ADVERTISEMENT

ಕುಮಾರಕೃಪಾ ರಸ್ತೆಯಲ್ಲಿ ‘ಚಿತ್ರಸಂತೆ’ ನಾಳೆ: 4 ಲಕ್ಷ ಮಂದಿ ಭೇಟಿ ನಿರೀಕ್ಷೆ

ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜನೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 20:05 IST
Last Updated 25 ಮಾರ್ಚ್ 2022, 20:05 IST
ಕರ್ನಾಟಕ ಚಿತ್ರಕಲಾ ಪರಿಷತ್ತು
ಕರ್ನಾಟಕ ಚಿತ್ರಕಲಾ ಪರಿಷತ್ತು   

ಬೆಂಗಳೂರು: ಸಾವಿರಾರು ಕಲಾವಿದರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವ ಹಾಗೂ ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೆ ಅವಕಾಶ ಒದಗಿಸುವ ‘ಚಿತ್ರಸಂತೆ’ಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ತು ಇದೇ ಭಾನುವಾರ ಕುಮಾರಕೃಪಾ ರಸ್ತೆಯಲ್ಲಿ ಹಮ್ಮಿಕೊಂಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಿಗ್ಗೆ 10.30ಕ್ಕೆ ಚಿತ್ರಸಂತೆಗೆ ಚಾಲನೆ ನೀಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ‘ಕಲಾ ಪ್ರದರ್ಶನ’ ಉದ್ಘಾಟಿಸಲಿದ್ದಾರೆ. ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಈ ಬಾರಿ ಚಿತ್ರಸಂತೆಯನ್ನು ಸ್ವಾತಂತ್ರ್ಯ ಯೋಧರಿಗೆ ಸಮರ್ಪಿಸಲಾಗಿದೆ. ಪರಿಷತ್ತಿನ 12 ಗ್ಯಾಲರಿಗಳಲ್ಲಿ ಆಯ್ದ ಕಲಾವಿದರ ಕಲಾಕೃತಿಗಳು 10 ದಿನಗಳವರೆಗೆ ಪ್ರದರ್ಶನ ಕಾಣಲಿವೆ. ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಚಿತ್ರಸಂತೆ ನಡೆಯುವ ಸ್ಥಳದಲ್ಲಿ ಕಲಾ ಪ್ರದರ್ಶನ ನೀಡಲಿದ್ದಾರೆ.ಕೋವಿಡ್‌ ಕಾರಣ ಕಳೆದ ವರ್ಷ ನಡೆದ 18ನೇ

ಚಿತ್ರಸಂತೆ ಆನ್‌ಲೈನ್‌ಗೆ ಸೀಮಿತವಾಗಿತ್ತು. ಈ ವರ್ಷ ಜನವರಿ ಮೊದಲ ವಾರ ನಡೆಯಬೇಕಾದ 19ನೇ ಚಿತ್ರಸಂತೆಯು ಕೋವಿಡ್ ಮೂರನೇ ಅಲೆಯ ಕಾರಣ ಮುಂದೂಡಲ್ಪಟ್ಟಿತ್ತು. ಕೋವಿಡ್ ನಿಯಂತ್ರಣದಿಂದಾಗಿ ಭೌತಿಕವಾಗಿ ಆಯೋಜಿಸಲಾಗುತ್ತಿದೆ.

ADVERTISEMENT

4 ಲಕ್ಷ ಜನ ನಿರೀಕ್ಷೆ: ‘ಚಿತ್ರಸಂತೆಗೆ 4 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆ ಇದೆ. ಮೈಸೂರು ಸಾಂಪ್ರದಾಯಿಕ, ರಾಜಸ್ಥಾನಿ, ಮಧುಬನಿ ಸೇರಿದಂತೆ ವಿವಿಧ ಶೈಲಿಯ ಕಲಾಕೃತಿಗಳು ಪ್ರದರ್ಶನ ಕಾಣಲಿವೆ. 17ನೇ ಚಿತ್ರಸಂತೆಯಲ್ಲಿ ₹ 3 ಕೋಟಿಗೂ ಅಧಿಕ ಮೊತ್ತದ ಕಲಾಕೃತಿಗಳು ಮಾರಾಟವಾಗಿದ್ದವು. ಆನ್‌ಲೈನ್ ವೇದಿಕೆಯಲ್ಲಿ ನಡೆದ 18ನೇ ಚಿತ್ರಸಂತೆಯನ್ನು 11.39 ಲಕ್ಷ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿದ್ದರು. 1.58 ಲಕ್ಷ ಜನ ವೆಬ್‌ಪೋರ್ಟಲ್‌ಗೆ ಭೇಟಿ ನೀಡಿದ್ದರು’ ಎಂದು ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ತಿಳಿಸಿದ್ದಾರೆ.

‘ಹಿರಿಯ ಕಲಾವಿದರು ಹಾಗೂ ಅಂಗವಿಕಲರಿಗೆ ಪರಿಷತ್ತಿನ ಆವರಣದಲ್ಲಿಯೇ ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆವರಣದ ಒಳಗಡೆ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾದ ಎರಡು ಎಟಿಎಂ ಯಂತ್ರಗಳು ಹಾಗೂ ಹೊರಗಡೆ ಕೆನರಾ ಬ್ಯಾಂಕ್‌ನ ಒಂದು ಸಂಚಾರಿ ಎಟಿಎಂ ಇರಲಿದೆ. ಈ ಚಿತ್ರಸಂತೆಯಲ್ಲಿ ₹ 100 ರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಲಾಕೃತಿಗಳು ಇರಲಿವೆ. ಕಲಾವಿದರಿಂದ ನೇರವಾಗಿ ಕಲಾಕೃತಿಗಳನ್ನು ಖರೀದಿಸಬಹುದು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

1,500 ಕಲಾವಿದರು ಭಾಗಿ: ದೇಶದ ವಿವಿಧ ಭಾಗಗಳಿಂದ 1,500 ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿ, ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ಕರ್ನಾಟಕದ ಜತೆಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ.

ವಾಹನ ಸಂಚಾರ ನಿಷೇಧ
ಚಿತ್ರಸಂತೆ ಪ್ರಯುಕ್ತ ಭಾನುವಾರ ಬೆಳಿಗ್ಗೆ 6ರಿಂದ ರಾತ್ರಿ 9 ಗಂಟೆಯವರೆಗೆ ಕುಮಾರಕೃಪಾ ರಸ್ತೆಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ವಿಂಡ್ಸರ್ ಮ್ಯಾನರ್ ವೃತ್ತದಿಂದ ಎಂ.ಬಿ. ಆರಾಧ್ಯ ವೃತ್ತದವರೆಗೆ ಎರಡು ಕಡೆ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ಹಾಗೂ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದ ಕಡೆಯಿಂದ ಬರುವ ವಾಹನಗಳು ರೇಸ್ ವ್ಯೂ ಜಂಕ್ಷನ್ ಮೂಲಕ ಕುಮಾರಕೃಪಾ ರಸ್ತೆಗೆ ಬರುವುದನ್ನು ನಿರ್ಬಂಧಿಸಲಾಗುತ್ತದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಟ್ರಿಲೈಟ್ ಜಂಕ್ಷನ್‌-ಬಸವೇಶ್ವರ ವೃತ್ತ-ಹಳೆ ಹೈಗೌಂಡ್ಸ್ ಜಂಕ್ಷನ್-ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಸಾಗಲು ಅನುವು ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.

ಟಿ.ಚೌಡಯ್ಯ ರಸ್ತೆಯಲ್ಲಿ ಪಿಜಿ ಹಳ್ಳಿ ಕಡೆಯಿಂದ ಬರುವ ವಾಹನಗಳು ವಿಂಡ್ಸರ್ ಮ್ಯಾನರ್ ವೃತ್ತದ ಬಳಿ ಬಲ ತಿರುವು ಪಡೆದು, ಕುಮಾರ ಕೃಪಾ ರಸ್ತೆಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗುತ್ತದೆ. ಟಿ.ಚೌಡಯ್ಯ ರಸ್ತೆಯಲ್ಲಿ ನೇರವಾಗಿ ಸಾಗಿ, ಹಳೆ ಹೈಗ್ರೌಂಡ್ಸ್ ಜಂಕ್ಷನ್, ಎಲ್.ಆರ್.ಡಿ.ಇ, ಬಸವೇಶ್ವರ ವೃತ್ತ–ರೇಸ್ ಕೋರ್ಸ್ ರಸ್ತೆ ಮೂಲಕ ಮುಂದೆ ಸಾಗಲು ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಟಿ.ಚೌಡಯ್ಯ ರಸ್ತೆಯಲ್ಲಿ ಹೈಗೌಂಡ್ ಜಂಕ್ಷನ್‌ನಿಂದ ಬರುವ ವಾಹನಗಳು ವಿಂಡ್ಸರ್‌ ಮ್ಯಾನರ್ ವೃತ್ತದ ಬಳಿ ಎಡ ತಿರುವು ಪಡೆದು, ಕುಮಾರ ಕೃಪಾ ರಸ್ತೆಗೆ ಬರಲು ಅವಕಾಶ ಇರುವುದಿಲ್ಲ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ನೇರವಾಗಿ ಸಾಗಿ, ಆರ್‌ಪಿ ರಸ್ತೆ ಮೂಲಕ ಮುಂದೆ ಸಾಗಲು ಅನುವು ಮಾಡಿಕೊಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ವಾಹನಗಳಿಗೆ ನಿಲುಗಡೆ ವ್ಯವಸ್ಥೆ

*ರೈಲ್ವೆ ಪ್ಯಾರಲಲ್ ರಸ್ತೆ: ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ

*ಕ್ರೆಸೆಂಟ್ ರಸ್ತೆ: ಗುರುರಾಜ ಕಲ್ಯಾಣ ಮಂಟಪದಿಂದ ಜನಾರ್ದನ್ ಹೋಟೆಲ್‌ವರೆಗೆ ರಸ್ತೆಯ ಪಶ್ಚಿಮ ಭಾಗದಲ್ಲಿ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ

*ಕೆ.ಕೆ. ರಸ್ತೆ: ಕ್ರೆಸೆಂಟ್ ರಸ್ತೆ ಜಂಕ್ಷನ್‌ನಿಂದ ಜ್ಯುಡಿಷಿಯಲ್ ಅಕಾಡೆಮಿ ಕ್ರಾಸ್ ವರೆಗೆ ಕ್ರೆಸೆಂಟ್ ರಸ್ತೆಯ ಪಶ್ಚಿಮ ಭಾಗದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ

*ರೇಸ್‌ಕೋರ್ಸ್ ರಸ್ತೆ: ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ವರೆಗೆ ರಸ್ತೆಯ ಪೂರ್ವ ಭಾಗದಲ್ಲಿ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ

*ಬಿ.ಡಿ.ಎ ಆವರಣ ನಿಲುಗಡೆ ಸ್ಥಳದಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.