ಬೆಂಗಳೂರು: ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳ ಜೊತೆ ಅವರ ಬಂಧುಗಳು ಸಂವಹನ ನಡೆಸುವುದಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ಪ್ರತಿ ಆಸ್ಪತ್ರೆಯಲ್ಲಿ ಸಹಾಯ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.
ಬಿಬಿಎಂಪಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಂಗಳವಾರ ಹಮ್ಮಿಕೊಂಡಿದ್ದ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರ ಜೊತೆ ಬಂಧುಗಳು ನೇರವಾಗಿ ಮಾತನಾಡುವುದಕ್ಕೆ ಸದ್ಯ ಅವಕಾಶ ಸಿಗುತ್ತಿಲ್ಲ. ಸಹಾಯಕೇಂದ್ರಕ್ಕೆ ಬರುವ ಬಂಧುಗಳು ರೋಗಿಗಳ ಜೊತೆ ದೂರವಾಣಿ ಮೂಲಕ ಮಾತನಾಡಲು ಅವಕಾಶ ಕಲ್ಪಿಸಬಹುದು. ವಾರ್ಡ್ಗಳ ಹಾಗೂ ಚಿಕಿತ್ಸೆಯ ವ್ಯವಸ್ಥೆ ಕುರಿತು ವಿಡಿಯೊಗಳನ್ನು ತೋರಿಸಬಹುದು. ಈ ಕೇಂದ್ರಗಳಲ್ಲಿ ಮೂವರು ಸಿಬ್ಬಂದಿ ನೇಮಿಸಲಾಗುತ್ತದೆ. ದಿನದ 24 ಗಂಟೆಯೂ ಇದು ಕಾರ್ಯ ನಿರ್ವಹಿಸಲಿದೆ’ ಎಂದರು.
‘ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು, ಗುಣಮುಖರಾದ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಲು, ರೋಗಿ ಸಾವಿಗೀಡಾದರೆ ಮೃತದೇಹ ಹಸ್ತಾಂತರಿಸಲು, ಈ ಸಹಾಯಕೇಂದ್ರ ನೆರವಾಗಲಿದೆ. ರೋಗ ವಾಸಿಯಾದವರು ಅನಗತ್ಯವಾಗಿ ಆಸ್ಪತ್ರೆಯಲ್ಲೇ ಉಳಿದುಕೊಂಡರೆ ಅಗತ್ಯ ಇರುವ ಇತರ ರೋಗಿಗಳಿಗೆ ಸೌಕರ್ಯ ಸಿಗದಂತಾಗುತ್ತದೆ. ಇದನ್ನು ಸಹಾಯಕೇಂದ್ರ ಆರಂಭಿಸಿದರೆ ಇದನ್ನು ತಡೆಯಬಹುದು. ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದಕ್ಕಿಂತ ಹೆಚ್ಚು ಶುಲ್ಕಪಡೆಯುವುದನ್ನು ನಿಯಂತ್ರಿಸುವುದಕ್ಕೂ ಇದು ನೆರವಾಗಲಿದೆ’ ಎಂದು ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.