ಬೆಂಗಳೂರು: ತ್ಯಾಗ, ಬಲಿದಾನದ ಸಂಕೇತವಾಗಿ ನಗರದ ಜಾನ್ಸನ್ ಮಾರುಕಟ್ಟೆ ಬಳಿ ಶಿಯಾ ಮುಸ್ಲಿಮರು ಭಕ್ತಿ ಭಾವದಿಂದ ಬುಧವಾರ ಮೊಹರಂ ಆಚರಿಸಿದರು. ಮೆರವಣಿಗೆ ನಡೆಸಿ, ದೇಹದಂಡನೆ ಮಾಡಿ ಹಸನ್– ಹುಸೇನ್ ತ್ಯಾಗವನ್ನು ಸ್ಮರಿಸಿದರು.
ಶೋಕಾಚರಣೆ ಸಂಕೇತವಾಗಿ ಕಪ್ಪುಬಟ್ಟೆ ಧರಿಸಿ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿಶೇಷಾಲಂಕೃತ ಸ್ತಬ್ಧಚಿತ್ರಗಳು ಸಾಗಿಬಂದವು. ಸಾವಿರಾರು ಮಂದಿ ಪಾಲ್ಗೊಂಡಿದ್ದರಿಂದ ಮಾರುಕಟ್ಟೆಯ ಅಕ್ಕಪಕ್ಕದ ರಸ್ತೆಯಲ್ಲಿ ಮಧ್ಯಾಹ್ನ ವಾಹನ ಸಂಚಾರ ನಿರ್ಬಂಧಿಸಲಾಯಿತು.
ಮಕ್ಕಳು, ಯುವಕರು ಮತ್ತು ವೃದ್ಧರು ದೇಹದಂಡನೆ ಮಾಡಿಕೊಂಡರು. ‘ಆಲಿ ದೂಲಾ’ ಎಂದು ಕೂಗುತ್ತಾ ದಾರಕ್ಕೆ ಕಟ್ಟಿದ್ದ ಬ್ಲೇಡ್ಗಳ ಗೊಂಚಲನ್ನು ಜನರು ತಮ್ಮ ಎದೆಗೆ ಹಾಗೂ ಬೆನ್ನಿಗೆ ಹೊಡೆದುಕೊಂಡರು. ಅವರ ದೇಹದಿಂದ ರಕ್ತ ಚಿಮ್ಮಿತು. ಬಹುತೇಕರು ಎದೆಗೆ ಕೈಗಳಿಂದ ಬಡಿದುಕೊಂಡು ಶೋಕ ಗೀತೆಗಳನ್ನು ಹಾಡಿದರು.
ಮೆರವಣಿಗೆಗೆ ಮೊದಲು ಜಾನ್ಸನ್ ಮಾರುಕಟ್ಟೆ ಬಳಿಯ ಅಲಿ ಅಸ್ಕರ್ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಅಲ್ಲದೇ ನಗರದ ವಿವಿಧ ಮಸೀದಿಗಳಲ್ಲೂ ಪ್ರಾರ್ಥನೆ ಸಲ್ಲಿಸಲಾಯಿತು.
ಜಾನ್ಸನ್ ಮಾರುಕಟ್ಟೆ ಬಳಿ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಆಂಬುಲೆನ್ಸ್, ಶುಶ್ರೂಷಕರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ಭಾವೈಕ್ಯದ ಪ್ರತೀಕವಾಗಿರುವ ಮೊಹರಂ ಅನ್ನು ರಾಜಧಾನಿ ಸುತ್ತಮುತ್ತಲ ಬಡಾವಣೆಗಳಲ್ಲೂ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕೆಲವರು ಅಲ್ಲಾ ಮತ್ತು ಬೀಬಿ ಫಾತಿಮಾರ ಹೆಸರಿನಲ್ಲಿ ಹಾಡಿದ ಹಾಡುಗಳಿಗೆ ಜನರು ಭಾವುಕರಾದರು. ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾದರು.
‘ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಸನ್– ಹುಸೇನ್ ಧರ್ಮದ ಉಳಿವಿಗಾಗಿ ಹಾಗೂ ನ್ಯಾಯಕ್ಕಾಗಿ ಹೋರಾಡಿ ಯುದ್ಧದಲ್ಲಿ ಮರಣ ಹೊಂದಿದರು. ಅವರ ಸಾವಿನ ಸ್ಮರಣಾರ್ಥ ಈ ಶೋಕಾಚರಣೆ ಆಚರಿಸುತ್ತಿದ್ದೇವೆ’ ಎಂದು ಸಮಾಜದ ಮುಖಂಡರು ಹೇಳಿದರು.
ಶಿವಾಜಿನಗರದಲ್ಲಿ ಆಚರಣೆ: ಶಿವಾಜಿನಗರದ ಹಜರತ್ ಕಂಬಲ್ಪೋಷ್ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾದ ಆಲಾಯಿ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ವ್ರತಾಚರಣೆ ಮಾಡಿದ್ದ ಮುಸ್ಲಿಮರಿಗೆ ಮಸೀದಿಯಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.