ADVERTISEMENT

ವೈಮಾನಿಕ ಕಂಪನಿಗಳಿಂದ ಬಾಡಿಗೆ ವಸೂಲಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 22:48 IST
Last Updated 11 ಜೂನ್ 2021, 22:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲಾ ಆವರಣದಲ್ಲಿ ನಾಲ್ಕು ವೈಮಾನಿಕ ಕಂಪನಿಗಳಿಂದ ಬರಬೇಕಾಗಿರುವ ₹4.50 ಕೋಟಿ ಬಾಡಿಗೆಯನ್ನು ಶೇ 18ರಷ್ಟು ಬಡ್ಡಿ ಸಹಿತ ವಸೂಲಿ ಮಾಡು ವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರಿನ ಯವನಿಕಾದಲ್ಲಿ ಶುಕ್ರವಾರ ನಡೆದ ಪ್ರಗತಿ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ವೈಮಾನಿಕ ಕಂಪನಿಗಳಿಂದ ಬಾಡಿಗೆ ವಸೂಲು ಮಾಡಲಾಗಿದೆಯೆ ಎಂದು ಪ್ರಶ್ನಿಸಿದರು.

ಆಗ ಅಧಿಕಾರಿ ಮೌನ ವಹಿಸಿದಾಗ ಅವರು ತರಾಟೆಗೆ ತೆಗೆದುಕೊಂಡರು.

ADVERTISEMENT

ಮೂರು ತಿಂಗಳ ಹಿಂದೆ ಜಕ್ಕೂರು ವೈಮಾನಿಕ ತರಬೇತಿ ಶಾಲೆ ಆವರಣಕ್ಕೆ ಸಚಿವರು ಭೇಟಿ ನೀಡಿದಾಗ, ನಾಲ್ಕು ವೈಮಾನಿಕ ಕಂಪನಿಗಳು ಬಾಡಿಗೆ ಪಾವತಿಸದಿರುವುದು ಗಮನಕ್ಕೆ ಬಂದಿತು.

ತಕ್ಷಣವೇ ಬಾಡಿಗೆ ವಸೂಲಿ ಮಾಡುವಂತೆ ಸೂಚಿಸಿದ್ದರು. ಆದರೂ ಕಂಪನಿಗಳು ಬಾಡಿಗೆ ಪಾವತಿಸಿರಲಿಲ್ಲ.

‘ನಿಮ್ಮ ದಿವ್ಯ ನಿರ್ಲಕ್ಷ್ಯವೇ ಈ ವಿಳಂಬಕ್ಕೆ ಕಾರಣ. ಬಾಡಿಗೆ ವಸೂಲಿ ಇನ್ನೂ ತಡವಾದರೆ, ನಿಮ್ಮ ಮೇಲೆಯೇ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಕ್ಕೂರು ವೈಮಾನಿಕ ಶಾಲೆಯ ಸುತ್ತಮುತ್ತ ನಿರ್ಮಾಣಗೊಂಡಿರುವ ಕಟ್ಟಡಗಳು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯವುದು ಕಡ್ಡಾಯ. ಸಾಕಷ್ಟು ಕಟ್ಟಡಗಳು ನಿರಾಕ್ಷೇಪಣಾ ಪತ್ರ ಪಡೆದಿಲ್ಲ. ಈ ಬಗ್ಗೆ ಸಮೀಕ್ಷೆ ನಡೆಸುವಂತೆಯೂ ಸಚಿವರು ಸೂಚಿಸಿದರು.

ನ್ಯಾಷನಲ್‌ ಏರೋಸ್ಪೇಸ್ ಲ್ಯಾಬೊ ರೇಟರಿ, ಜ್ಯೂಪಿಟರ್‌ ಏವಿಯೇಷನ್‌, ಡೆಕ್ಕನ್‌ ಚಾರ್ಟರ್‌ ಲಿಮಿಟೆಡ್‌, ಅಗ್ನಿ ಏರೋಸ್ಪೇಸ್ ಅಡ್ವೆಂಚರ್‌ ಅಕಾಡೆಮಿ ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿವೆ.

ಆಗಸ್ಟ್‌ನಿಂದ ವೈಮಾನಿಕ ಶಾಲೆ ಪುನರಾರಂಭ:ಮೂರು ವರ್ಷಗಳಿಂದ ಸ್ಥಗಿತವಾಗಿದ್ದ ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆಗಸ್ಟ್‌ ನಿಂದ ಆರಂಭವಾಗಲಿದೆ. ಆದಷ್ಟು ಶೀಘ್ರವೇ ಬೋಧಕ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ನಾರಾಯಣಗೌಡ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.