ಬೆಂಗಳೂರು: ಚಿನ್ನದ ಆಭರಣ ಕಳ್ಳತನ ಪ್ರಕರಣದ ವಿಚಾರಣೆಯ ನೆಪದಲ್ಲಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಾಲಕನ ಮೇಲೆ ದೌರ್ಜನ್ಯ ಎಸಗಿ, ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದ್ದು, ಪ್ರಕರಣದ ಸಂಬಂಧ ರಾಜ್ಯ ಮಕ್ಕಳ ಹಕ್ಕುಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
‘ವಿನಾಯಕ ಲೇಔಟ್ ವ್ಯಾಪ್ತಿಯ ಶಾಂತಿಪುರದಲ್ಲಿ ಚಿನ್ನ ಕದ್ದ ಆರೋಪದ ಅಡಿ 11 ವರ್ಷದ ಬಾಲಕನಿಗೆ ಪೊಲೀಸ್ ಕಾನ್ಸ್ಟೆಬಲ್ ಥಳಿಸಿರುವ ಆರೋಪವಿದೆ. ಆಗ್ನೇಯ ವಿಭಾಗದ ಡಿಸಿಪಿ ಅವರು ಆ ಠಾಣೆಗೆ ಖುದ್ದು ಭೇಟಿ ನೀಡಿ, ಸಂಬಂಧಪಟ್ಟ ಇನ್ಸ್ಪೆಕ್ಟರ್ರಿಂದ ಮಾಹಿತಿ ಪಡೆದು ತಕ್ಷಣವೇ ಆಯೋಗಕ್ಕೆ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ’ ಎಂದು ಆಯೋಗದ ಅಧ್ಯಕ್ಷ ಶಶಿಧರ್ ಎಸ್. ಕೋಸಂಬೆ ತಿಳಿಸಿದ್ದಾರೆ.
‘ಮಗು ತಿಳಿದೋ–ತಿಳಿಯದೋ ತಪ್ಪು ಮಾಡಿದ್ದಲ್ಲಿ ಕಾನೂನಿನ ಅಡಿ ಕ್ರಮಕ್ಕೆ ಅವಕಾಶವಿದೆ. ಮಗುವಿನ ತ್ವರಿತ ರಕ್ಷಣೆ ಮಾಡಬೇಕಾಗಿರುವುದು ಸಂವಿಧಾನಾತ್ಮಕ ಕರ್ತವ್ಯವಾಗಿದೆ. ವಿಚಾರಣೆಯ ನೆಪದಲ್ಲಿ ಬಾಲಕನನ್ನು ಥಳಿಸಿರುವುದು ಬಾಲ ನ್ಯಾಯಾಲಯ-2006ರ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಹೇಳಿದ್ದಾರೆ.
ಏನಿದು ಪ್ರಕರಣ?: ‘ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯ ವಿನಾಯಕ ಲೇಔಟ್ನಲ್ಲಿ ಬಾಲಾಜಿ ಎಂಬುವವರು ಡ್ರೈ ಕ್ಲೀನಿಂಗ್ ಶಾಪ್ ನಡೆಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಸುಮಿತ್ರಮ್ಮ ಎಂಬುವರು ಡ್ರೈ ಕ್ಲೀನಿಂಗ್ ಶಾಪ್ ಬಳಿಗೆ ಬಂದಿದ್ದರು. ಆಗ ಶಾಪ್ನಲ್ಲಿದ್ದ ಬಾಲಾಜಿ ಅವರ ಪುತ್ರನಿಗೆ ಸುಮಿತ್ರಮ್ಮ ₹10 ಕೊಟ್ಟಿದ್ದರು. ಪರಿಚಯಸ್ಥರು ಕೊಟ್ಟಿದ್ದರಿಂದ ಬಾಲಕ ಪಡೆದುಕೊಂಡಿದ್ದ. ಬಳಿಕ, ಸುಮಿತ್ರಮ್ಮ ಅವರು ತಮಿಳುನಾಡಿನ ಕೃಷ್ಣಗಿರಿಗೆ ಹೋಗಿದ್ದರು. ಆದರೆ, ಒಂದು ವಾರದ ಬಳಿಕ 120 ಗ್ರಾಂ ಚಿನ್ನಾಭರಣವಿದ್ದ ತನ್ನ ಬ್ಯಾಗ್ ಕಳ್ಳತನ ಆಗಿದೆ ಎಂದು ಆರೋಪಿಸಿ ಸುಮಿತ್ರಮ್ಮ ಅವರು ಬಾಲಾಜಿ ಅವರಿಗೆ ಕರೆ ಮಾಡಿದ್ದರು. ಆಗ ಬಾಲಾಜಿ ಅದು ‘ನಮಗೆ ಗೊತ್ತಿಲ್ಲ’ ಎಂದಿದ್ದರು. ಹೀಗಾಗಿ ಸುಮಿತ್ರಮ್ಮ ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದ್ದರು. ತನಿಖೆಯಲ್ಲಿ ಬಾಲಾಜಿ ಕಳ್ಳತನ ಮಾಡಿಲ್ಲ ಎಂಬುದು ಗೊತ್ತಾಗಿ ಪೊಲೀಸರು ವಾಪಸ್ ಕಳುಹಿಸಿದ್ದರು’ ಎಂದು ಮೂಲಗಳು ಹೇಳಿವೆ.
ಕೆಲವು ದಿನಗಳ ಬಳಿಕ ಸುಮಿತ್ರಮ್ಮ ಅವರು ಶಾಪ್ನಲ್ಲಿದ್ದ ಬಾಲಾಜಿ ಅವರ ಪುತ್ರನ ಮೇಲೆ ಮತ್ತೆ ದೂರು ನೀಡಿದ್ದರು. ಹೀಗಾಗಿ, ಬಾಲಕನನ್ನು ಠಾಣೆಗೆ ಕರೆಸಿದ್ದ ಪೋಲಿಸರು ವಿಚಾರಣೆ ಮಾಡಿದ್ದರು. ಆಗ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.