ADVERTISEMENT

ನೆಕ್ಲೇಸ್‌ಗಾಗಿ ಹತ್ಯೆ; ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 19:57 IST
Last Updated 13 ಜೂನ್ 2019, 19:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪುರಾತನ ಕಾಲದ ವಜ್ರದ ನೆಕ್ಲೇಸ್ ದೋಚುವುದಕ್ಕಾಗಿ ಉದಯ್ ರಾಜಸಿಂಗ್‌ (61) ಎಂಬುವರನ್ನು ಹತ್ಯೆ ಮಾಡಿ, ಅವರ ಪತ್ನಿಸುಶೀಲಾ (57) ಅವರ ಕೊಲೆಗೆ ಯತ್ನಿಸಿದ್ದ ಆರು ಅಪರಾಧಿಗಳಿಗೆ ನಗರದ 57ನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಬ್ಯಾಂಕೊಂದರ ನಿವೃತ್ತ ಉದ್ಯೋಗಿ ಆಗಿದ್ದ ಉದಯ್, ಪತ್ನಿ ಜೊತೆ ಲಕ್ಕಸಂದ್ರದಲ್ಲಿ ವಾಸವಿದ್ದರು. ತಮ್ಮ ಬಳಿ ಇದ್ದ ₹ 18 ಕೋಟಿ ಮೌಲ್ಯದ ವಜ್ರದ ನೆಕ್ಲೇಸ್ ಮಾರಾಟ ಮಾಡಲು ಮುಂದಾಗಿದ್ದರು. ಗ್ರಾಹಕರ ಸೋಗಿನಲ್ಲಿ 2014ರ ಮಾರ್ಚ್‌ 25ರಂದು ಮನೆಗೆ ನುಗ್ಗಿದ್ದ ಅಪರಾಧಿಗಳು ಕೃತ್ಯ ಎಸಗಿದ್ದರು.

ಸುಶೀಲಾ ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಆಡುಗೋಡಿ ಠಾಣೆ ಇನ್‌ಸ್ಪೆಕ್ಟರ್ ಎಸ್.ಸುಧೀರ್, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್‌. ಸುನೀಲ್‌ಕುಮಾರ್ ಸಿಂಗ್, ಗುರುವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್‌.ಎಸ್.ದೇವೇಂದ್ರಪ್ಪ ವಾದಿಸಿದ್ದರು.

‘ಅಪರಾಧಿಗಳಿಗೆ ತಲಾ ₹1 ಲಕ್ಷ ದಂಡವನ್ನೂ ವಿಧಿಸಲಾಗಿದ್ದು, ಆ ಹಣದಲ್ಲಿ ₹ 3 ಲಕ್ಷವನ್ನು ಸುಶೀಲಾ ಅವರಿಗೆ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ’ ಎಂದು ದೇವೇಂದ್ರಪ್ಪ ಹೇಳಿದರು.

ಪ್ರಕರಣದ ವಿವರ: ‘ಉದಯ್ ಅವರು ನೆಕ್ಲೇಸ್‌ ಖರೀದಿಸುವ ಗ್ರಾಹಕರನ್ನು ಹುಡುಕಿಕೊಡುವಂತೆ ಅಪರಾಧಿ ಅಭಿಷೇಕ್‌ಗೆ ಹೇಳಿದ್ದರು. ನಿತ್ಯವೂ ಮನೆಗೆ ಬಂದು ಹೋಗುತ್ತಿದ್ದ ಆತ, ದಂಪತಿಯನ್ನು ಕೊಂದು ಆಭರಣವನ್ನು ದೋಚಿಕೊಂಡು ಹೋಗಲು ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು. ‘ಮೈಸೂರು, ಹಾಸನ ಹಾಗೂ ಮಂಡ್ಯದ ಸ್ನೇಹಿತರನ್ನು ಸಂಪರ್ಕಿಸಿದ್ದ ಆತ ಕೊಲೆಗೆ ಸಿದ್ಧತೆ ಮಾಡಿಕೊಂಡಿದ್ದ. ಅವರನ್ನೇ ಗ್ರಾಹಕರೆಂದು ಮನೆಗೆ ಕರೆದುಕೊಂಡು ಹೋಗಿದ್ದ ಅಭಿಷೇಕ, ನೆಕ್ಲೇಸ್ ತೋರಿಸಲು ಹೇಳಿ ಅವರ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು’ ಎಂದು ವಿವರಿಸಿದರು.

‘ಮೈಸೂರು ಹಾಗೂ ಬೆಂಗಳೂರಿನ ಹಲವರ ಬಳಿ ಆರೋಪಿಗಳು ಸಾಲ ಮಾಡಿದ್ದರು.₹18 ಕೋಟಿ ಮೌಲ್ಯದ ವಜ್ರದ ನೆಕ್ಲೇಸನ್ನು ಲಂಡನ್‌ನ ಆಭರಣ ವ್ಯಾಪಾರಿಯೊಬ್ಬರಿಗೆ ₹ 40 ಕೋಟಿಗೆ ಮಾರಾಟ ಮಾಡಿ ಬಂದ ಹಣದಿಂದ ಸಾಲ ತೀರಿಸಲು ಆರೋಪಿಗಳು ಯೋಜಿಸಿದ್ದರು’ ಎಂದು ಪೊಲೀಸರು ಹೇಳಿದರು.

ಶಿಕ್ಷೆಗೊಳಗಾದ ಅಪರಾಧಿಗಳು
ಮೈಸೂರಿನ ಅಭಿಷೇಕ್ ಅಲಿಯಾಸ್ ಶ್ರೀರಂಗ, ದಿಲೀಪ್ ಕುಮಾರ್, ಶ್ರೀಧರ್, ಅಮಿತ್ ಕುಮಾರ್, ಮಂಡ್ಯ ಜಿಲ್ಲೆಯ ಸತೀಶ್,ಹಾಸನ ಜಿಲ್ಲೆಯ ಕಿರಣ್

ಆರೋಪಿಗಾಗಿ ಶೋಧ
‘ಸದ್ಯ ಆರು ಮಂದಿಗೆ ಶಿಕ್ಷೆಯಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿ ಮಧುಸೂದನ್ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಶೋಧ ನಡೆಸಲಾಗುತ್ತಿದೆ’ ಎಂದು ಆಡುಗೋಡಿ ಪೊಲೀಸರು ಹೇಳಿದರು. ‘ಎಂಬಿಎ ಪದವೀಧರನಾಗಿದ್ದ ಆತ,ಮಲ್ಲೇಶ್ವರದಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಲ್ಲಿ ಸಹಾಯಕ ಮ್ಯಾನೇಜರ್ ಆಗಿ ಕೆಲ ವರ್ಷ ಕೆಲಸ ಮಾಡಿದ್ದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.