ಹೆಸರಘಟ್ಟ: ಬೆಂಗಳೂರು ಮಾತ್ರವಲ್ಲದೇ ಹಾಸನ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿದ್ದ ಉತ್ತರ ಭಾರತದ ರಾಜ್ಯಗಳ ವಲಸೆ ಕಾರ್ಮಿಕರು ಶ್ರಮಿಕ್ ರೈಲಿನಲ್ಲಿ ಸೋಮವಾರ ತಾಯ್ನಾಡಿನತ್ತ ಪ್ರಯಾಣ ಬೆಳೆಸಿದರು.
ಬೆಂಗಳೂರು ಹೊರವಲಯದ ಚಿಕ್ಕಬಾಣಾವರ ರೈಲು ನಿಲ್ದಾಣದಿಂದ ಎರಡು ರೈಲುಗಳಲ್ಲಿ ಕಾರ್ಮಿಕರನ್ನು ಬೀಳ್ಕೊಡಲಾಯಿತು.
ಕೆಎಸ್ಆರ್ಟಿಸಿ ಬಸ್ಗಳ ಮೂಲಕ 3000ಕ್ಕೂ ಹೆಚ್ಚು ಕಾರ್ಮಿಕರನ್ನು ನಿಲ್ದಾಣಕ್ಕೆ ಕರೆತರಲಾಗಿತ್ತು. ಬಸ್ಸಿನ ಪ್ರಯಾಣ ದರವನ್ನು ಕಾರ್ಮಿಕರೇ ಭರಿಸಿದ್ದರು. ಹೊರ ಜಿಲ್ಲೆಗಳ ಕಾರ್ಮಿಕರ ಜೊತೆ ನಗರದ ಹೆಬ್ಬಾಳ, ಜಯನಗರ, ನಾಗರಬಾವಿ, ಸುಂಕದಕಟ್ಟೆ ಹಾಗೂ ಸುತ್ತಮುತ್ತ ನೆಲೆಸಿದ್ದ ಕಾರ್ಮಿಕನ್ನೂ ಊರಿಗೆ ಕಳುಹಿಸಲಾಯಿತು.
ಮಧ್ಯಾಹ್ನ 4 ಗಂಟೆ ಹಾಗೂ ಸಂಜೆ 6 ಗಂಟೆಗೆ ಹೊರಡಬೇಕಿದ್ದ ರೈಲುಗಳು ತಡವಾಗಿ ಪ್ರಯಾಣ ಆರಂಭಿಸಿದವು. ಹೊರ ಜಿಲ್ಲೆಗಳ ಕಾರ್ಮಿಕರು ಮಧ್ಯಾಹ್ನವೇ ನಿಲ್ದಾಣಕ್ಕೆ ಬಂದಿದ್ದರಿಂದ ಊಟಕ್ಕೆ ಪರದಾಡುವಂತಾಯಿತು. ಕಾರ್ಮಿಕ ಇಲಾಖೆ ಸಿಬ್ಬಂದಿ ಕೆಲ ಕಾರ್ಮಿಕರಿಗೆ ಆಹಾರದ ಪೊಟ್ಟಣ ವಿತರಿಸಿದರು.
ಲಾಕ್ಡೌನ್ ವೇಳೆ ಅನುಭವಿಸಿದ ಯಾತನೆ ಬಿಚ್ಚಿಟ್ಟ ಕಾರ್ಮಿಕ ಚಂದ್ರಧರ್, ‘6 ವರ್ಷಗಳಿಂದ ಚಿತ್ರದುರ್ಗದಲ್ಲಿ ಶೆಡ್ ಹಾಕಿಕೊಂಡು ವಾಸವಿದ್ದೆ. ಲಾಕ್ಡೌನ್ ಆದಾಗಿನಿಂದ ಸರ್ಕಾರದ ಯಾವ ಸೌಲಭ್ಯಗಳೂ ನಮಗೆ ದೊರೆಯಲಿಲ್ಲ. ಆಹಾರದ ಕಿಟ್ಗಳೂ ಸಿಗಲಿಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.