ADVERTISEMENT

ಉದ್ಯಾನದಲ್ಲಿ ನಟಿ ಸಂಯುಕ್ತ ಹೆಗಡೆ ಜೊತೆ ಗಲಾಟೆ; ಕವಿತಾ ರೆಡ್ಡಿ ಬಂಧನ–ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 16:21 IST
Last Updated 8 ಸೆಪ್ಟೆಂಬರ್ 2020, 16:21 IST
ಕವಿತಾ ರೆಡ್ಡಿ ಮತ್ತು ನಟಿ ಸಂಯುಕ್ತ ಹೆಗಡೆ
ಕವಿತಾ ರೆಡ್ಡಿ ಮತ್ತು ನಟಿ ಸಂಯುಕ್ತ ಹೆಗಡೆ   

ಬೆಂಗಳೂರು: ಎಚ್‌ಎಸ್‌ಆರ್‌ ಲೇಔಟ್‌ನ ಅಗರ ಕೆರೆ ಉದ್ಯಾನದಲ್ಲಿ ವ್ಯಾಯಾಮ ಮಾಡುತ್ತಿದ್ದ ನಟಿ ಸಂಯುಕ್ತ ಹೆಗಡೆ ಅವರ ಜೊತೆ ಗಲಾಟೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಆರೋಪದಡಿ ಕವಿತಾ ರೆಡ್ಡಿ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಠಾಣಾ ಜಾಮೀನು ಮೇಲೆ ಬಿಡುಗಡೆ ಸಹ ಮಾಡಿದ್ದಾರೆ.

‘ಗಲಾಟೆ ಸಂಬಂಧ ಸಂಯುಕ್ತ ಅವರು ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್‌ ದಾಖಲಾಗಿತ್ತು. ಇದೀಗ ಕವಿತಾ ರೆಡ್ಡಿ ಅವರನ್ನು ಬಂಧಿಸಲಾಗಿದೆ. ಇವರು ಕಾಂಗ್ರೆಸ್ ಕಾರ್ಯಕರ್ತರೆಂದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

" ಸಂಯುಕ್ತ ಹೆಗಡೆ ಅವರು ನಿತ್ಯವೂ ಉದ್ಯಾನದಲ್ಲಿ ವ್ಯಾಯಾಮ ಮಾಡಿಕೊಂಡು ಹೋಗುತ್ತಿದ್ದರು. ಶುಕ್ರವಾರ ಸಂಜೆ 5 ಗಂಟೆಯಲ್ಲಿ ಸ್ನೇಹಿತರ ಜತೆ ವ್ಯಾಯಾಮ ಮಾಡುತ್ತಿದ್ದರು. ಅಗರ ಕೆರೆ ಸಮಿತಿ ಸದಸ್ಯೆ ಕವಿತಾ ರೆಡ್ಡಿ, ಅನಿಲ್ ರೆಡ್ಡಿ ಹಾಗೂ ಇತರರು, 'ಸಾರ್ವಜನಿಕವಾಗಿ ತುಂಡು ಬಟ್ಟೆ ಧರಿಸಿ ಅಸಭ್ಯವಾಗಿ ವರ್ತಿಸುತ್ತಿದ್ದೀರಿ' ಎಂದು ಅವಾಚ್ಯವಾಗಿ ನಿಂದಿಸಿ, ಸಂಯುಕ್ತ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ಸಂಗತಿ ಸಂಯುಕ್ತ ಅವರ ದೂರಿನಲ್ಲಿದೆ".

ADVERTISEMENT

‘ಡ್ರಗ್ಸ್ ಸೇವಿಸಿ ವ್ಯಾಯಾಮಕ್ಕೆ ಉದ್ಯಾನಕ್ಕೆ ಬಂದಿದ್ದೀರಿ’ ಎಂದು ಆರೋಪಿಗಳು ನಿಂದಿಸಿದ್ದರು. ಗಲಾಟೆ ದೃಶ್ಯವನ್ನು ಸಂಯುಕ್ತ ಅವರು ವಿಡಿಯೊ ಮಾಡಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದೇ ವಿಡಿಯೊವನ್ನು ಪುರಾವೆಯಾಗಿ ಪರಿಗಣಿಸಲಾಗಿದೆ. ತಲೆಮರೆಸಿಕೊಂಡಿರುವ ಅನಿಲ್ ರೆಡ್ಡಿ ಮತ್ತು ಇತರರಿಗಾಗಿ ಹುಡುಕಾಟ ನಡೆದಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.