವರಿಗೆ ತಲುಪಿರುವುದು ಪತ್ತೆಯಾಗಿದೆ.
2024ರ ಫೆಬ್ರವರಿ 21ರಿಂದ ಮೇ 6ರ ನಡುವೆ ನಿಗಮದ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮೂಲಕ ₹84.63 ಕೋಟಿ ವಂಚನೆ ಮತ್ತು ದುರುಪಯೋಗದ ಬಗ್ಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ದೂರು ನೀಡಿದ್ದರು. ಅದರ ಆಧಾರದ ಮೇಲೆ ಅದೇ ವರ್ಷ ಜೂನ್ 3ರಂದು ಸಿಬಿಐ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ತನಿಖೆಯ ವೇಳೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಕೆಜಿಟಿಟಿಐನ ಖಾತೆಗಳಿಂದಲೂ ನಾಗೇಂದ್ರ ಆಪ್ತರಿಗೆ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿತ್ತು.
ಸಿಬಿಐ ಸಲ್ಲಿಸಿದ ವಸ್ತುಸ್ಥಿತಿ ವರದಿಯ ಆಧಾರದ ಮೇಲೆ, ರಾಜ್ಯದ ಹೈಕೋರ್ಟ್, ವಾಲ್ಮೀಕಿ ಅಭಿವೃದ್ಧಿ ನಿಗಮದ ಮೇಲಿನ ಆರೋಪಗಳ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿತ್ತು.
ವಾಲ್ಮೀಕಿ ಹಗರಣದ ನಂಟಿನ ಶಂಕೆ
ಬಳ್ಳಾರಿ ಮಹಾನಗರ ಪಾಲಿಕೆಯ 11ನೇ ವಾರ್ಡ್ನ ಬಿಜೆಪಿ ಸದಸ್ಯ ಗೋವಿಂದರಾಜು ಹಾಗೂ ಅವರ ತಂದೆ, ಮೊಟ್ಟೆ ವ್ಯಾಪಾರಿ ಕುಮಾರಸ್ವಾಮಿ ನಿವಾಸದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳು ಶೋಧ ನಡೆಸಿದರು.
ಗಾಂಧಿನಗರದ 2ನೇ ತಿರುವಿನಲ್ಲಿರುವ ಗೋವಿಂದರಾಜು ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ, ದಾಖಲೆ ಪತ್ರಗಳನ್ನು ಸಂಗ್ರಹಿಸಿದರು.
ಗೋವಿಂದ ರಾಜು ಅವರು ಮನೆ ಖರೀದಿಗಾಗಿ ಹಗರಣದ ಆರೋಪಿ ಶಾಸಕ ಬಿ.ನಾಗೇಂದ್ರ, ನೆಕ್ಕಂಟಿ ನಾಗರಾಜ್ ಮೂಲಕ ವ್ಯವಹಾರ ನಡೆಸಿದ್ದರು. ಅದಕ್ಕೆ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿರುವ ಆರೋಪ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.