ADVERTISEMENT

ಕೊರೊನಾ ಜಯಿಸೋಣ| ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಮನೆಮದ್ದು

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 4:50 IST
Last Updated 2 ಜುಲೈ 2020, 4:50 IST
ಡಾ. ಮಹೇಶ್‌ ದೇಸಾಯಿ 
ಡಾ. ಮಹೇಶ್‌ ದೇಸಾಯಿ    

ಬೆಂಗಳೂರು: ನಾವು ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ರೋಗ ನಿರೋಧಕ ಶಕ್ತಿ ಹೆಚ್ಚಿದರೆ ಕೊರೊನಾ ಸೋಂಕಿನ ವಿರುದ್ಧ ಸುಲಭವಾಗಿ ಹೋರಾಡಬಹುದು ಎನ್ನುತ್ತಾರೆ ಆಯುರ್ವೇದ ವೈದ್ಯರು.

ನೀರಿಗೆ ಶುಂಠಿ ತುಂಡು ಅಥವಾ ಅರಿಷಿಣ ಹಾಕಿ ಕುದಿಸಿ, ಆರಿಸಿ ಬೆಳಿಗ್ಗೆ ಮತ್ತು ರಾತ್ರಿ ಕುಡಿಯಬೇಕು. ಅರಿಷಿಣ, ದನಿಯಾ, ಜೀರಿಗೆ, ಜೇಷ್ಠಮಧು, ಅಶ್ವಗಂಧ, ಓಂಕಾಳು (ಅಜ್ವಾನ) ತಲಾ 20 ಗ್ರಾಂ ಹಾಗೂ ಮೆಣಸು ಮತ್ತು ಶುಂಠಿಯನ್ನು ತಲಾ 10 ಗ್ರಾಂ ತೆಗೆದುಕೊಂಡು ಪುಡಿ ಮಾಡಿಕೊಳ್ಳಬೇಕು. ಒಂದು ಗ್ಲಾಸ್‌ ನೀರಿಗೆ ಒಂದು ಚಮಚದಷ್ಟು ಈ ಪುಡಿ ಹಾಕಿ ಕಷಾಯ ಮಾಡಿಕೊಳ್ಳಬಹುದು. ಚಹಾ, ಕಾಫಿ ಬದಲು ಈ ಕಷಾಯ ಕುಡಿಯಬಹುದು.

ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು. ಟೀಯಲ್ಲಿ ಶುಂಠಿ, ಲವಂಗ, ಲಿಂಬೆ ಹುಲ್ಲು ಹಾಕಿಕೊಳ್ಳುವುದು ಉತ್ತಮ. ನುಗ್ಗೆ ಸೊಪ್ಪಿನಲ್ಲಿ ಹೆಚ್ಚಿನ ಪೋಷಕಾಂಶ ಇರುವುದರಿಂದ ಆಹಾರದಲ್ಲಿ ಇದನ್ನು ಹೆಚ್ಚೆಚ್ಚು ಉಪಯೋಗಿಸಬೇಕು. ಅಮೃತಬಳ್ಳಿ, ಚಕ್ರಬಳ್ಳಿ ಸೊಪ್ಪನ್ನು ತರಕಾರಿ ಸಲಾಡ್‌ ಜೊತೆಗೆ ಬಳಸಿಕೊಳ್ಳಬಹುದು. ಚಪಾತಿ, ರೊಟ್ಟಿ, ಬ್ರೆಡ್‌ ಜೊತೆಗೆ ಜೇನುತುಪ್ಪ ಬಳಸಬೇಕು. ಈ ಎಲ್ಲ ಪದಾರ್ಥಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುತ್ತಾರೆ ವೈದ್ಯೆ ವಸುಂಧರಾ ಭೂಪತಿ.

ADVERTISEMENT

ನಿಂಬೆ ಹನಿ ಹಾಕಿದ ನೀರು ಅಥವಾ ಅರಿಷಿಣ ಹಾಕಿ ಕುದಿಸಿದ ನೀರನ್ನು ಆರಿಸಿ, ಅದನ್ನು ಸ್ಯಾನಿಟೈಸರ್‌ ರೀತಿ ಬಳಸಬಹುದು. ಐಸ್‌ಕ್ರೀಂ, ತಂಪು ಪಾನೀಯ ಅಥವಾ ತಂಗಳು ಆಹಾರ ಸೇವಿಸಬಾರದು. ಬಿಸಿಯಾದ ಆಹಾರ ಸೇವನೆ ಮಾಡಬೇಕು. ಚಹಾ, ಕಾಫಿ ಬದಲು ಶುಂಠಿ ಕಷಾಯ, ಬಿಸಿ ನೀರು ಹೆಚ್ಚು ಕುಡಿಯಬೇಕು. ಮನೆಯಿಂದ ಹೊರಗೆ ಹೋದಾಗ ಎಲ್ಲೆಂದರಲ್ಲಿ ಉಗುಳುವುದು ಮಾಡಬಾರದು ಎಂದು ಆಯುರ್ವೇದ ವೈದ್ಯ ಡಾ. ಮಹೇಶ್‌ ದೇಸಾಯಿ ಸಲಹೆ ನೀಡುತ್ತಾರೆ.

*
ಹಾಲಿನ ಜೊತೆಗೆ ಖರ್ಜೂರ, ಒಣ ದ್ರಾಕ್ಷಿ ಹಾಗೂ ಏಲಕ್ಕಿ ಹಾಕಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಿತ್ಯ ಹತ್ತು ನಿಮಿಷ ಪ್ರಾಣಾಯಾಮ ಮಾಡುವುದು ಉತ್ತಮ.
-ಡಾ. ಮಹೇಶ್‌ ದೇಸಾಯಿ, ಆಯುರ್ವೇದ ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.