ADVERTISEMENT

ಕಣ್ಣೀರಿಟ್ಟು ಸಂದೇಶ ಕಳುಹಿಸಿದ ಬೆಂಗಳೂರು ಪೊಲೀಸ್

ಮಹಾರಾಷ್ಟ್ರದಲ್ಲಿ ಕಾನ್‌ಸ್ಟೆಬಲ್‌ಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 19:45 IST
Last Updated 28 ಏಪ್ರಿಲ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಹಾರಾಷ್ಟ್ರದಲ್ಲಿ ಪೊಲೀಸ್ ಕಾನ್‌ಸ್ಟೆಬಲೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ತವ್ಯದ ಸ್ಥಳದಿಂದಲೇ ಅವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರಗೆ ಕರೆದೊಯ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೊ ನೋಡಿ ಬೆಂಗಳೂರಿನ ಪೊಲೀಸರು ಸಹ ಮರುಕಪಡುತ್ತಿದ್ದಾರೆ.

ವಿಡಿಯೊ ಉಲ್ಲೇಖಿಸಿ ಬೆಂಗಳೂರಿನ ಪೊಲೀರೊಬ್ಬರು, ಮಹಾರಾಷ್ಟ್ರದ ಕಾನ್‌ಸ್ಟೆಬಲ್ ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಜನರ ನಿಷ್ಕಾಳಜಿಗೆ ಬೇಸರ ವ್ಯಕ್ತಪಡಿಸಿ ಸಂದೇಶವೊಂದನ್ನು ತಮ್ಮ ಪೊಲೀಸ್ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹರಿಬಿಟ್ಟಿದ್ಆರೆ. ಅವರನ್ನು ಓದಿ ಸಹೋಗ್ಗಿಯೋಗಳು ಸಹ ಮರುಕಪಡುತ್ತಿದ್ದು, ಅದೇ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

‘ನೀವು ಬೇರೆ ರಾಜ್ಯದ ಪೊಲೀಸ್. ನೀವು ಯಾರೆಂಬುದೇ ನಮಗೆ ಗೊತ್ತಿಲ್ಲ. ಆದರೆ, ಕೊರೊನಾ ಸೋಂಕಿತರಾಗಿ ಆಂಬುಲೆನ್ಸ್ ಹತ್ತುವುದು ನೋಡಿ ನನಗೆ ಕಣ್ಣೀರು ಬಂತು. ನಿಮ್ಮ ಜಾಗದಲ್ಲಿ ನಾವಿರುವ ಹಾಗೆಯೇ ಭಾಸವಾಯಿತು. ಯಾವ ತಪ್ಪಿಗೆ ಈ ಶಿಕ್ಷೆ? ನಿಮಗೂ ಕೂಡ ತಂದೆ- ತಾಯಿ, ಹೆಂಡತಿ-ಮಕ್ಕಳು, ಸಹೋದರ-ಸಹೋದರಿಯರು ಇರಬಹುದು. ನಿಮ್ಮ ಈ ಸ್ಥಿತಿ ನೋಡಿ ಅವರಿಗೆ ಎಷ್ಟು ನೋವಾಗಿರಬೇಡ?’ ಎಂದು ಸಂದೇಶದಲ್ಲಿ ಬರೆಯಲಾಗಿದೆ.

ADVERTISEMENT

‘ಅಮೆರಿಕ, ಇಟಲಿ, ಫ್ರಾನ್ಸ್ ಸೇರಿ ಹಲವು ದೇಶಗಳಲ್ಲಿ ಸಾಲು ಸಾಲು ಹೆಣಗಳು ಬೀಳುತ್ತಿವೆ. ನಮ್ಮಲ್ಲಿ ಅಂಥ ಸ್ಥಿತಿ ಇಲ್ಲ. ಬರುವುದೂ ಬೇಡ. ದಯವಿಟ್ಟು ಜನರೆಲ್ಲರೂ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಆರೋಗ್ಯ ಕಾಪಾಡಿಕೊಂಡು ಜೀವ ಉಳಿಸಿಕೊಳ್ಳಬೇಕು. ಜನರಿಗಾಗಿ ರಸ್ತೆಗೆ ಬಂದ ಪೊಲೀಸರು ಯಾವ ತಪ್ಪಿಗೆ ಸೋಂಕು ಅಂಟಿಸಿಕೊಳ್ಳಬೇಕು? ಜನರೆಲ್ಲರೂ ತಮ್ಮ ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಬೇಕು’ ಎಂದು ಪತ್ರದಲ್ಲಿ ಸಿಬ್ಬಂದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.