ADVERTISEMENT

ಬೆಂಗಳೂರು | ಶಿಕ್ಷಕಿಯ ಒಂದು ಮುತ್ತಿನ ಕಥೆ: ಮುತ್ತು ಕೊಟ್ಟು ₹50 ಸಾವಿರ ವಸೂಲಿ

ಮಧುಬಲೆಗೆ ಬಿದ್ದ ವಿದ್ಯಾರ್ಥಿನಿಯ ತಂದೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 23:30 IST
Last Updated 1 ಏಪ್ರಿಲ್ 2025, 23:30 IST
ಶ್ರೀದೇವಿ ರೂಢಗಿ 
ಶ್ರೀದೇವಿ ರೂಢಗಿ    

ಬೆಂಗಳೂರು: ಪ್ರಿ–ಸ್ಕೂಲ್​ಗೆ ಬರುತ್ತಿದ್ದ ಪುತ್ರಿಯ ತಂದೆಗೇ ಮುತ್ತು ಕೊಟ್ಟು ಮಧುಬಲೆಗೆ ಕೆಡಹುವುದರ ಜತೆಗೆ ಹಣ ಸುಲಿಗೆ ಮಾಡಿದ್ದ ಖಾಸಗಿ ಶಾಲಾ ಶಿಕ್ಷಕಿ, ರೌಡಿ ಶೀಟರ್ ಸೇರಿದಂತೆ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಅವರನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಕಲಾಸಿಪಾಳ್ಯದ ಜಾಲಿ ಮೊಹಲ್ಲಾದಲ್ಲಿ ಉದ್ಯಮ ನಡೆಸುತ್ತಿರುವ ಮಹಾಲಕ್ಷ್ಮಿ ಲೇಔಟ್‌ನ ನಿವಾಸಿ(34) ನೀಡಿದ ದೂರು ಆಧರಿಸಿ ಖಾಸಗಿ ಶಾಲೆಯ ಶಿಕ್ಷಕಿ ಶ್ರೀದೇವಿ ರೂಢಗಿ(25), ಅವರ ಪ್ರಿಯಕರ ಸಾಗರ್ ಮೋರೆ (28) ಮತ್ತು ರೌಡಿ ಶೀಟರ್‌ ಗಣೇಶ್ ಕಾಳೆ (38) ಅವರನ್ನು ಬಂಧಿಸಲಾಗಿದೆ. ಗಣೇಶ್ ಕಾಳೆಯ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಒಂಬತ್ತು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.

‘ದೂರುದಾರರಿಗೆ ಮೂವರು ಮಕ್ಕಳಿದ್ದಾರೆ. ಅವರ ಕೊನೆಯ ಮಗಳನ್ನು ಶ್ರೀದೇವಿ ರೂಢಗಿ ನಡೆಸುತ್ತಿದ್ದ ಪ್ರಿ–ಸ್ಕೂಲ್‌ಗೆ ಸೇರಿಸಿದ್ದರು. ಅಲ್ಲದೇ ಮೂರು ಮಕ್ಕಳು ಸಹ ಶ್ರೀದೇವಿ ಅವರ ಬಳಿಯೇ ಡಾನ್ಸ್‌ ಕಲಿಯುವುದಕ್ಕೆ ಹಾಗೂ ಮನೆಪಾಠಕ್ಕೆ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಶಿಕ್ಷಕಿ ಹಾಗೂ ದೂರುದಾರರ ನಡುವೆ ಪರಿಚಯವಾಗಿತ್ತು. ಶಾಲೆಯ ನಿರ್ವಹಣೆಗೆಂದು ಶ್ರೀದೇವಿ ಅವರು ದೂರುದಾರರ ಬಳಿ ₹4 ಲಕ್ಷ ಪಡೆದುಕೊಂಡಿದ್ದರು. 2024ರ ಮಾರ್ಚ್​ನಲ್ಲಿ ಹಣ ವಾಪಸ್‌ ಕೊಡುವುದಾಗಿ ತಿಳಿಸಿದ್ದರು. ಆದರೆ, ಹಣ ವಾಪಸ್ ಕೇಳಿದಾಗ ಕೊಟ್ಟಿರಲಿಲ್ಲ. ‘ಸದ್ಯದ ಪರಿಸ್ಥಿತಿಯಲ್ಲಿ ತುಂಬಾ ಕಷ್ಟ ಇದೆ. ಈಗ ಹಣವನ್ನು ಕೊಡಲು ಆಗುವುದಿಲ್ಲ. ನೀವೂ ಶಾಲೆಯ ನಿರ್ವಹಣೆಗೆ ಪಾಲುದಾರರು ಆಗಿ’ ಎಂದು ಆರೋಪಿ ಕೋರಿಕೆ ಇಟ್ಟಿದ್ದರು. ಇದಕ್ಕೆ ದೂರುದಾರರು ಒಪ್ಪಿರಲಿಲ್ಲ‘ ಎಂದು ತನಿಖಾ ಮೂಲಗಳು ತಿಳಿಸಿವೆ.

ADVERTISEMENT

‘ಕೆಲವು ದಿನಗಳು ಕಳೆದ ಬಳಿಕ, ಹಣ ವಾಪಸ್ ನೀಡಲು ಸಾಧ್ಯವಾಗುತ್ತಿಲ್ಲ. ಹಣದ ವ್ಯವಹಾರವನ್ನು ಒಂದೇ ವ್ಯವಹಾರದಲ್ಲಿ ಮುಗಿಸೋಣ. ನೀವು ಹೇಳಿದಂತೆ ನಾನು ಮಾಡಲು ಸಿದ್ಧ. ₹15 ಲಕ್ಷ ನೀಡಿದರೆ ತಮ್ಮೊಂದಿಗೆ ಸಲುಗೆಯಿಂದ ಇರುವುದಾಗಿ ಆರೋಪಿ ಹೇಳಿಕೊಂಡಿದ್ದರು. ಅದಕ್ಕೆ ದೂರುದಾರರು ಒಪ್ಪಿರಲಿಲ್ಲ. ಅದೇ ದಿನ ಶಿಕ್ಷಕಿ, ಒಂದು ಮುತ್ತನ್ನು ಕೊಟ್ಟು ₹50 ಸಾವಿರ ವಸೂಲಿ ಮಾಡಿದ್ದರು’ ಎಂದು ದೂರುದಾರ ನೀಡಿದ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಶ್ರೀದೇವಿ ಜತೆಗೆ ಸಂಪರ್ಕ ಸಾಧಿಸಲು ದೂರುದಾರ ಸಹ ಹೊಸ ಮೊಬೈಲ್‌ ಹಾಗೂ ಸಿಮ್‌ ಖರೀದಿಸಿದ್ದರು. ಅದಾದ ಮೇಲೆ ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಖರೀದಿಸಿದ್ದ ಮೊಬೈಲ್‌ ಹಾಗೂ ಸಿಮ್‌ ಅನ್ನು ಎಸೆದು ನಾಶಪಡಿಸಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಟಿ.ಸಿ ಕೊಡುವುದಾಗಿ ಹೇಳಿದ್ದ ಆರೋಪಿ: ‘ಕಳೆದ ಮಾರ್ಚ್‌ 12ರಂದು ದೂರುದಾರರ ಪತ್ನಿಗೆ ಕರೆ ಮಾಡಿದ್ದ ಶಿಕ್ಷಕಿ, ಪುತ್ರಿಯ ವರ್ಗಾವಣೆ ಪತ್ರವನ್ನು(ಟಿ.ಸಿ) ಕೊಡುತ್ತೇನೆ. ಪತಿಯನ್ನು ಶಾಲೆಗೆ ಕಳುಹಿಸುವಂತೆ ಹೇಳಿದ್ದರು. ದೂರುದಾರ ಶಾಲೆಗೆ ತೆರಳಿದ್ದರು. ಅಲ್ಲಿ ಶ್ರೀದೇವಿ ಜೊತೆಗಿದ್ದ ಆರೋಪಿಗಳಾದ ಸಾಗರ್ ಹಾಗೂ ಗಣೇಶ್ ಬೆದರಿಕೆ ಹಾಕಿದ್ದರು. ‘ಸಾಗರ್ ಜೊತೆಗೆ ಶ್ರೀದೇವಿ ನಿಶ್ಚಿತಾರ್ಥವಾಗಿದೆ. ಆದರೆ, ನೀನು ಆಕೆಯ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದೀಯಾ’ ಎಂದು ಆರೋಪಿ ಗಣೇಶ್ ಬೆದರಿಕೆ ಹಾಕಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಈ ವಿಷಯವನ್ನು ಯಾರಿಗೂ ಹೇಳಬಾರದೆಂದರೆ ₹1 ಕೋಟಿ ಹಣ ನೀಡಬೇಕು ಎಂಬುದಾಗಿ ಆರೋಪಿಗಳು ಬ್ಲ್ಯಾಕ್‌ಮೇಲ್ ಮಾಡಿದ್ದರು. ಹಣ ನೀಡದೇ ಇದ್ದರೆ ಪರಿಚಯವಿರುವ ಡಿವೈಎಸ್‌ಪಿಯೊಬ್ಬರಿಗೆ ಮಾಹಿತಿ ನೀಡಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ನಂತರ, ಕಾರಿನಲ್ಲಿ ದೂರುದಾರರನ್ನು ಕರೆದೊಯ್ದು ನಗರದ ಹಲವು ಕಡೆಗೆ ಸುತ್ತಾಟ ನಡೆಸಿದ್ದರು. ನನ್ನ ಬಳಿ ಹಣವಿಲ್ಲ ಎಂದಾಗ, ಕೊನೆಯದಾಗಿ ಆರೋಪಿಗಳು ₹20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಅಷ್ಟೂ ಹಣವಿಲ್ಲ ಎಂದಾಗ ₹1.90 ಲಕ್ಷ ಪಡೆದು ಬಿಟ್ಟು ಕಳುಹಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಉಳಿದ ಹಣವನ್ನೂ ನೀಡುವಂತೆ ಬೇರೆ ಬೇರೆ ಮೊಬೈಲ್‌ ಸಂಖ್ಯೆಯಿಂದ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. ನಂತರ, ಬ್ಲ್ಯಾಕ್‌ಮೇಲ್‌ಗೆ ಒಳಗಾದ ವ್ಯಕ್ತಿ ಬಂದು ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಸಾಗರ್‌
ಗಣೇಶ್ ಕಾಳೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.