ADVERTISEMENT

ರೈಲು ನಿಲ್ದಾಣ: ಚನ್ನಪಟ್ಟಣ ಆಟಿಕೆ ಮಳಿಗೆ ಆರಂಭ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 19:30 IST
Last Updated 25 ಮಾರ್ಚ್ 2022, 19:30 IST
ನೂತನ ಮಳಿಗೆಯಲ್ಲಿದ್ದ ಚನ್ನಪಟ್ಟಣದ ಆಟಿಕೆಗಳನ್ನು (ಎಡದಿಂದ ಮೂರನೆಯವರು) ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ ಸಿಂಗ್ ವೀಕ್ಷಿಸಿದರು. ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎ.ಎನ್.ಕೃಷ್ಣಾರೆಡ್ಡಿ, ಪ್ರಯಾಣಿಕರ ಸೇವೆಗಳ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಅನುಪ್ ದಯಾನಂದ ಸಾಧು ಹಾಗೂ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ಆಡಳಿತ) ಕುಸುಮಾ ಹರಿಪ್ರಸಾದ್ ಇದ್ದಾರೆ –ಪ್ರಜಾವಾಣಿ ಚಿತ್ರ
ನೂತನ ಮಳಿಗೆಯಲ್ಲಿದ್ದ ಚನ್ನಪಟ್ಟಣದ ಆಟಿಕೆಗಳನ್ನು (ಎಡದಿಂದ ಮೂರನೆಯವರು) ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ ಸಿಂಗ್ ವೀಕ್ಷಿಸಿದರು. ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎ.ಎನ್.ಕೃಷ್ಣಾರೆಡ್ಡಿ, ಪ್ರಯಾಣಿಕರ ಸೇವೆಗಳ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಅನುಪ್ ದಯಾನಂದ ಸಾಧು ಹಾಗೂ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ಆಡಳಿತ) ಕುಸುಮಾ ಹರಿಪ್ರಸಾದ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರೈಲು ಪ್ರಯಾಣಿಕರನ್ನು ಆಕರ್ಷಿಸುವ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದೊಂದಿಗೆ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲ್ವೆ ನಿಲ್ದಾಣದಲ್ಲಿ ‘ಚನ್ನಪಟ್ಟಣ ಆಟಿಕೆಗಳ ಮಳಿಗೆ’ಯನ್ನು ಶುಕ್ರವಾರ ಆರಂಭಿಸಿತು.

ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ‘ಒಂದು ನಿಲ್ದಾಣ–ಒಂದು ಉತ್ಪನ್ನ’ ಯೋಜನೆಯಡಿ ಈ ಮಳಿಗೆ ತೆರೆಯಲಾಗಿದೆ. ಸ್ಥಳೀಯ ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರೋತ್ಸಾಹಿಸುವುದು ಈ ಉಪಕ್ರಮದ ಉದ್ದೇಶ. ಕೆಎಸ್‌ಆರ್‌ ರೈಲು ನಿಲ್ದಾಣವುಚನ್ನಪಟ್ಟಣದ ಆಟಿಕೆಗಳನ್ನು ಮಾರಾಟ ಮಾಡುವ ರಾಜ್ಯದ ಮೊದಲ ರೈಲು ನಿಲ್ದಾಣವಾಗಿ ಹೊರಹೊಮ್ಮಿದೆ.

ಜನರ ಪ್ರತಿಕ್ರಿಯೆ ಮೇರೆಗೆ ಮಳಿಗೆಯನ್ನು ಮುಂದುವರೆಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ಚನ್ನಪಟ್ಟಣ ಕರಕುಶಲ ಕಲಾವಿದರ ಸಂಘದ ಕುಶಲಕರ್ಮಿ ವಿ.ಪ್ರಕಾಶ್ ಅವರಿಗೆಪ್ರಾಯೋಗಿಕವಾಗಿ ಚನ್ನಪಟ್ಟಣದ ಆಟಿಕೆಗಳ ಪ್ರಚಾರಕ್ಕಾಗಿ ಈ ಮಳಿಗೆಯನ್ನು ಮಂಜೂರು ಮಾಡಿದೆ.

ADVERTISEMENT

ಚನ್ನಪಟ್ಟಣದ ಮರದ ಬುಗುರಿ, ದಿಬ್ಬಣ ತಂಡದ ಆಟಿಕೆ ಗೊಂಬೆಗಳು, ದಸರಾ ಗೊಂಬೆಗಳು, ಗೃಹಾಲಂಕಾರದ, ಗೃಹೋಪಯೋಗಿ ವಸ್ತುಗಳು, ಮರದ ಆಭರಣಗಳು ಸೇರಿದಂತೆ ನೂರಾರು ಆಟಿಕೆಗಳನ್ನು ಮಳಿಗೆಯಲ್ಲಿ ಖರೀದಿಸಬಹುದು. ಗುಲಗಂಜಿ ಗಾತ್ರದ ಗೊಂಬೆಗಳಿಂದ ದೊಡ್ಡ ಕೆತ್ತನೆಯ ಗೊಂಬೆಗಳು ಇಲ್ಲಿದ್ದು, ₹50ರಿಂದ ₹10 ಸಾವಿರ ಬೆಲೆಯ ಆಟಿಕೆಗಳೂ ಈ ಮಳಿಗೆಯಲ್ಲಿ ಲಭ್ಯ.

ಮಳಿಗೆ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ ಸಿಂಗ್,‘ಒಂದು ನಿಲ್ದಾಣ–ಒಂದು ಉತ್ಪನ್ನ’ ಯೋಜನೆಯ ಭಾಗವಾಗಿ ಮಳಿಗೆ ಆರಂಭಿಸಿದ್ದೇವೆ.ರೈಲು ನಿಲ್ದಾಣಗಳನ್ನು ಸಾಂಪ್ರದಾಯಿಕ ಕಲೆಗಳ ಪ್ರದರ್ಶನ ಸ್ಥಳಗಳಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಈ ಕ್ರಮದಿಂದ ಕರಕುಶಲ ವಸ್ತುಗಳ ಮಾರಾಟಕ್ಕೂ ಪ್ರೋತ್ಸಾಹ ಸಿಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.