ಬೆಂಗಳೂರು: ಸಿಸಿಬಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ₹ 98 ಲಕ್ಷ ಮೌಲ್ಯದ 1 ಕೆ.ಜಿ 985 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಮೊಹಮ್ಮದ್ ಸದ್ದಾಂ (36), ಸೈಯದ್ ತಬ್ರೇಜ್ ಪಾಷಾ (32), ಆಬೀದ್ ಆಜಂ (31) ಹಾಗೂ ರಾಜಸ್ತಾನ ರಂಜಿತ್ ಸಿಂಗ್ (42) ಬಂಧಿತ ಆರೋಪಿಗಳು.
ಈ ಆರೋಪಿಗಳು ಒಟ್ಟು 12 ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತನಿಖೆ ವೇಳೆ ದೃಢಪಟ್ಟಿದೆ.
ಆರೋಪಿಗಳಾದ ಸೈಯದ್ ತಬ್ರೇಜ್ ಪಾಷಾ, ಆಬೀದ್ ಆಜಂ, ಮಹಮ್ಮದ್ ಸದ್ದಾಂ 6 ವರ್ಷಗಳಿಂದ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಗಲು ವೇಳೆ ಬೀಗ ಹಾಕಿದ ಮನೆ ಗುರುತಿಸಿ ಬಾಗಿಲು ಮುರಿದು ಮೌಲ್ಯಯುತ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದರು. ಸಿಟಿ ಮಾರುಕಟ್ಟೆ, ಡಿಜೆ ಹಳ್ಳಿ, ಹಾಸನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳವು ನಡೆಸಿ ಜೈಲಿಗೆ ಹೋಗಿದ್ದರು. ಜೈಲಿನಿಂದ ಹೊರಬಂದ ನಂತರವೂ ಮತ್ತೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೊಂದು ಪ್ರಕರಣದಲ್ಲಿ ಬಂಧಿತ ರಂಜಿತ್ ಸಿಂಗ್ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಾಲೀಕರ ಗಮನಕ್ಕೆ ಬಾರದಂತೆ ಅಂಗಡಿಯಲ್ಲಿ ಚಿನ್ನ ಕಳವು ಮಾಡುತ್ತಿದ್ದ. ಕಳವು ಮಾಡಿದ ಚಿನ್ನಾಭರಣವನ್ನು ರಾಜಸ್ತಾನಕ್ಕೆ ಸಾಗಿಸಿ ಅಲ್ಲಿನ ಚಿನ್ನಾಭರಣ ಅಂಗಡಿಗೆ ಮಾರಾಟ ಮಾಡಿದ್ದ. ಪೊಲೀಸರು ಹುಡುಕಾಟ ಆರಂಭಿಸಿರುವುದನ್ನು ತಿಳಿದು ಅಲ್ಲಿಯೇ ತಲೆಮರೆಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾಮಾಕ್ಷಿ ಪಾಳ್ಯದಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು. ನಂತರ, ಪ್ರಕರಣವನ್ನು ಸಿಸಿಬಿ ವಹಿಸಲಾಗಿತ್ತು. ಸಿಸಿಬಿ ಪೊಲೀಸರು ರಾಜಸ್ತಾನದಲ್ಲಿ ಆರೋಪಿ ಬಂಧಿಸಿ 1 ಕೆ.ಜಿ 980 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.