ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಚಳಿ ತೀವ್ರಗೊಂಡಿದೆ. ತಾಪಮಾನ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ತಂಪಾದ ವಾತಾವರಣ ಜನರ ಮೈನಡುಗಿಸುವಂತೆ ಮಾಡುತ್ತಿದೆ.
ಬೆಳಿಗ್ಗೆ, ಸಂಜೆ ಹಾಗೂ ರಾತ್ರಿ ವೇಳೆ ಅಲ್ಲದೇ ಮಧ್ಯಾಹ್ನವೂ ಚಳಿ ಇರುತ್ತಿದೆ. ಚಳಿಯಿಂದ ರಕ್ಷಣೆ ಪಡೆಯಲು ಜನರು ಸ್ವೆಟರ್ ಹಾಗೂ ಟೋಪಿಯ ಮೊರೆ ಹೋಗುವ ಸ್ಥಿತಿಯಿದೆ. ಭಾನುವಾರ, ಸೋಮವಾರ ಕೆಲಸ ಮುಗಿಸಿ, ರಾತ್ರಿ ವೇಳೆ ಮನೆಗೆ ತೆರಳುವರಿಗೆ ಚಳಿ ತೀವ್ರವಾಗಿ ಕಾಡಿತು.
‘ನಗರದಲ್ಲಿಸೋಮವಾರ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ಸ್ ಇತ್ತು. ಇನ್ನೂ ನಾಲ್ಕರಿಂದ ಐದು ದಿನಗಳ ಕಾಲ ಇದೇ ವಾತಾವರಣ ನಗರದಲ್ಲಿ ಇರಲಿದೆ. ಡಿಸೆಂಬರ್ನಲ್ಲಿ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಲಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದರು.
ಚಳಿ ತೀವ್ರಗೊಂಡಿರುವ ಕಾರಣಕ್ಕೆ ಜನರು ಬಿಸಿ ಬಿಸಿ ಪಾನೀಯದ ಮೊರೆ ಹೋಗುತ್ತಿದ್ಧಾರೆ. ರಾತ್ರಿ ವೇಳೆ ಬಸ್, ರೈಲಿನಲ್ಲಿ ಪ್ರಯಾಣಿಸುವವರಿಗೆ ಚಳಿ ತೀವ್ರವಾಗಿ ಕಾಡುತ್ತಿದೆ.
ಹೊರಗಿನ ತಾಪಮಾನ ಕುಸಿತ, ಮೆಟ್ರೊ ರೈಲಿನಲ್ಲಿ ಎ.ಸಿ ವ್ಯವಸ್ಥೆಯಿಂದಾಗಿ ಮೆಟ್ರೊ ಪ್ರಯಾಣಿಕರಿಗೆ ಚಳಿ ಮೈಕೊರೆಯುವಂತೆ ಮಾಡಿದೆ. ಉದ್ಯಾನಗಳಲ್ಲಿ ವಾಯುವಿಹಾರಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಬೆಳಿಗ್ಗೆ 8 ಗಂಟೆಯ ತನಕವೂ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ.
ಕಾರ್ಮಿಕರಿಗೆ ತಟ್ಟಿದ ಚಳಿ: ಕೆಲಸ ಅರಸಿ ಉತ್ತರ ಭಾರತ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ನಗರಕ್ಕೆ ಸಾವಿರಾರು ಸಂಖ್ಯೆಯ ಕಾರ್ಮಿಕರು ನಗರಕ್ಕೆ ಬಂದಿದ್ದು, ಪುಟ್ಟ ಗುಡಿಸಲುಗಳಲ್ಲಿ ನೆಲೆಸಿದ್ದಾರೆ. ಅವರಿಗೆ ಚಳಿ ತೀವ್ರವಾಗಿ ಕಾಡುತ್ತಿದೆ. ರಾತ್ರಿ ವೇಳೆ ಕೆಲಸ ಮಾಡುವ ಓಲಾ, ಊಬರ್ ಚಾಲಕರಿಗೂ ಚಳಿಯ ತೀವ್ರತೆ ತಟ್ಟಿದೆ.
ಸಾಧಾರಣ ಮಳೆ ಸಾಧ್ಯತೆ’
ಮಂಗಳವಾರದಿಂದ ಶುಕ್ರವಾರದ ವರೆಗೆ ನಗರದಲ್ಲಿ ಭಾಗಶಃ ಮೋಡ ಮುಸುಕಿದ ವಾತಾವರಣ ಇರಲಿದ್ದು, ಚದುರಿದಂತೆ ಸಾಧಾರಣ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಮಿಕರಿಗೆ ತಟ್ಟಿದ ಚಳಿ: ಕೆಲಸ ಅರಸಿ ಉತ್ತರ ಭಾರತ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ನಗರಕ್ಕೆ ಸಾವಿರಾರು ಸಂಖ್ಯೆಯ ಕಾರ್ಮಿಕರು ನಗರಕ್ಕೆ ಬಂದಿದ್ದು, ಪುಟ್ಟ ಗುಡಿಸಲುಗಳಲ್ಲಿ ನೆಲೆಸಿದ್ದಾರೆ. ಅವರಿಗೆ ಚಳಿ ತೀವ್ರವಾಗಿ ಕಾಡುತ್ತಿದೆ. ರಾತ್ರಿ ವೇಳೆ ಕೆಲಸ ಮಾಡುವ ಓಲಾ, ಊಬರ್ ಚಾಲಕರಿಗೂ ಚಳಿಯ ತೀವ್ರತೆ ತಟ್ಟಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.